ಕೊಪ್ಪಳ; ಅಂಚೆ ಕಚೇರಿ ರಫ್ತು ಕೇಂದ್ರ ಉದ್ಘಾಟನೆ, ರೈತರಿಗೆ ಅನುಕೂಲ
ಕೊಪ್ಪಳ, ಆಗಸ್ಟ್ 22: ಕೊಪ್ಪಳದಲ್ಲಿ ಅಂಚೆ ಕಚೇರಿ ರಫ್ತು ಕೇಂದ್ರವನ್ನು ಉದ್ಘಾಟನೆ ಮಾಡಲಾಗಿದೆ. ಇದರಿಂದಾಗಿ ರೈತರಿಗೆ ಅನುಕೂಲವಾಗಲಿದ್ದು, ಮಾವು, ರೇಷ್ಮೆ, ಸಿರಿಧಾನ್ಯಗಳ ರಫ್ತಿಗೆ ಸಹಾಯಕವಾಗಲಿದೆ.
ಕೊಪ್ಪಳದ ಸಂಸದ ಕರಡಿ ಸಂಗಣ್ಣ ಕೊಪ್ಪಳ ಜಿಲ್ಲೆಯ ಪ್ರಧಾನ ಅಂಚೆ ಕಚೇರಿ ಆವರಣದಲ್ಲಿ ಅಂಚೆ ಕಚೇರಿ ರಫ್ತು ಕೇಂದ್ರ (dak ghar niryat kendra)ವನ್ನು ಉದ್ಘಾಟನೆ ಮಾಡಿದರು.

ಸಂಸದರು ಮಾತನಾಡಿ, "ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರದಲ್ಲಿ 1001 ಅಂಚೆ ಕಚೇರಿ ರಫ್ತು ಕೇಂದ್ರಗಳನ್ನು ಪ್ರಾರಂಭಿಸಲು ಯೋಜನೆ ರೂಪಿಸಿದ್ದಾರೆ. ಇದರ ಭಾಗವಾಗಿ ಕರ್ನಾಟಕ ರಾಜ್ಯದಲ್ಲಿ 73 ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತಿದೆ. ಈ ಯೋಜನೆಯಡಿ ಕೊಪ್ಪಳ ಲೋಕಸಭಾ ಕ್ಷೇತ್ರದ ಕೊಪ್ಪಳ ಮತ್ತು ಸಿಂಧನೂರು ಒಳಗೊಂಡಿದೆ" ಎಂದರು.
ರೈತರಿಗೆ ಅನುಕೂಲವಾಗಲಿದೆ; ಸಂಸದರು ಮಾತನಾಡಿ, "ಅಂಚೆ ಕಚೇರಿ ರಫ್ತು ಕೇಂದ್ರದಿಂದ ಸಣ್ಣ ಹಿಡುವಳಿದಾರರಿಗೆ, ರೇಷ್ಮೆ, ಸಿರಿಧಾನ್ಯಗಳ ರಫ್ತಿಗೆ ಎಲ್ಲಾ ರೈತರಿಗೂ ಅನುಕೂಲವಾಗಲಿದೆ. ಇದರಿಂದಾಗಿ ರೈತರು ತಮ್ಮ ಬದುಕನ್ನು ಕಟ್ಟಿಕೊಳ್ಳಬಲ್ಲರು. ರೈತರು ಸಹ ದೇಶದ ಆರ್ಥಿಕತೆಯನ್ನು ಹೆಚ್ಚಿಸಬಲ್ಲರು ಎಂಬ ಪರಿಕಲ್ಪನೆ ಮೂಡಿಸುವುದರ ಜೊತೆಗೆ ಆತ್ಮವಿಶ್ವಾಸ ಮೂಡಿಸುವ ಕೆಲಸ ಈ ರಫ್ತು ಕೇಂದ್ರಗಳಿಂದ ಆಗಲಿದೆ" ಎಂದು ಹೇಳಿದರು.
"ರಾಜ್ಯದ ಕೃಷಿ ಮತ್ತು ತೋಟಗಾರಿಕಾ ಕ್ಷೇತ್ರಗಳಲ್ಲಿ ಅತೀ ವೇಗವಾಗಿ ಬೇಳೆಯುತ್ತಿರುವ ಜಿಲ್ಲೆ ಕೊಪ್ಪಳ. ಈ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂಚೆ ಕಚೇರಿ ರಫ್ತು ಕೇಂದ್ರಗಳ ಮಾಹಿತಿಯನ್ನು ಎಲ್ಲಾ ರೈತರಿಗೆ, ಬೆಳೆಗಾರರಿಗೆ ಸಿಗುವಂತಾಗಬೇಕು. ಎರಡು ಮೂರು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಬೇಕು" ಎಂದು ಸಲಹೆ ನೀಡಿದರು.
