ಹನುಮ ಜಯಂತಿ; ಅಂಜನಾದ್ರಿ ಬೆಟ್ಟದಲ್ಲಿ ಅದ್ಧೂರಿ ಆಚರಣೆ
ಕೊಪ್ಪಳ, ಏಪ್ರಿಲ್ 16: ಗಂಗಾವತಿ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಇಂದು (ಏ. 16) ಹನುಮ ಜಯಂತ್ಯುತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ 40 ಸಾವಿರಕ್ಕೂ ಹೆಚ್ಚು ಹನುಮ ಮಾಲಾಧಾರಿಗಳು ಆಗಮಿಸುವ ನಿರೀಕ್ಷೆ ಇದ್ದು, ಗಂಗಾವತಿ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಸಕಲ ಸಿದ್ಧತೆ ಕೈಗೊಂಡಿದೆ. ಕಳೆದ ಮೂರು ದಿನಗಳ ಹಿಂದೆ ಹನುಮ ಜಯಂತಿ ಅಂಗವಾಗಿ ಕಾಶಿ, ಅಯೋಧ್ಯೆ, ವಾರಣಾಸಿ ಸೇರಿದಂತೆ ವಿವಿಧ ಧಾರ್ಮಿಕ ಕ್ಷೇತ್ರಗಳಿಂದ ಆಗಮಿಸಿದ್ದ ಸಾಧು- ಸಂತರು ಋಷಿಮುಖ ಬೆಟ್ಟದಿಂದ ಅಂಜನಾದ್ರಿಯವರೆಗೆ ಕುಂಭ ಮೆರವಣಿಗೆ ಮಾಡಿ ಕುಂಭದಲ್ಲಿ ತಂದಿದ್ದ ತುಂಗಭದ್ರೆಯ ಜಲದಿಂದ ಹನುಮನ ಮೂರ್ತಿಗೆ ಜಲಾಭಿಷೇಕ ಮಾಡಿದರು.
ಶನಿವಾರ ಹನುಮ ಜಯಂತಿ ಅಂಗವಾಗಿ ಅಂಜನಾದ್ರಿ ಬೆಟ್ಟದ ದೇವಸ್ಥಾನದ ಮುಂಭಾಗದಲ್ಲಿ ಪವಮಾನ ಹೋಮ ಸೇರಿದಂತೆ ವಿವಿಧ ಹೋಮಗಳು, ಅಭಿಷೇಕ ಸೇರಿದಂತೆ ಸಂಕೀರ್ತನೆ ನಡೆಯಲಿವೆ. ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಕೊರೊನಾ ಹಿನ್ನೆಲೆ ಅದ್ಧೂರಿ ಹನುಮ ಜಯಂತಿ ಆಚರಣೆಗೆ ನಿಯಂತ್ರಣ ಹೇರಲಾಗಿತ್ತು. ಈಗ ಕೊರೊನಾ ಪ್ರಕರಣಗಳು ಕಡಿಮೆಯಾಗಿರುವುದರಿಂದ ಅದ್ಧೂರಿ ಹನುಮ ಜಯಂತಿಗೆ ಭಕ್ತರು ಮುಂದಾಗಿದ್ದಾರೆ.

