Tungabhadra Dam: ತುಂಗಭದ್ರಾ ಡ್ಯಾಂ ಒಳಹರಿವು ಎಷ್ಟು?, ಆಂಧ್ರ ಪ್ರದೇಶ ಶಾಸಕರ ಭೇಟಿ
ಕೊಪ್ಪಳ, ಆಗಸ್ಟ್ 20: ಕೊಪ್ಪಳದ ಮುನಿರಾಬಾದ್ನಲ್ಲಿರುವ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ಗೇಟ್ ದುರಸ್ತಿ ಕಾರ್ಯ ಅಂತ್ಯಗೊಂಡಿದೆ. ಗೇಟ್ನಿಂದ ಸೋರಿಕೆಯಾಗುತ್ತಿದ್ದು ನೀರನ್ನು ಸಹ ನಿಲ್ಲಿಸಲಾಗಿದೆ. ಇದರಿಂದಾಗಿ ಡ್ಯಾಂನ ನೀರಿನ ಮಟ್ಟದಲ್ಲಿ ಮತ್ತೆ ಏರಿಕೆಯಾಗಿದೆ. ಆಂಧ್ರ ಪ್ರದೇಶದ ಶಾಸಕರ ನಿಯೋಗ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಮಾಹಿತಿಯನ್ನು ಸಂಗ್ರಹ ಮಾಡಿದೆ.
ಡ್ಯಾಂ ಗೇಟ್ ನಿರ್ಮಾಣ ಹಾಗೂ ಸುರಕ್ಷತೆ ತಜ್ಞ ನಿವೃತ್ತ ಇಂಜಿನಿಯರ್ ಕನ್ನಯ್ಯ ನಾಯ್ಡು ನೇತೃತ್ವದಲ್ಲಿ ಕಾರ್ಮಿಕರು ಶನಿವಾರ ತುಂಗಭದ್ರಾ ಡ್ಯಾಂನ 19ನೇ ಕ್ರಸ್ಟ್ಗೇಟ್ಗೆ ಎಲ್ಲಾ 5 ಎಲಿಮೆಂಟ್ಗಳನ್ನು ಅಳವಡಿಕೆ ಮಾಡುವ ಕಾರ್ಯಾಚರಣೆ ಪೂರ್ಣಗೊಳಿಸಿದ್ದಾರೆ. ಈಗ ಗೇಟ್ ಮೂಲಕ ನೀರಿನ ಹೊರ ಹರಿವು ಸಂಪೂರ್ಣ ಬಂದ್ ಆಗಿದೆ. 4 ಅಡಿ ಎತ್ತರದ 5 ಎಲಿಮೆಂಟ್ಗಳನ್ನು ಕೂರಿಸಿ, ಗೇಟ್ ದುರಸ್ತಿಗೊಳಿಸಲಾಗಿದೆ.

ಈ ಕಾರ್ಯಾಚರಣೆ ಮೂಲಕ ಸುಮಾರು 33 ಟಿಎಂಸಿ ಅಡಿ ನೀರು ಉಳಿದಿದೆ ಎಂದು ವಿಜಯನಗರ ಜಿಲ್ಲಾಡಳಿತ ಮಾಹಿತಿ ನೀಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ 'ತುಂಗಭದ್ರಾ ಜಲಾಶಯದ ನೀರನ್ನು ಆಧರಿಸಿ ಎರಡು ಬೆಳೆ ಬೆಳೆಯುವ ರೈತರು ಇನ್ನು ನಿಶ್ಚಿಂತರಾಗಿ ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳಬಹುದು. ನಾಡಿನ ಅನ್ನದಾತರು ಬಹುದೊಡ್ಡ ಸಂಕಷ್ಟದಿಂದ ಪಾರಾದದ್ದು ನನಗೆ ಖುಷಿ ನೀಡಿದೆ' ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ದುರಸ್ತಿ ಕಾರ್ಯದಲ್ಲಿ ಪಾಲ್ಗೊಂಡ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಕೆ ಮಾಡಿದ್ದರು.
ಡ್ಯಾಂ ಬೇಗ ಭರ್ತಿಯಾಗುವ ವಿಶ್ವಾಸ: ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ 1633 ಅಡಿ ಡ್ಯಾಂನಲ್ಲಿ 1625.13 ಅಡಿ ನೀರಿನ ಸಂಗ್ರಹವಿದೆ. ಡ್ಯಾಂ ಒಟ್ಟು 105.79 ಟಿಎಂಸಿ ಅಡಿ ನೀರು ಸಾಮರ್ಥ್ಯ ಹೊಂದಿದೆ. ಸದ್ಯ ಡ್ಯಾಂನಲ್ಲಿ 76.91 ಟಿಎಂಸಿ ಅಡಿ ನೀರಿನ ಸಂಗ್ರವಿದೆ.
ಡ್ಯಾಂಗೆ ಒಳಹರಿವು 31,033 ಕ್ಯುಸೆಕ್. ಮಲೆನಾಡು ಭಾಗದಲ್ಲಿ ಮಳೆಯಾಗುತ್ತಿದೆ. ಆಗಸ್ಟ್ ಕೊನೆಯವಾರ ಇನ್ನೂ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ಇದ್ದು, ಜಲಾಶಯದ ಒಳಹರಿವು ಹೆಚ್ಚಳವಾಗಿ ನೀರಿನ ಸಂಗ್ರಹವೂ ಏರಿಕೆಯಾಗುವ ಭರವಸೆ ಇದೆ.
ತುಂಗಭದ್ರಾ ಜಲಾಶಯ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೆ ಜೀವನಾಡಿಯಾಗಿದೆ. ಜಲಾಶಯದ 19ನೇ ಕ್ರಸ್ಟ್ಗೇಟ್ ಚೈನ್ ಲಿಂಕ್ ಮುರಿದು ಆತಂಕ ಎದುರಾಗಿತ್ತು. ಒಂದು ವಾರದ ಬಳಿಕ ದುರಸ್ತಿ ಕಾರ್ಯವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಲಾಗಿದೆ. ಆಂಧ್ರ ಪ್ರದೇಶದ ಶಾಸಕರ ನಿಯೋಗ ಡ್ಯಾಂಗೆ ಆಗಮಿಸಿ, ಪರಿಶೀಲನೆ ನಡೆಸಿ, ಮಾಹಿತಿಯನ್ನು ಸಂಗ್ರಹ ಮಾಡಿದೆ.
ಜನರ ಭೇಟಿಗೆ ಅವಕಾಶ: ವಿಜಯನಗರ ಜಿಲ್ಲಾಧಿಕಾರಿಗಳ ಕಛೇರಿ ತುಂಗಭದ್ರಾ ಡ್ಯಾಂಗೆ ಜನರ ಭೇಟಿಗೆ ಅವಕಾಶ ನೀಡಿ ಆದೇಶವನ್ನು ಹೊರಡಿಸಿದೆ. ತುಂಗಾ ಭದ್ರಾ ಅಣೆಕಟ್ಟಿನ ಗೇಟ್ಗಳ ಹತ್ತಿರ ಹಾಗೂ ಅಣೆಕಟ್ಟಿನ ಸುತ್ತ-ಮುತ್ತ ಇರುವ ಸೇತುವೆಗಳ ವ್ಯಾಪ್ತಿ ಪ್ರದೇಶದಲ್ಲಿ ಜಾರಿಗೊಳಿಸಿದ್ದ ನಿಷೇಧಾಜ್ಞೆ ಆದೇಶವನ್ನು ಹಿಂಪಡೆಯಲಾಗಿದೆ.
ತುಂಗಭದ್ರಾ ಜಲಾಶಯದ ಗೇಟ್ ನಂ. 19ರ ಚೈನ್ ಲಿಂಕ್ ಮುರಿದ ಹಿನ್ನೆಲೆಯಲ್ಲಿ ಜಲಾಶಯದ ಭದ್ರತೆ ಹಿತದೃಷ್ಟಿಯಿಂದ ತಜ್ಞರ ಸಲಹೆ ಮೇರೆಗೆ ಮುಂಜಾಗ್ರತಾ ಕ್ರಮವಾಗಿ ಅಣೆಕಟ್ಟಿನ ಗೇಟ್ಗಳ ಹತ್ತಿರ ಹಾಗೂ ಅಣೆಕಟ್ಟಿನ ಸುತ್ತ-ಮುತ್ತ ಇರುವ ಸೇತುವೆಗಳ ವ್ಯಾಪ್ತಿ ಪ್ರದೇಶದಲ್ಲಿ ಕೆಲವು ನಿಬಂಧನೆಗಳನ್ನು ವಿಧಿಸಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಆದೇಶ ಹೊರಡಿಸಲಾಗಿತ್ತು.
ಕಾರ್ಯದರ್ಶಿಗಳು, ಟಿ. ಬಿ. ಡ್ಯಾಂ, ಹೊಸಪೇಟೆ ಅವರು ತುಂಗಭದ್ರಾ ಜಲಾಶಯದ ಗೇಟ್ ನಂ. 19ರ ದುರಸ್ತಿ ಕಾರ್ಯ ಯಶಸ್ವಿಯಾಗಿದ್ದು ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ತುಂಗಾ ಭದ್ರ ಜಲಾಶಯದ ವೀಕ್ಷಣೆಗೆ ಅವಕಾಶ ನೀಡುವಂತೆ ಮನವಿ ಮಾಡಿರುವ ಹಿನ್ನಲೆಯಲ್ಲಿ ನಿಷೇಧಾಜ್ಞೆ ಆದೇಶ ವಾಪಸ್ ಪಡೆಯಲಾಗಿದೆ.












Click it and Unblock the Notifications