ಬಿಜೆಪಿ ಸಂಸದ ಸಂಗಣ್ಣ 'ಪರಾರಿ' ಯತ್ನ ವಿಫಲಗೊಳಿಸಿದ ಪೊಲೀಸರು
ಕೊಪ್ಪಳ, ಮಾರ್ಚ್ 19: ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ಮಾಡುವ ಗುಮಾನಿ ಇಂದ ಬಂಧನ ಭೀತಿ ಎದುರಿಸಿದ್ದ ಬಿಜೆಪಿ ಸಂಸದ ಸಂಗಣ್ಣ ಕರಡಿ ಅವರು ಮಾಡಿದ ಪರಾರಿ ಯತ್ನವನ್ನು ಪೊಲೀಸರು ವಿಫಲಗೊಳಿಸಿದ್ದು ಅವರನ್ನು ವಶಕ್ಕೆ ಪಡೆದಿದ್ದಾರೆ.
ಸಿಎಂ ವಿರುದ್ಧ ಪ್ರತಿಭಟನೆ ಮಾಡುತ್ತಾರೆಂಬ ಗುಮಾನಿಯಿಂದ ಸಂಸದ ಸಂಗಣ್ಣ ಕರಡಿ ಅವರು ಮನೆಯಿಂದ ಹೊರಗೆ ಬರಬಾರದೆಂದು ಬೆಳಿಗ್ಗೆ ಇಂದಲೂ ಅವರ ಮನೆ ಮುಂದೆ ಪೊಲೀಸರ ಕಾವಲು ಹಾಕಲಾಗಿತ್ತು, ಅವರ ಮನೆ ಮುಂದೆ ಬಿಜೆಪಿ ಕಾರ್ಯಕರ್ತರು ಬರದಂತೆ ತಡೆಯಲಾಗಿತ್ತು, ಆದರೆ ಸಂಜೆ ವೇಳೆಗೆ ಕಾರ್ಯಕರ್ತರು ಜಮಾಯಿಸಿ ವಾಗ್ವಾದ ಶುರುವಾದ ಕಾರಣ ಬಂಧನ ಖಾಯಂ ಎಂದು ತಿಳಿದ ಸಂಸದರು ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಲು ಯತ್ನಿಸಿದರು.
ಕೊಪ್ಪಳ: ಸಿಎಂ ವಿರುದ್ಧ ಬಿಜೆಪಿಯ ಪ್ರತಿಭಟನೆಗೆ ಪೊಲೀಸರ ಅಡ್ಡಗಾಲು
ತುಂಗಭದ್ರಾ ಎಡದಂಡೆಯಿಂದ ಜಿಲ್ಲೆಯ ಎರಡನೇಯ ಬೆಳೆಗೆ ನೀರು ಹರಿಸಬೇಕೆಂದು ಒತ್ತಾಯಿಸಿ ಇಂದು ನಗರಕ್ಕೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ವಿರುದ್ಧ ಸಂಸದ ಸಂಗಣ್ಣ ಕರಡಿ ಅವರ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆಗೆ ಯೋಜಿಸಿತ್ತು. ಇದರ ಮಾಹಿತಿ ತಿಳಿದ ಪೊಲೀಸರು ಬೆಳಿಗ್ಗಿನಿಂದಲೇ ನಗರದ ಹಲವು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದ್ದರು, ಸಂಸದ ಸಂಗಣ್ಣ ಕರಡಿ ಅವರ ಮನೆ ಮುಂದೆ ಪೊಲೀಸ್ ಕಾವಲು ಹಾಕಿ ಅವರು ಮನೆ ಬಿಟ್ಟು ತೆರಳದಂತೆ ಎಚ್ಚರವಹಿಸಿದ್ದರು.
ಆದರೆ ಸಂಜೆ ವೇಳೆಗೆ ಕಾರ್ಯಕರ್ತರು ಸಂಗಣ್ಣ ಅವರ ಮನೆ ಮುಂದೆ ಜಮಾಯಿಸಿದರು, ಆಗ ಪೊಲೀಸರು ಸಂಗಣ್ಣ ಅವರನ್ನು ಬಂಧಿಸಲು ಮುಂದಾದರು ಆದರೆ ಸಂಗಣ್ಣ ಅವರು ಪೊಲೀಸರ ಕಣ್ಣು ತಪ್ಪಿಸಿ ಮನೆಯಿಂದ ಸಮೀಪದಲ್ಲಿರುವ ಜಿಲ್ಲಾ ಆಸ್ಪತ್ರೆ ಆವರಣದ ಸಮೀಪ ಓಡುತ್ತಿದ್ದಂತೆಯೇ ವಾಹನದಲ್ಲಿ ಅವರ ಎದುರಿಗೆ ಬಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಎ.ಶೆಟ್ಟಿ, ಡಿವೈಎಸ್ಪಿ ಎಸ್.ಎಂ.ಸಂಧಿಗವಾಡ ಸಂಸದರು ಹಾಗೂ ಅವರ ಬೆಂಬಲಿಗರನ್ನು ಬಂಧಿಸಿದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಪೊಲೀಸ್ ಕಾವಲಿನ ನಡುವೆ ಮಾತನಾಡಿದ ಸಂಸದ ಸಂಗಣ್ಣ, 'ತುಂಗಭದ್ರಾ ಜಲಾಶಯದಿಂದ ಎರಡನೇ ಬೆಳೆಗೆ ನೀರು ಹರಿಸಬೇಕು. ನೀರು ಬಿಡಲು ಈ ಹಿಂದೆಯೂ ಮನವಿ ಮಾಡಿದ್ದೆವು. ಆದರೆ, ಸರ್ಕಾರ ಅದಕ್ಕೆ ಸ್ಪಂದಿಸಿಲ್ಲ. ಅದಕ್ಕಾಗಿ ಮುಖ್ಯಮಂತ್ರಿಯವರ ಗಮನ ಸೆಳೆಯಲು ಸಿದ್ಧತೆ ನಡೆಸಿದ್ದೆವು. ಆದರೆ, ಪೊಲೀಸರು ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಿದ್ದಾರೆ. ತುಂಗಭದ್ರಾ ಅಣೆಕಟ್ಟೆ ಆಡಳಿತ ಮಂಡಳಿಯಲ್ಲಿ ಸಾಕಷ್ಟು ಭ್ರಷ್ಟರಿದ್ದಾರೆ. ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲು ಯತ್ನಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಹತ್ತಿಕ್ಕುವ ಪ್ರಯತ್ನ ಮಾಡಿದ್ದಾರೆ' ಎಂದು ಆರೋಪಿಸಿದರು.