ಸ್ಫೋಟಕ ಸುದ್ದಿ: ಇವಿಎಂ ಹ್ಯಾಕ್ ಬಗ್ಗೆ ತಿಳಿದಿದ್ದಕ್ಕೆ ಗೋಪಿನಾಥ್ ಮುಂಡೆ ಹತ್ಯೆ?
ಲಂಡನ್, ಜನವರಿ 21: ಭಾರತದಲ್ಲಿ ನಡೆದ ಚುನಾವಣೆಗಳಲ್ಲಿ ಬಳಸುವ ವಿದ್ಯುನ್ಮಾನ ಮತ ಯಂತ್ರಗಳನ್ನು (ಇವಿಎಂ) ಹ್ಯಾಕ್ ಮಾಡಲು ಸಾಧ್ಯವಿದ್ದು, 2014ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮತಯಂತ್ರಗಳನ್ನು ಹ್ಯಾಕ್ ಮಾಡಲಾಗಿತ್ತು ಎಂದು ಅಮೆರಿಕ ಮೂಲದ ಸೈಬರ್ ತಜ್ಞರು ಪ್ರತಿಪಾದಿಸಿದ್ದಾರೆ.
ಅಲ್ಲದೆ, ಇವಿಎಂ ಹ್ಯಾಕ್ ಬಗ್ಗೆ ಬಿಜೆಪಿ ನಾಯಕ ಗೋಪಿನಾಥ್ ಮುಂಡೆ ಅವರಿಗೆ ಮಾಹಿತಿ ಇತ್ತು. ಹೀಗಾಗಿಯೇ ಅವರನ್ನು 2014ರಲ್ಲಿ ಹತ್ಯೆ ಮಾಡಲಾಯಿತು ಎಂದೂ ಅವರು ಹೇಳಿದ್ದಾರೆ.
ಇವಿಎಂ ಹ್ಯಾಕ್ ಕುರಿತು ಇಂಡಿಯನ್ ಜರ್ನಲಿಸ್ಟ್ಸ್ ಸಂಸ್ಥೆ (ಯುರೋಪ್) ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಅಮೆರಿಕದ ಸೈಬರ್ ತಜ್ಞ ಸಯೀದ್ ಶುಜಾ ಹೇಳಿದ್ದಾರೆ. ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಗುಜರಾತ್ ಚುನಾವಣೆಗಳಲ್ಲಿ ಇವಿಎಂ ದುರ್ಬಳಕೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಇವಿಎಂ ಹ್ಯಾಕ್ ಮಾಡುವುದು ಹೇಗೆ ಎಂದು ಪ್ರಾತ್ಯಕ್ಷಿಕೆ ನೀಡಿದ ಇವಿಎಂ ಬಗ್ಗೆ ವಿವಿಧ ಮಾಹಿತಿಗಳನ್ನು ನೀಡಿದ್ದಾರೆ.
ಬ್ಲೂಟೂತ್ ಬಳಸಿ ಇವಿಎಂ ಹ್ಯಾಕ್ ಮಾಡಬಹುದು. ಗ್ರಾಫೈಟ್ ಹೊಂದಿರುವ ಟ್ರಾನ್ಸಿಸ್ಟರ್ ಬಳಸಿ ಲೋಕಸಭಾ ಚುನಾವಣೆಯಲ್ಲಿ ಹ್ಯಾಕ್ ಮಾಡಲಾಗಿದ್ದು ಎಂದು ಹೇಳಿದ್ದಾರೆ.
ಇವಿಎಂ ಮಾಹಿತಿಗಳನ್ನು 7 ಹರ್ಟ್ಸ್ ಕಡಿಮೆ ಕಂಪನಾಂಕದ ಮಾಡ್ಯುಲೇಟರ್ ಬಳಸಿ ವೈರ್ಲೆಸ್ ಸಂವಹನವಾಗಿ ಮಾಹಿತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಅವಕಾಶವಿದೆ.

