Gavisiddeshwara Jatra : ಅದ್ಧೂರಿಯಾಗಿ ಸಂಪನ್ನಗೊಂಡ ಗವಿಸಿದ್ದೇಶ್ವರ ಜಾತ್ರೆ: ಲಕ್ಷಾಂತರ ಭಕ್ತರು ಭಾಗಿ
ಕೊಪ್ಪಳ, ಜನವರಿ 9: ದಕ್ಷಿಣ ಭಾರತದ ಕುಂಭ ಮೇಳ ಖ್ಯಾತಿಯ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರಾ ಮುಹೋತ್ಸವ ಭಾನುವಾರ ಅದ್ಧೂರಿಯಾಗಿ ನೆರವೇರಿತು. ಜಾತ್ರೆಯಲ್ಲಿ ಲಕ್ಷಾಂತರ ಜನ ಭಕ್ತರು ಆಗಮಿಸಿ ರಥೋತ್ಸವವನ್ನ ಕಣ್ತುಂಬಿಕೊಂಡರು.
ಕಳೆದೆರಡು ವರ್ಷಗಳಿಂದ ಜಾತ್ರೆ ಮಾಡದೆ ನಿರಾಶೆಗೊಂಡ ಭಕ್ತರು ಈ ಬಾರಿ ಅತ್ಯಂತ ವಿಜೃಂಭಣೆಯಿಂದ ನಡೆದ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಕಣ್ಣು ಹಾಯಿಸಿದಷ್ಟು ಜನ ಸಾಗರ ಎನ್ನುವಂತಹ ಪರಿಸ್ಥಿತಿ ಏರ್ಪಟಿತ್ತು.
ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಜಾತ್ರೆಯನ್ನು ಬಹಳ ಸರಳವಾಗಿ ನಡೆಸಲಾಗಿತ್ತು. ಆದರೆ ಈ ಬಾರಿ ಅದ್ಧೂರಿಯಾಗಿ ಜಾತ್ರೆ ನಡೆದಿದ್ದು ಅಭಿನವ ಗವಿಸಿದ್ದೇಶ್ವರ ಶ್ರೀಗಳು ಜಾತ್ರೆಗೆ ಚಾಲನೆ ನೀಡಿದರು. ಹುಚ್ಚು ಬಿಡಿಸುವಂತೆ ಜಾತ್ರೆ ನಡೆಯಬೇಕು ಎಂದು ಹೇಳಿದ್ದ ಶ್ರೀಗಳ ಕರೆಗೆ ಜನಸಾಗರವೇ ಹರಿದು ಬಂದಿತ್ತು.
ಭಾನುವಾರ ಬೆಳಿಗ್ಗೆಯಿಂದಲೇ ರಾಜ್ಯದ ನಾನಾ ಜಿಲ್ಲೆಗಳಿಂದ ಗವಿಸಿದ್ದೇಶ್ವರನ ಜಾತ್ರೆಗೆ ಭಕ್ತ ಸಾಗರವೇ ಹರಿದು ಬಂದಿತ್ತು. ಮಧ್ಯಾಹ್ನದ ವೇಳೆಗೆ ಲಕ್ಷಾಂತರ ಸಂಖ್ಯೆಯಲ್ಲಿ ಮಠದ ಆವರಣದಲ್ಲಿ ಜಮಾಯಿಸಿದ್ದ ಭಕ್ತರು ಗವಿಸಿದ್ದೇಶ್ವರನ ಪಾದಸ್ಪರ್ಶ ಮಾಡಿ ಪ್ರಾರ್ಥನೆ ಸಲ್ಲಿಸಿದರು.
ಇನ್ನು ಗವಿಮಠದ ಅಭಿನವ ಗವಿಸಿದ್ದೇಶ್ವರ ಶ್ರೀಗಳು ವೇದಿಕೆಗೆ ಬರುತ್ತಿದ್ದಂತೆ ನೆರೆದಿದ್ದ ಭಕ್ತದ ಸಾಗರದ ಜಯಘೋಷ ಮುಗಿಲು ಮುಟ್ಟಿತ್ತು.
ಬಳಿಕ ಸರಿಯಾಗಿ ಸಂಜೆ 5:30ಕ್ಕೆ ಆಧ್ಯಾತ್ಮಿಕ ಚಿಂತಕ ಸದ್ಗುರು ಜಗ್ಗಿ ವಾಸುದೇವ ಧ್ವಜಾರೋಹಣ ಮಾಡುವ ಮೂಲಕ ರಥೋತ್ಸವವಕ್ಕೆ ಚಾಲನೆ ನೀಡಿದರು.
