ಈ ಇನ್ಸ್ಪೆಕ್ಟರ್ಗೆ ಅಕ್ರಮದ ಹಣ ಇಡಲು ಪೊಲೀಸ್ ಠಾಣೆಯೇ ಸೇಫ್ ಜಾಗವಾಗಿತ್ತು!
ಕೊಪ್ಪಳ, ಜೂನ್ 17: ಕೊಪ್ಪಳ ಪೊಲೀಸ್ ಠಾಣೆಯಲ್ಲೇ ಕಾಂಚಣದ ನರ್ತನ. ಎಸಿಬಿ ದಾಳಿಯ ವೇಳೆ ಸಿಕ್ತು ಲಕ್ಷ ಲಕ್ಷ ಹಣ. ಎಸಿಬಿ ಅಧಿಕಾರಿಗಳು ಪೊಲೀಸ್ ಇನ್ಸ್ಪೆಕ್ಟರ್ ಉದಯರವಿಗೆ ಸಂಬಂಧಿಸಿದ ಕಚೇರಿ ಮತ್ತು ಮನೆಗಳ ಮೇಲೆ ದಾಳಿಯನ್ನು ನಡೆಸಿದ್ದಾರೆ. ಉದಯರವಿಗೆ ಸೇರಿದ್ದ ಹಣವನ್ನು ಕೊಪ್ಪಳ ಪೊಲೀಸ್ ಠಾಣೆಯಲ್ಲೇ ಸಿಕ್ಕಿದೆ. ಎಂಟು ಲಕ್ಷ ನಗದು ಮತ್ತು 600 ಗ್ರಾಂ ಚಿನ್ನ ಠಾಣೆಯಲ್ಲಿ ಸಿಕ್ಕಿದೆ.
ಕೊಪ್ಪಳದ ಗಂಗಾವತಿ ಗ್ರಾಮೀಣ ವೃತ್ತದ ಪೊಲೀಸ್ ಅಧಿಕಾರಿಯಾಗಿದ್ದ ಹಾಗೂ ಪ್ರಸ್ತುತ ಪೊಲೀಸ್ ಗುಪ್ತಚರ ಇಲಾಖೆ ಅಧಿಕಾರಿಯಾಗಿರುವ ಉದಯರವಿ ಅವರ ಗಂಗಾವತಿ ಮನೆ ಸೇರಿದಂತೆ ವಿವಿಧೆಡೆ ಇರುವ 4 ಮನೆಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನೆಡಸಿದ್ದಾರೆ.
ಕೆಲವರು ಅಕ್ರಮದ ಹಣ ಇಡಲು ಬ್ಯಾಂಕ್ ಲಾಕರ್, ಮನೆಯ ಬೆಡ್ರೂಮ್, ಬಾತ್ರೂಂ, ನೀರಿನ ಸಂಪರ್ಕದ ನಲ್ಲಿ ಹೀಗೆ ಎಲ್ಲಾ ಕಡೆಯೂ ಹಣ ಇಟ್ಟಿದ್ದನ್ನು ನೋಡಿದ್ದೇವೆ. ಆದರೆ, ಈ ಇನ್ಸ್ಪೆಕ್ಟರ್ ಅಕ್ರಮವಾಗಿ ಗಳಿಸಿದ್ದ ಹಣ ಮತ್ತು ಬಂಗಾರವನ್ನು ಸ್ಟೇಷನ್ನಲ್ಲಿಯೇ ಇಟ್ಟುಕೊಂಡು ಹೊಸ ಸೇಫ್ಟಿ ಜಾಗವೊಂದನ್ನು ಕಂಡುಕೊಂಡಿದ್ದರು.
ಎಸಿಬಿ ಡಿವೈಎಸ್ಪಿ ಶಿವಕುಮಾರ್ ಹಾಗೂ ಸಬ್ ಇನ್ಸ್ ಪೆಕ್ಟರ್ ಆಂಜನೇಯ ನೇತೃತ್ವದ ಅಧಿಕಾರಿಗಳು ದಾಳಿ ಮಾಡಿ ಶೋಧ ನಡೆಸಿದ್ದಾರೆ. ಉದಯರವಿ ಗಂಗಾವತಿ ನಗರ ಠಾಣೆ ಹಾಗೂ ಗ್ರಾಮೀಣ ಠಾಣೆಗಳಲ್ಲಿ ಪಿಐ ಆಗಿ ಕಾರ್ಯ ನಿರ್ವಹಿಸಿದ್ದರು.ಇತ್ತೀಚೆಗಷ್ಟೇ ಬೆಂಗಳೂರಿಗೆ ಪೊಲೀಸ್ ಗುಪ್ತಚರ ಇಲಾಖೆಯ ಇನ್ಸ್ ಪೆಕ್ಟರ್ ಆಗಿ ವರ್ಗಾವಣೆಗೊಂಡಿದ್ದರು. ಕೆಲ ಜನಪ್ರತಿನಿಧಿಗಳು ಮತ್ತು ಉದಯ ರವಿ ಅವರ ಮಧ್ಯೆ ಶೀತಲ ಸಮರದ ಹಿನ್ನೆಲೆಯಲ್ಲಿ ಇತ್ತೀಚೆಗೆ ಕೊಪ್ಪಳಕ್ಕೆ ಭೇಟಿ ನೀಡಿದ್ದ ಪೊಲೀಸ್ ಮಹಾನಿರ್ದೇಶಕರಿಗೆ ಬಿಜೆಪಿಯ ಕೆಲ ಮುಖಂಡರು ದೂರು ಸಲ್ಲಿಸಿ ತನಿಖೆ ನಡೆಸಿ ಮತ್ತು ವರ್ಗಾವಣೆಗೊಳಿಸುವಂತೆ ಒತ್ತಾಯಿಸಿದ್ದರು.