2014ರಲ್ಲಿ ಚುನಾವಣೆ ಫಲಿತಾಂಶ ಹೊರಬಿದ್ದ ತಿಂಗಳಲ್ಲಿಯೇ ಬಿಜೆಪಿ ಮುಖಂಡ ಗೋಪಿನಾಥ್ ಮುಂಡೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಆದರೆ, ಸರ್ಕಾರ ನಡೆಸಿದ ಇವಿಎಂ ಹ್ಯಾಕಿಂಗ್ ವಂಚನೆ ಬಗ್ಗೆ ತಿಳಿದಿದ್ದರಿಂದಲೇ ಗೋಪಿನಾಥ್ ಮುಂಡೆ ಅವರನ್ನು ಹತ್ಯೆ ಮಾಡಲಾಯಿತು ಎಂದು ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿಗೆ ಚುನಾವಣೆಯಲ್ಲಿ ಗೆಲ್ಲಲು ಕಡಿಮೆ ಕಂಪನಾಂಕದ ಸಿಗ್ನಲ್ ಬಳಸಿ ಇವಿಎಂ ಹ್ಯಾಕ್ ಮಾಡಲು ರಿಲಯನ್ಸ್ ಕಮ್ಯುನಿಕೇಷನ್ ಸಹಾಯ ಮಾಡಿತ್ತು. ಈ ಬಗ್ಗೆ ವಿಸ್ತೃತ ಲೇಖನ ಬರೆಯಲು ಗೌರಿ ಲಂಕೇಶ್ ಮುಂದಾಗಿದ್ದರು. ಈ ಕಾರಣದಿಂದ ಅವರ ಹತ್ಯೆ ಮಾಡಲಾಯಿತು ಎಂದು ಸಯೀಶ್ ಶುಜಾ ಹೇಳಿದ್ದಾರೆ.
ಅಲ್ಲದೆ, ಇವಿಎಂ ಹ್ಯಾಕ್ ಮಾಡುವುದು ಹೇಗೆ ಎಂದು ತಿಳಿಯಲು ಸಮಾಜವಾದಿ ಪಕ್ಷ, ಬಿಎಸ್ಪಿ ಮತ್ತು ಎಎಪಿಗಳು ಕೂಡ ತಮ್ಮನ್ನು ಸಂಪರ್ಕಿಸಿದ್ದರು ಎಂದು ಶುಜಾ ತಿಳಿಸಿದ್ದಾರೆ.
ಭಾರತದಲ್ಲಿ ನೆಲೆಸಿದ್ದ ಶುಜಾ 2014ರಲ್ಲಿ ಅಮೆರಿಕಕ್ಕೆ ತೆರಳಿ ರಾಜಕೀಯ ಆಶ್ರಯ ಪಡೆದಿದ್ದರು. ತನ್ನ ತಂಡದ ಕೆಲವು ಸದಸ್ಯರ ಹತ್ಯೆ ನಡೆದಿದ್ದರಿಂದ ಜೀವ ಉಳಿಸಿಕೊಳ್ಳಲು ದೇಶ ತೊರೆದಿದ್ದಾಗಿ ಹೇಳಿಕೊಂಡಿದ್ದರು.
ಇವಿಎಂ ಹ್ಯಾಕ್ ಮಾಡುವ ಮೂಲಕ ಬಿಜೆಪಿ ಚುನಾವಣೆಯಲ್ಲಿ ಅಕ್ರಮವಾಗಿ ಗೆದ್ದು ಅಧಿಕಾರ ಹಿಡಿದಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಆದರೆ, ಇವಿಎಂ ಹ್ಯಾಕ್ ಮಾಡಲು ಸಾಧ್ಯವೇ ಇಲ್ಲ ಎಂದು ಚುನಾವಣಾ ಆಯೋಗ ಪ್ರತಿಪಾದಿಸುತ್ತಿದೆ.
ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಕೂಡ ಭಾಗವಹಿಸಿದ್ದರು.
ಅಮೆರಿಕದ ಸೈಬರ್ ತಜ್ಞರ ವಾದಗಳನ್ನು ಕೇಂದ್ರ ಸಚಿವ ಅರುಣ್ ಜೇಟ್ಲಿ ತಳ್ಳಿ ಹಾಕಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ ಸಿದ್ಧವಾಗಿ, ಪ್ರೋಗ್ರಾಮಿಂಗ್ ಆದ ಹಾಗೂ ಚುನಾವಣೆ ನಡೆದ ಇವಿಎಂಗಳನ್ನು ಚುನಾವಣಾ ಆಯೋಗದೊಂದಿಗೆ ಸೇರಿಕೊಂಡು ಬಿಜೆಪಿ ಹ್ಯಾಕ್ ಮಾಡಲು ಸಾಧ್ಯವೇ? ಎಂದು ಜೇಟ್ಲಿ ಪ್ರಶ್ನಿಸಿದ್ದಾರೆ.












Click it and Unblock the Notifications