ಮಹಾರಥೋತ್ಸವಕ್ಕೆ ಚಾಲನೆ ನೀಡುವ ಮೊದಲು ಲಿಂಗೈಕರಾದ ಸಿದ್ದೇಶ್ವರ ಶ್ರೀಗಳಿಗೆ ಭಕ್ತಿಯ ಶ್ರದ್ಧಾಂಜಲಿ ಅರ್ಪಿಸುವ ನಿಟ್ಟಿನಲ್ಲಿ ಅಭಿನವ ಗವಿಸಿದ್ದೇಶ್ವರ ಶ್ರೀಗಳು ಮಾತನಾಡಿ, ಸಿದ್ದೇಶ್ವರ ಅಪ್ಪಾಜಿ ಅವರು ಸಮಾಜದ ಒಳಿತಿಗಾಗಿ ಆರದ ದೀಪವನ್ನು ಹಚ್ಚಿದ್ದಾರೆ. ಸಿದ್ದೇಶ್ವರ ಸ್ವಾಮೀಜಿ ಅವರ ಸಲುವಾಗಿ ಒಂದು ನಿಮಿಷ ಮೌನಾಚರಣೆ ಮಾಡುವಂತೆ ಕರೆ ನೀಡಿದರು. ಬಳಿಕ ಇಡೀ ಜನಸಾಗರವೇ ಒಂದು ನಿಮಿಷಗಳ ಕಾಲ ಮೌನಾಚರಣೆ ಆಚರಿಸಿದರು.
ಸಿದ್ದೇಶ್ವರ ಶ್ರೀಗಳಿಗೆ ಗೌರವ ಸಲ್ಲಿಸಿ ಬಳಿಕ ಧ್ವಜಾರೋಹಣ ಮಾಡುವ ಮಹಾರಥೋತ್ಸವಕ್ಕೆ ಚಾಲನೆ ಸಿಕ್ಕಿತು. ಈ ಕ್ಷಣಕ್ಕಾಗಿ ಕಾಯುತ್ತಿದ್ದ ಲಕ್ಷಾಂತರ ಭಕ್ತರು ರಥವನ್ನು ಎಳೆಯುತ್ತಾ ಹೆಜ್ಜೆ ಹಾಕಿದರು. ರಥೋತ್ಸವದಲ್ಲಿ ಸುಮಾರು ಐದಾರು ಲಕ್ಷ ಜನ ಭಾಗಿಯಾಗಿದ್ದಾರೆ ಎಂದು ಅಂದಾಜಿಸಲಾಗಿದೆ.
ಲಕ್ಷಾಂತರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತ ಸಮೂಹಕ್ಕೆ ಭೋಜನದ ವ್ಯವಸ್ಥೆ ಕೂಡ ಮಾಡಲಾಗಿತ್ತು. ಉತ್ತರ ಕರ್ನಾಟಕದ ಶೈಲಿಯಲ್ಲೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. 15 ಲಕ್ಷ ಜೋಳದ ರೊಟ್ಟಿ, 7 ಲಕ್ಷ ಶೇಂಗಾ ಹೋಳಿಗೆ, 275 ಕ್ವಿಂಟಾಲ್ ಮಾದಲಿ, ಜೊತೆಗೆ ಎರಡೂ ರೀತಿ ಫಲ್ಯ ಹಾಗೂ ಅನ್ನ ಸಾರು ಮಾಡಲಾಗಿತ್ತು. ರಾಜ್ಯದ ಮೂಲೆ ಮೂಲೆಯಿಂದ ಬಂದ ಜನರು ಮಹಾ ಪ್ರಸಾದ ಸೇವಿಸಿದರು.
ಈ ಬಾರಿ ಜಾತ್ರೆಗೆ ವಿಶೇಷ ಆಹ್ವಾನಿತರಾಗಿ ಬಂದಿದ್ದ ಈಶಾ ಫೌಂಡೇಶನ್ ಸಂಸ್ಥಾಪಕರಾದ ಸದ್ಗುರು ಜಗ್ಗಿ ವಾಸುದೇವ ರಥೋತ್ಸವಕ್ಕೆ ಚಾಲನೆ ನೀಡಿ, ನೆರೆದಿದ್ದ ಭಕ್ತರನ್ನುದ್ದೇಶಿಸಿ ಮಾತನಾಡಿದರು. ಎರಡು ವರ್ಷಗಳ ಬಳಿಕ ನಡೆದ ಗವಿಸಿದ್ದೇಶ್ವರ ಅದ್ಧೂರಿ ಜಾತ್ರಾ ಮಹೋತ್ಸವದಲ್ಲಿ ನಿರೀಕ್ಷೆಗೂ ಮೀರಿ ಲಕ್ಷಾಂತರ ಭಕ್ತರು ಭಾಗಿಯಾಗಿದ್ದರು.