ದೇವಸ್ಥಾನಕ್ಕೆ ಮುಕ್ತ ಅವಕಾಶ
ಅಂಜನಾದ್ರಿ ಬೆಟ್ಟಕ್ಕೆ ತೆರಳಲು ಭಕ್ತರಿಗೆ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಮುಕ್ತ ಅವಕಾಶ ಕಲ್ಪಿಸಿದೆ. ಯಾವುದೇ ನಿರ್ಬಂಧ ಇಲ್ಲದೆ ನೇರವಾಗಿ ಆಯಾ ಜಿಲ್ಲೆಗಳಿಂದ ಬರುವ ಭಕ್ತರು ಅಂಜನಾದ್ರಿ ಬೆಟ್ಟವೇರಲು ಆನೆಗೊಂದಿ-ಮುನಿರಾಬಾದ್ ಮಾರ್ಗವಾಗಿ ಹೋಗಲು ಅವಕಾಶ ನೀಡಿದೆ. ಬೆಟ್ಟ ಏರಲು ಇಕ್ಕಟ್ಟಾದ ಮಾರ್ಗ ಇರುವುದರಿಂದ ಭಕ್ತರು ನಿಧಾನವಾಗಿ ಬೆಟ್ಟ ಏರಿ ದರ್ಶನ ಪಡೆದ ನಂತರ ಚಿಕ್ಕರಾಂಪುರ ಮಾರ್ಗವಾಗಿ ತೆರಳಲು ಅವಕಾಶ ನೀಡಿದೆ. ಚಿಕ್ಕರಾಂಪುರ ಸನಿಹದಲ್ಲಿ ಬರುವ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿದೆ.
ಹನುಮ ಮಾಲಾಧಾರಿಗಳು ನೇರವಾಗಿ ಬೆಟ್ಟಕ್ಕೆ ತೆರಳಿ ಮಾಲಾ ವಿಸರ್ಜನೆ ಮಾಡಲು ಸೂಚಿಸಿದೆ. ಈ ಬಾರಿ ಅಂಜನಾದ್ರಿ ಬೆಟ್ಟದಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತರು ಮಾಲೆ ವಿಸರ್ಜನೆ ಮಾಡುತ್ತಿದ್ದು, ಕಟ್ಟುನಿಟ್ಟಿನ ಕ್ರಮಕ್ಕೆ ತಾಲೂಕು ಆಡಳಿತ ಮುಂದಾಗಿದೆ.

200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ
ಶಾಂತಿ ಸುವ್ಯವಸ್ಥೆಗಾಗಿ ಪೊಲೀಸ್ ಇಲಾಖೆ 200ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಿದೆ. ಐಆರ್ಬಿ 3 ತುಕಡಿ, ಕೆಎಸ್ಆರ್ಪಿ 3, ಡಿಆರ್ಪಿ 6, ಪಿಎಸ್ಐ 20 ಅಧಿಕಾರಿಗಳು, ಡಿವೈಎಸ್ಪಿ 1 ಹಾಗೂ 200ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ವಾಹನಗಳ ನಿಲುಗಡೆಗೆ ಮುನಿರಾಬಾದ್, ಸಣ್ಣಾಪುರ ಮತ್ತು ಪಂಪಾ ಸರೋವರ ಬಳಿ ಪಾರ್ಕಿಂಗ್ಗೆ ವ್ಯವಸ್ಥೆ ಮಾಡಲಾಗಿದೆ.
ಅಂಜನಾದ್ರಿ ಬೆಟ್ಟದಲ್ಲಿ ಹನುಮ ಜಯಂತಿ ಅಂಗವಾಗಿ ಮಾಲಾಧಾರಿಗಳು ಅಧಿಕ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದ್ದು, ಭಕ್ತರಿಗೆ ವೇದಪಾಠಾ ಶಾಲೆಯ ಬಳಿ ಪ್ರಸಾದ ಮತ್ತು ಪಂಚಾಮೃತ ವ್ಯವಸ್ಥೆ ಕೈಗೊಳ್ಳಲಾಗಿದೆ. ಬೆಟ್ಟಏರಲು ಮತ್ತು ಇಳಿಯಲು ಒನ್ವೇ ಮಾಡಲಾಗಿದೆ ಎಂದು ಗಂಗಾವತಿ ತಹಶೀಲ್ದಾರ ನಾಗರಾಜ ತಿಳಿಸಿದ್ದಾರೆ.
ಅಂಜನಾದ್ರಿ ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವ ಹಿನ್ನೆಲೆ 200ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಲಾಗಿದೆ. ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಗಂಗಾವತಿ ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ ಹೇಳಿದರು.












Click it and Unblock the Notifications