ಉದಯ ರವಿಗೆ ಸಂಬಂಧಿಸಿದ ನಾಲ್ಕು ಕಡೆ ದಾಳಿ
ಮಾಜಿ ಸಚಿವ ಶಿವರಾಜ ತಂಗಡಗಿ ಅವರು ಕನಕಗಿರಿ ಭಾಗದಲ್ಲಿ ಮಟ್ಕಾ ಇಸ್ಪೀಟ್ ದಂಧೆ, ಮರಳು ಮಾಫಿಯದ ಹಿಂದೆ ಪೊಲೀಸ್ ಇಲಾಖೆಯ ನೇರವಾಗಿ ಕೈವಾಡವಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದರು. ಪೊಲೀಸ್ ಅಧಿಕಾರಿ ಉದಯ ರವಿ ಅವರ ಗಂಗಾವತಿ, ಮುದಗಲ್, ಗಂಗಾವತಿಯ ಬೊಂಬು ಬಜಾರ್ ಮತ್ತು ಆಪ್ತನ ಮನೆ ಸೇರಿ ಒಟ್ಟು 4 ಕಡೆ ಎಸಿಬಿ ಪೊಲೀಸರು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ .

ಚಿನ್ನಾಭರಣ ನಗದು ಹಣದ ಮೌಲ್ಯ ಕೌಂಟಿಂಗ್
ಪೊಲೀಸ್ ಇನ್ಸ್ಪೆಕ್ಟರ್ ಉದಯರವಿ ಪೋಷಕರ ಮುದ್ಗಲ್ ಮನೆಯ ಮೇಲೂ ಎಸಿಬಿ ಅಧಿಕಾರಿಗಳು ದಾಳಿಯನ್ನು ಮಾಡಿದ್ದಾರೆ. ಈ ವೇಳೆ ಅಪಾರ ಪ್ರಮಾಣದ ಚಿನ್ನಾಭರಣ ಮತ್ತು ನಗದು ಹಣ ಕೂಡ ಪತ್ತೆಯಾಗಿದೆ. ಚಿನ್ನದ ಒಡವೆಗಳು, ಬೆಳ್ಳಿಯ ಸಾಮಗ್ರಿಗಳು ಸೇರಿದಂತೆ ನಗದು ಪತ್ತೆಯಾಗಿರುವುದರಿಂದ ಅದರ ಮೌಲ್ಯವನ್ನು ಎಸಿಬಿ ಅಧಿಕಾರಿಗಳು ಲೆಕ್ಕ ಹಾಕುತ್ತಿದ್ದಾರೆ.

ಸ್ನೇಹಿತ ಮನೆ ಮೇಲೂ ದಾಳಿ
ಉದಯರವಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ಎಂಟು ಲಕ್ಷ ನಗದು ಮತ್ತು 600ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ. ಈ ಹಣ ಮತ್ತು ಚಿನ್ನಾಭರಣ ಉದಯರವಿಗೆ ಸೇರಿದ್ದು ಎನ್ನಲಾಗುತ್ತಿದೆ. ಇದರ ಜೊತೆಗೆ ಉದಯ ರವಿ ಸ್ನೇಹಿತನ ಮನೆ ಮೇಲೂ ದಾಳಿಯನ್ನು ನಡೆಸಿ ಅಮೂಲ್ಯ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ರಾಜಕೀಯ ಎಂಟ್ರಿಗೂ ಮುನ್ನವೇ ಎಸಿಬಿ ಶಾಕ್
ಉದಯರವಿ ಸಹ ರಾಜಕೀಯ ಅಖಾಡಕ್ಕೆ ಧುಮುಕಲು ಸಕಲ ರೀತಿಯಲ್ಲು ಸಜ್ಜಾಗುತ್ತಿದ್ದರು. 2023 ವಿಧಾನಸಭೆ ಚುನಾವಣೆಗೆ ನಿಲ್ಲಲು ತಯಾರಿಯನ್ನು ನಡೆಸುತ್ತಿದ್ದಾರೆ. ಕೊಪ್ಪಳ ವಿಧಾನ ಸಭಾ ಕ್ಷೇತ್ರದಿಂದ ಅಖಾಡಕ್ಕೆ ಧುಮಕಲಿದ್ದಾರೆ ಎಂಬ ಮಾತು ಸ್ಥಳೀಯವಾಗಿ ಕೇಳಿಬಂದಿತ್ತು. ಆದರೆ ಉದಯ ರವಿ ಖಾಕಿ ಕಳಚಿ ಖಾದಿ ಧರಿಸುವ ಮುನ್ನವೇ ಎಸಿಬಿ ಶಾಕ್ ನೀಡಿದೆ. ಉದಯ ರವಿ ಅಕ್ರಮವಾಗಿ ಸಂಪಾದಿಸಿರೋ ಆಸ್ತಿ ಎಷ್ಟು ಅನ್ನೋದು ಸಹ ಎಸಿಬಿ ದಾಳಿಯ ಬಳಿಕ ತಿಳಿಯಲಿದೆ.












Click it and Unblock the Notifications