ಕೊಪ್ಪಳ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಕೃಷ್ಣ ಉಕ್ಕುಂದ್ ಮಾತನಾಡಿ, "ಕೊಪ್ಪಳ ಜಿಲ್ಲೆಯಲ್ಲಿ ಸಾಕಷ್ಟು ಕೃಷಿ ಮತ್ತು ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಈ ಹಿಂದೆ ದಾಳಿಂಬೆಯನ್ನು ಯುರೋಪ್ ದೇಶಕ್ಕೆ ರಫ್ತು ಮಾಡಿದ ಕೀರ್ತಿ ನಮ್ಮ ಕೊಪ್ಪಳ ಹಾಗೂ ಕುಷ್ಟಗಿಯದ್ದಾಗಿದೆ" ಎಂದರು.
"ಕೊಪ್ಪಳ ಕೇಸರ ಮಾವಿಗೂ ಎಲ್ಲಿಲ್ಲದ ಬೇಡಿಕೆಯಿದೆ. ಇತ್ತೀಚೆಗೆ ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಸಸ್ಯಸಂತೆಯಲ್ಲಿ ಈ ತಳಿಯ ಸುಮಾರು 70 ಸಾವಿರಕ್ಕೂ ಅಧಿಕ ಸಸಿಗಳು ಮಾರಾಟವಾಗಿರುವುದು ವಿಶೇಷ. ನಮ್ಮ ದೇಶದಲ್ಲಿ ಗುಜರಾತ್ ನಂತರ ಕೊಪ್ಪಳ ಜಿಲ್ಲೆಯಲ್ಲಿಯೇ ಹೆಚ್ಚು ಕೇಸರ ಮಾವು ಬೆಳೆಯಲಾಗುತ್ತಿದೆ. ಗುಜರಾತಿನ ಕೇಸರ ಮಾವು ಜೂನ್ ಮಾಹೆಯಲ್ಲಿ ಬರಲಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಏಪ್ರಿಲ್ ತಿಂಗಳಿನಿಂದ ಹಣ್ಣು ಪ್ರಾರಂಭವಾಗಲಿದೆ" ಎಂದು ಹೇಳಿದರು.
"ಈಗ ದೇಶದಲ್ಲಿ ಈ ಹಣ್ಣಿಗೆ ಸಾಕಷ್ಟು ಬೇಡಿಕೆ ಇದೆ. ಅಂಚೆ ಕಚೇರಿ ರಫ್ತು ಕೇಂದ್ರಗಳ ಮೂಲಕ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕೊಪ್ಪಳ ಕೇಸರ ಮಾವು ಪೂರೈಕೆ ಮಾಡಲು ನಮ್ಮ ರೈತರಿಗೆ ಅವಕಾಶ ಸಿಕ್ಕಿದೆ. ಈ ಬಗ್ಗೆ ಜಿಲ್ಲೆಯ ರೈತರಿಗೆ ಸೂಕ್ತ ಮಾಹಿತಿ ನೀಡುವುದರ ಜೊತೆಗೆ ತರಬೇತಿ ಕಾರ್ಯಾಗಾರಗಳನ್ನು ಏರ್ಪಡಿಸಲಾಗುವುದು" ಎಂದು ತಿಳಿಸಿದರು.
ಅಂಚೆ ಕಚೇರಿ ರಫ್ತು ಕೇಂದ್ರದ ಬಗ್ಗೆ; ವಿವಿಧ ಉತ್ಪನ್ನಗಳ ರಫ್ತು ಉತ್ತೇಜನ ಮಾಡಲು ಅಂಚೆ ಕಚೇರಿ ರಫ್ತು ಕೇಂದ್ರವನ್ನು ಕೇಂದ್ರ ಸರ್ಕಾರ ಆರಂಭಿಸುತ್ತಿದೆ. ರಫ್ತಿಗೆ ಸಂಬಂಧಿಸಿದಂತೆ ಎಲ್ಲಾ ಸೇವೆ, ಮಾಹಿತಿಯನ್ನು ನೀಡುವ ಒನ್ ಸ್ಟಾಪ್ ಕೇಂದ್ರ ಇದಾಗಿದೆ. ನಗರ ಮತ್ತು ಪಟ್ಟಣದ ಮಟ್ಟಕ್ಕೆ ರಫ್ತು ತಲುಪಿಸಲು ಇದು ಒಂದು ಪ್ರಮುಖ ಕೇಂದ್ರವಾಗಿದೆ. ಅಂಚೆ ಕಚೇರಿ ರಫ್ತು ಕೇಂದ್ರದ ಮೂಲಕ ಆರ್ಥಿಕ ವಹಿವಾಟಿಗೆ ಸಹ ಸರ್ಕಾರ ಅನುಕೂಲ ಮಾಡಿಕೊಟ್ಟಿದೆ.











Click it and Unblock the Notifications