ಶಿವರಾತ್ರಿ; ರೈತರಿಂದ ನೇರವಾಗಿ ಗ್ರಾಹಕರಿಗೆ ಹಣ್ಣು ಪೂರೈಕೆ
ಕೊಪ್ಪಳ, ಫೆಬ್ರವರಿ 27; ಕೊಪ್ಪಳದಲ್ಲಿ ಅಣಬೆ, ಜೇನು ಹಾಗೂ ವಿವಿಧ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ಮೇಳ ಆರಂಭವಾಗಿದೆ. ಮಾರ್ಚ್ 1ರ ತನಕ ನಗರದ ತೋಟಗಾರಿಕೆ ಉಪ ನಿರ್ದೇಶಕರ ಕಛೇರಿ ಆವರಣದಲ್ಲಿ ಮೇಳ ನಡೆಯಲಿದೆ.
ತೋಟಗಾರಿಕೆ ಇಲಾಖೆ ವತಿಯಿಂದ ಅಣಬೆ, ಜೇನು ಹಾಗೂ ವಿವಿಧ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಕೊಪ್ಪಳ ಜಿಲಾಧಿಕಾರಿ ವಿಕಾಸ್ ಕೀಶೊರ್ ಸುರಳ್ಕರ್ ಚಾಲನೆ ನೀಡಿದರು. "ಉತ್ತಮ ಗುಣಮಟ್ಟದ ಬೆಳೆಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸಲು ಆಯೋಜಿಸಲಾದ ಈ ಮೇಳವು ತುಂಬಾ ಸಹಕಾರಿಯಾಗಲಿದೆ" ಎಂದರು.
ಮಹಾ ಶಿವರಾತ್ರಿ ಪ್ರಯುಕ್ತ ರೈತರಿಂದಲೇ ನೇರವಾಗಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಣ್ಣುಗಳನ್ನು ಮಾರಾಟಕ್ಕೆ ಅವಕಾಶ ಕಲ್ಪಿಸಲು ಮೇಳವನ್ನು ಆಯೋಜನೆ ಮಾಡಲಾಗಿದೆ. ದ್ರಾಕ್ಷಿ, ದಾಳಿಂಬೆ, ಪೇರಲ, ಅಂಜೂರ, ಕಲ್ಲಂಗಡಿ, ಕರಬೂಜ, ಬಾಳೆ, ಪಪ್ಪಾಯಿ ಹಣ್ಣುಗಳು, ಅಣಬೆ ಮತ್ತು ಜೇನು ಪ್ರದರ್ಶನ ಹಾಗೂ ಮಾರಾಟ ನಡೆಯುತ್ತಿದೆ.
ಮೇಳದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ತಡೆಯುವ ಉದ್ದೇಶದಿಂದ ಪರಿಸರ ಸ್ನೇಹಿ ಬ್ಯಾಗ್ಗಳನ್ನು ತಯಾರು ಮಾಡಲಾಗಿದೆ. ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ. ಫೌಜಿಯಾ ತರನ್ನುಮ್ ಈ ಬ್ಯಾಗ್ ಬಿಡುಗಡೆ ಮಾಡಿದರು.

ವಿವಿಧ ತಳಿಯ ಹಣ್ಣುಗಳು
ದ್ರಾಕ್ಷಿ, ದಾಳಿಂಬೆ, ಪೇರಲ, ಅಂಜೂರ, ಕಲ್ಲಂಗಡಿ, ಕರಬೂಜ, ಬಾಳೆ, ಪಪ್ಪಾಯಿ, ಅಣಬೆ ಮತ್ತು ಜೇನು ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಒಟ್ಟು 12 ಸ್ಟಾಲ್ ಸ್ಥಾಪಿಸಲಾಗಿದೆ. ಕಲ್ಲಂಗಡಿ, ಕರಬೂಜ, ಪಪ್ಪಾಯ, ಪೇರಲ, ಅಂಜೂರ ಮತ್ತು ಬಾಳೆ ಹಣ್ಣುಗಳು ಹಾಗೂ ಜೇನು, ಅಣಬೆಯ ಪ್ರದರ್ಶನ ಪ್ರೇಕ್ಷಕರ ಗಮನ ಸೆಳೆಯುವಂತಿದೆ.

