ಕೊಪ್ಪಳದ ಪೊಲೀಸ್ ವಸತಿಗೃಹಗಳಲ್ಲಿ ನೊಣಗಳ ಹಾವಳಿ
ಕೊಪ್ಪಳ, ಸೆಪ್ಟೆಂಬರ್ 19: ಕೊಪ್ಪಳ ಜಿಲ್ಲೆಯ ಬಸಾಪುರ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ವಸತಿ ಗೃಹಗಳಲ್ಲಿ ನೊಣಗಳ ಹಾವಳಿ ವಿಪರೀತವಾಗಿದೆ.ಈ ಕುರಿತು ದೂರು ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಸತಿಗೃಹಗಳ ಬಳಿ ಕೋಳಿಫಾರಂ ಇರುವುದರಿಂದಲೇ ನೊಣಗಳ ಹಾವಳಿ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ, ಹಾಗಾಗಿ ನೊಣಗಳ ನಿಯಂತ್ರಣಕ್ಕೆ ಕೋಳಿಫಾರಂ ಮಾಲೀಕರಿಗೆ ಸೂಚನೆ ನೀಡಿದ್ದಾರೆ.
ಕೊಪ್ಪಳದಲ್ಲಿ ಲೇಡಿಸ್ ಹಾಸ್ಟೆಲ್ ಗೆ ನುಗ್ಗಿ ಪುಂಡರ ಅಟ್ಟಹಾಸ
ಕೋಳಿ ಫಾರಂಗಳಿಂದ ಸಾರ್ವಜನಿಕರಿಗೆ ಯಾವುದೇ ಸಮಸ್ಯೆಗಳು ಉಂಟಾಗಬಾರದು. ನೊಣಗಳ ನಿಯಂತ್ರಣಕ್ಕೆ ಯಾವ ರೀತಿ ಕ್ರಮ ತೆಗೆದುಕೊಂಡಿದ್ದಿರಿ. ಈಗಾಗಲೇ ತಹಶಿಲ್ದಾರರಿಂದ ನಿಮಗೆ ನೋಟಿಸ್ ನೀಡಲಾಗಿದ್ದು, ನೊಣಗಳ ನಿಯಂತ್ರಣ ಹಾಗೂ ಸ್ವಚ್ಛತೆಗೆ ಪ್ರತಿ ದಿನ ಪರ್ಯಾಯ ವ್ಯವಸ್ಥೆ ಕೈಗೊಳ್ಳಿ ಇಲ್ಲದಿದ್ದಲ್ಲಿ, ಸೂಕ್ತ ಕಾನೂನು ಕ್ರಮ ವಹಿಸಲಾಗುವುದು ಎಂದು ಸೂಚನೆ ನೀಡಿದ್ದಾರೆ.
ನೊಣಗಳ ನಿಯಂತ್ರಣಕ್ಕೆ ಸ್ಪ್ರೇಯನ್ನು ಬಳಕೆ ಮಾಡಲಾಗುತ್ತಿದೆ. ಸಾರ್ವಜನಿಕರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಕೊಪ್ಪಳ ತಾಲೂಕಿನ ಬಸಾಪುರ ಗ್ರಾಮದ ಪದ್ಮಜಾ ಕೋಳಿ ಫಾರಂನ ಮಾಲಿಕರು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಕರ್ನಾಟಕದಲ್ಲಿ ಈ ಬಾರಿ ಡೆಂಗ್ಯೂ ಹಾವಳಿ ನಿಯಂತ್ರಣದಲ್ಲಿ!
ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ವಸತಿ ಗೃಹಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳಿಗೆ ವಸತಿ ಗೃಹಗಳ ಸಾರ್ವಜನಿಕರು, ನಮಗೆ ಕುಡಿಯುವ ನೀರಿನ ಸಮಸ್ಯೆ ಇದ್ದು, ವಸತಿ ಗೃಹದ ಸಮೀಪದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಯಾಗಬೇಕು. ಬಸ್ ನಿಲುಗಡೆಗೆ ಅವಕಾಶ ಕಲ್ಪಿಸಬೇಕು.
ನೊಣಗಳ ಹಾವಳಿಯಿಂದಾಗಿ ಊಟಕ್ಕೆ ಹಾಗೂ ಮಕ್ಕಳ ಆಟಕ್ಕೆ ತುಂಬಾ ತೊಂದರೆಯಾಗುತ್ತಿದೆ ಅಲ್ಲದೇ ಆರೋಗ್ಯದ ಮೇಲೂ ಸಹ ಪರಿಣಾಮ ಉಂಟಾಗುತ್ತಿದ್ದು, ಸಮಸ್ಯೆಯನ್ನು ಶೀಘ್ರ ಬಗೆಹರಿಸುವಂತೆ ಮನವಿ ಮಾಡಿದರು.
ಹಾಸನದಲ್ಲಿ ಡೆಂಗ್ಯೂ ಜ್ವರದ ವಿರುದ್ಧ ಜನಜಾಗೃತಿ
ನಂತರ ಜಿಲ್ಲಾಧಿಕಾರಿಗಳು ಮಾತನಾಡಿ, ಜಿಲ್ಲಾಡಳಿತಕ್ಕೆ ದೂರು ಬಂದಿರುವ ಹಿನ್ನೆಲೆಯಲ್ಲಿ ತಾಲೂಕಿನ ಬಸಾಪುರ ಗ್ರಾಮದ ಕೋಳಿ ಫಾರಂಗೆ ಭೇಟಿ ನೀಡಲಾಗಿದೆ. ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ವಸತಿ ಗೃಹಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಆಲಿಸಿದ್ದು, ಕೂಡಲೇ ಕ್ರಮ ಕೈಗೊಳ್ಳಲಾಗುವುದು.
ನೊಣಗಳ ನಿಯಂತ್ರಣಕ್ಕೆ ಕ್ರಮ ವಹಿಸುವಂತೆ ಕೋಳಿ ಫಾರಂಗಳ ಮಾಲಿಕರಿಗೆ ಸೂಚನೆ ನೀಡಲಾಗಿದ್ದು, ಇದಕ್ಕೆ ಕ್ರಮ ಕೈಗೊಳ್ಳದೇ ಇದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಹೇಳಿದರು.