ಕೊಪ್ಪಳದಲ್ಲಿ ನಗರಸಭೆಯಿಂದ ಅಂಗಡಿಗಳ ಮೇಲೆ ದಾಳಿ: 30 ಕೆ.ಜಿ. ಪ್ಲಾಸ್ಟಿಕ್ ವಶ
ಕೊಪ್ಪಳ, ಜೂ 12: ಕೊಪ್ಪಳ ನಗರಸಭೆ ವತಿಯಿಂದ ಮಂಗಳವಾರದಂದು ನಗರದ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿ, ನಿಷೇಧಿತ ಪ್ಲಾಸ್ಟಿಕ್ ಅನ್ನು ವಶಕ್ಕೆ ಪಡೆದು, ಪ್ಲಾಸ್ಟಿಕ್ ಬಳಸದಂತೆ ಅಂಗಡಿ ಮಾಲೀಕರುಗಳಿಗೆ ಅಂತಿಮ ಎಚ್ಚರಿಕೆ ನೀಡಲಾಗಿದೆ ಎಂದು ನಗರಸಭೆ ಪೌರಾಯುಕ್ತ ಸುನೀಲ್ ಪಾಟೀಲ್ ತಿಳಿಸಿದ್ದಾರೆ.
ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿ ಸರ್ಕಾರ ಈ ಹಿಂದೆಯೇ ಆದೇಶ ಹೊರಡಿಸಿದ್ದು, ಅಂಗಡಿಗಳಲ್ಲಿ ಹಾಗೂ ಸಾರ್ವಜನಿಕರಿಗೆ ನೀಡುವ ಸಲುವಾಗಿ ನಿಷೇಧಿತ ಪ್ಲಾಸ್ಟಿಕ್ ಬಳಸದಂತೆ ಹಲವು ಬಾರಿ ಅಂಗಡಿ ಹಾಗೂ ಮಳಿಗೆಗಳ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿತ್ತು. ಅಲ್ಲದೆ ಹಲವು ಸಭೆಗಳನ್ನು ನಡೆಸಿ, ಅರಿವು ಮೂಡಿಸಲಾಗಿತ್ತು.
ಆದಾಗ್ಯೂ ಕೆಲವು ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ಬಗ್ಗೆ ನಗರಸಭೆಯ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಮಂಗಳವಾರದಂದು ನಗರಸಭೆ ವತಿಯಿಂದ ನಗರದ ವಿವಿಧ ಅಂಗಡಿಗಳಿಗೆ ದಿಢೀರ್ ದಾಳಿ ನಡೆಸಿ, ನಿಷೇಧಿತ ಪ್ಲಾಸ್ಟಿಕ್ ಬಳಕೆ ಕುರಿತಂತೆ ಪರಿಶೀಲನೆ ನಡೆಸಲಾಗಿದೆ.
ವಿವಿಧ ಅಂಗಡಿಗಳಿಂದ ಸುಮಾರು 30 ಕೆ.ಜಿ.ಯಷ್ಟು ನಿಷೇಧಿತ ಪ್ಲಾಸ್ಟಿಕ್ ಅನ್ನು ವಶಕ್ಕೆ ಪಡೆದು, ಅಂಗಡಿಕಾರರಿಗೆ ಅಂತಿಮ ಎಚ್ಚರಿಕೆ ನೀಡಲಾಗಿದೆ. ಈಗಾಗಲೆ ನಗರದ ವಿವಿಧ ಅಂಗಡಿ, ಮಳಿಗೆಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ಸ್ಥಗಿತಗೊಂಡಿದ್ದು, ಬರುವ ದಿನಗಳಲ್ಲಿ ಪ್ಲಾಸ್ಟಿಕ್ ನಿಷೇಧ ಕಟ್ಟುನಿಟ್ಟಾಗಿ ಜಾರಿಗೊಳ್ಳಲಿದೆ ಎಂದು ನಗರಸಭೆ ಪೌರಾಯುಕ್ತ ಸುನೀಲ್ ಪಾಟೀಲ್ ತಿಳಿಸಿದ್ದಾರೆ.
ನಗರಸಭೆ ಪರಿಸರ ಅಭಿಯಂತರ ಅಶೋಕ್ಕುಮಾರ್ ಸಜ್ಜನ, ಕಚೇರಿ ವ್ಯವಸ್ಥಾಪಕ ಮಂಜುನಾಥ ಬೆಲ್ಲದ, ಹಿರಿಯ ಆರೋಗ್ಯ ನಿರೀಕ್ಷಕಿ ಜಯಶೀಲ ಸೇರಿದಂತೆ ಇತರರು ದಾಳಿಯಲ್ಲಿ ಪಾಲ್ಗೊಂಡಿದ್ದರು.