ಸರ್ಕಾರದ ಕುರಿತ ಸಿದ್ದರಾಮಯ್ಯ ಹೇಳಿಕೆಗೆ ಪರಮೇಶ್ವರ್ ಗರಂ
ಕೊಪ್ಪಳ, ಜೂನ್ 27: ಲೋಕಸಭೆ ಚುನಾವಣೆ ನಂತರ ಮೈತ್ರಿ ಸರ್ಕಾರ ಉರುಳುತ್ತದೆ ಎಂದು ಸಿದ್ದರಾಮಯ್ಯ ಅವರು ತಮ್ಮ ಆಪ್ತರ ಬಳಿ ಹೇಳಿರುವುದು ಕಾಂಗ್ರೆಸ್ನ ಹಿರಿಯ ನಾಯಕರನ್ನು ಕೆರಳಿಸಿದೆ.
ಸಿದ್ದರಾಮಯ್ಯ ಅವರ ಹೇಳಿಕೆಗೆ ಬೇಸರ ವ್ಯಕ್ತಪಡಿಸಿರುವ ಉಪಮುಖ್ಯಮಂತ್ರಿ ಪರಮೇಶ್ವರ್ ಅವರು, 'ಮೈತ್ರಿಯಲ್ಲಿ ಗೊಂದಲ ಇಲ್ಲ, ಸರ್ಕಾರ ಉರುಳುತ್ತದೆ ಎಂಬ ಹೇಳಿಕೆ ಅಪ್ರಸ್ತುತ' ಎಂದು ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಯಾವುದೇ ಶೀಥಲ ಸಮರ ನಡೆದಿಲ್ಲ, ಕೆಲವು ಸರ್ಕಾರದ ಆಯಸ್ಸು ಆರು ತಿಂಗಳು, ವರ್ಷ, ಎರಡು ವರ್ಷ ಎನ್ನುತ್ತಿದ್ದಾರೆ ಅವರ ಮಾತೆಲ್ಲಾ ಅಪ್ರಸ್ತುತ' ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.

ಯಾರಿಗೂ ಅನುಮಾನವೇ ಬೇಡ ನಮ್ಮ ಸರ್ಕಾರ ಐದು ವರ್ಷ ಪೂರೈಸುತ್ತದೆ, ಜನಪರ ಆಡಳಿತ ನೀಡಿಯೇ ನೀಡುತ್ತೇವೆ, ಸರ್ಕಾರದ ಭವಿಷ್ಯ ಹೇಳುವರ ಮಾತು ನಂಬಬೇಡಿ ಎಂದು ಪರಮೇಶ್ವರ್ ಹೇಳಿದ್ದಾರೆ.
ಧರ್ಮಸ್ಥಳದ ಶಾಂತಿವನದಲ್ಲಿರುವ ಸಿದ್ದರಾಮಯ್ಯ ಅವರು, ಆಪ್ತರೊಂದಿಗೆ ಮಾತನಾಡುತ್ತಾ ಲೋಕಸಭೆ ನಂತರ ಸರ್ಕಾರ ಬೀಳುತ್ತದೆ ಎಂದಿದ್ದರು ಈ ಸಂಭಾಷಣೆಯ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಸಿದ್ದರಾಮಯ್ಯ ಹೇಳಿಕೆಯಿಂದ ಕಾಂಗ್ರೆಸ್ನ ಹಲವು ಹಿರಿಯ ಮುಖಂಡರೇ ಗರಂ ಆಗಿದ್ದಾರೆ.
ಡಿ.ಕೆ.ಶಿವಕುಮಾರ್ ಅವರು ಕೂಡ ಸಿದ್ದರಾಮಯ್ಯ ಅವರ ಮಾತಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಪಕ್ಷಕ್ಕೆ ನಿಷ್ಠವಾಗಿರಿ ವ್ಯಕ್ತಿಗಲ್ಲ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಪರ ಬೆಂಬಲಿಗ ಶಾಸಕರಿಗೆ ಕಿವಿ ಮಾತು ಹೇಳಿದ್ದರು. ಮಲ್ಲಿಕಾರ್ಜುನ ಖರ್ಗೆ ಕೂಡ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.












Click it and Unblock the Notifications