ಯಾವ-ಯಾವ ಹಣ್ಣುಗಳು
ಭಗವಾ, ಕೇಸರ ಹಾಗೂ ವಿವಿಧ ತಳಿಯ ದಾಳೆಂಬೆ ಹಣ್ಣುಗಳು. ಥಾಮ್ಸಾನ್ ಸೀಡ್ಲೆಸ್, ಸೋನಾಕಾ, ಸೂಪರ ಸೋನಾಕಾ, ಬೆಂಗಳೂರು ಬ್ಲ್ಯೂ, ಕೃಷ್ಣ ಶರದ್, ರೆಡ್ ಗ್ಲೋಬ್, ಮಾಣಿಕ್ ಚಮನ್, ಒಣದ್ರಾಕ್ಷಿ ಹಾಗೂ ವಿವಿಧ ತಳಿಯ ದ್ರಾಕ್ಷಿಗಳು. ಥೈವಾನ್ ಪಿಂಕ್, ಲಕ್ನೋ-49, ಅಲಹಾಬಾದ್ ಸಫೇದ ಹಾಗೂ ವಿವಿಧ ತಳಿಯ ಪೇರಲ ಹಣ್ಣುಗಳು. ಸುಗರ್ ಬೇಬಿ, ನಾಮಧಾರಿ, ಹಳದಿ ಕಲ್ಲಂಗಡಿ, ಬ್ಲಾಕ್ ಕಲ್ಲಂಗಡಿ ಹಾಗೂ ವಿವಿಧ ತಳಿಯ ಕಲ್ಲಂಗಡಿ ಹಣ್ಣುಗಳು ಮೇಳದಲ್ಲಿವೆ.

ಹಣ್ಣುಗಳು ಮತ್ತು ವೈನ್ಗಳಿವೆ
ರೆಡ್ ಲೇಡಿ, ರೆಡ್ ಲೇಡಿ-786 ಹಾಗೂ ವಿವಿಧ ತಳಿಯ ಪಪ್ಪಾಯ ಹಣ್ಣುಗಳು. ನೈಟ್ಪೆಟ್, ಜವಾರಿ ತಳಿಯ ಕರಬೂಜ ಸೇರಿದಂತೆ ವಿವಿಧ ತಳಿಯ ಹಣ್ಣುಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ.
ವೈನ್, ಅನಾರದಾನ, ವಿವಿಧ ಹಣ್ಣುಗಳ ಜ್ಯೂಸ್, ಚಾಕಲೇಟ್, ಸಾಬೂನು, ಪೇಸ್-ವಾಷ್, ಶ್ಯಾಂಪೂ, ಪೇಸ್-ಪ್ಯಾಕ್, ಪೇಸ್-ಸ್ಕರ್ಬ, ಪೇಸ್-ಮಾಸ್ಕ್ ಹಾಗೂ ವಿವಿಧ ಉತ್ಪನ್ನಗಳು ಇವೆ. ಡ್ರೈಅಣಬೆ, ಫ್ರಶ್ ಅಣಬೆ, ಅಣಬೆ ಉಪ್ಪಿನಕಾಯಿ, ಅಣಬೆ ಹಿಂಡಿ (ಚಟ್ನಿ). ಜೇನು ತುಪ್ಪ ಮತ್ತು ಇದರಿಂದ ತಯಾರಿಸಿದ ಜ್ಯಾಮ್, ಕ್ಯಾಂಡಿ ಹಾಗೂ ಇನ್ನಿತರೆ ಆಯುರ್ವೇದ ಉತ್ಪನ್ನಗಳು ಮಾರಾಟ ಮೇಳದಲ್ಲಿ ಲಭ್ಯವಿದೆ.

ಜನರಿಗೆ ಮಾಹಿತಿ ನೀಡಲಾಗುತ್ತಿದೆ
ತೋಟಗಾರಿಕೆ ಕ್ಷೇತ್ರದಲ್ಲಿ ಅಭಿವೃದ್ಧಿಪಡಿಸಿದ ಸಸಿಗಳನ್ನು ಮಾರಾಟಕ್ಕೆ ಇಡಲಾಗಿದೆ. ವಿಶೇಷವಾಗಿ ದ್ರಾಕ್ಷಿ, ದಾಳಿಂಬೆ, ಕಲ್ಲಂಗಡಿ, ಪೇರಲ, ಅಂಜೂರ ಮತ್ತು ಕರಬೂಜ ಹಣ್ಣುಗಳನ್ನು ಸೇವಿಸುವುದರಿಂದ ಸಿಗುವ ಪೋಷಕಾಂಶಗಳ ಕುರಿತು ಹಾಗೂ ರೈತರಿಗೆ ದೊರಕುವ ಇಲಾಖೆಯ ಸೇವೆಗಳ ಮಾಹಿತಿ ಫಲಕಗಳನ್ನು ಮೇಳದಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ.

ಪ್ಲಾಸ್ಟಿಕ್ ಬಳಕೆ ತಡೆ ಬಗ್ಗೆ ಜಾಗೃತಿ
ಹಣ್ಣುಗಳ ಮೇಳದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ತಡೆಯುವ ಉದ್ದೇಶದಿಂದ ಕಾರ್ಯಕ್ರಮದಲ್ಲಿ ಪರಿಸರ ಸ್ನೇಹಿ ಬ್ಯಾಗ್ ಗಳನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ. ಫೌಜಿಯಾ ತರನ್ನುಮ್ ಬಿಡುಗಡೆಗೊಳಿಸಿದರು.












Click it and Unblock the Notifications