ಕೊನೆ ಆಸೆಯಂತೆ ಸ್ನೇಹಿತರನ್ನು ಭೇಟಿಯಾಗಿ ಮಾರನೇ ದಿನ ಕೊನೆಯುಸಿರೆಳೆದ ಬಾಲಕ
ಕೊಪ್ಪಳ, ಜುಲೈ 31: ಶನಿವಾರ ವಿಶ್ವದಾದ್ಯಂತ ಸ್ನೇಹಿತರ ದಿನವನ್ನಾಚರಿಸಲಾಗಿದೆ. ತಮ್ಮ ಕಷ್ಟ ಸುಖಗಳಲ್ಲಿ, ನೋವು -ನಲಿವುಗಳಲ್ಲಿ ಒಂದಾಗುವ ಸ್ನೇಹಿತರನ್ನು ನೆನೆದು, ಅವರೊಂದಿಗೆ ಸಮಯ ಕಳೆದು ಸಂಭ್ರಮಿಸಲಾಗಿದೆ. ಆದರೆ ಕೊಪ್ಪಳದಲ್ಲಿ ಸ್ನೇಹಿತರ ದಿನಚಾರನಣೆಯನ್ನಾಚರಿಸಿಕೊಂಡ ಬಾಲಕನೊಬ್ಬ ಮಾರನೆಯ ದಿನವೇ ಸಾವನ್ನಪ್ಪಿರುವ ಮನ ಕಲಕುವ ಘಟನೆ ನಡೆದಿದೆ.
ಈ ಮನಕಲಕುವ ಘಟನೆಗೆ ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ನಡೆದಿದ್ದು, 7ನೇ ತರಗತಿ ಓದುತ್ತಿದ್ದ ಸುಹಾಸ್ ಸೌದ್ರಿ ಎಂಬ ಬಾಲಕ ಆನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಸುಹಾಸ್ ಬಾಲ್ಯದಿಂದಲೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ, ಕಳೆದ ಕೆಲವು ದಿನಗಳಿಂದ ಆತನ ಆರೋಗ್ಯ ಸ್ಥಿತಿ ಗಂಭೀರ ಹಂತ ತಲುಪಿತ್ತು. ಆತನ ಕಿಡ್ನಿ ಸಮಸ್ಯೆಗೆ ಪೋಷಕರು ಸಾಕಷ್ಟು ಚಿಕಿತ್ಸೆ ಕೊಡಿಸಿದ್ದರು. ಆದರೂ ಸಹ ಕಾಯಿಲೆ ಮಾತ್ರ ವಾಸಿಯಾಗಿರಲಿಲ್ಲ.
ಕಳೆದ ಒಂದು ತಿಂಗಳಿನಿಂದ ಸುಹಾಸ್ ಕಿಡ್ನಿ ಸಮಸ್ಯೆಯಿಂದ ತೀವ್ರ ಅನಾರೋಗ್ಯಕ್ಕೊಳಗಾಗಿ ಮನೆಯಲ್ಲಿಯಲ್ಲಿಯೇ ಇದ್ದ. ತನ್ನ ಅನಾರೋಗ್ಯದ ನಡುವೆಯೂ ಬಾಲಕ ಸುಹಾಸ್ ತನ್ನ ಸಹಪಾಠಿಗಳನ್ನು, ಶಿಕ್ಷಕರನ್ನು ಹಾಗೂ ಸ್ನೇಹಿತರನ್ನು ನೆನೆಸಿಕೊಳ್ಳುತ್ತಿದ್ದ. ಈ ಹಿನ್ನೆಲೆ ತನ್ನ ಮಗನ ಕೊನೆ ಆಸೆ ಈಡೇರಿಸಲು ಪೋಷಕರು ಶಾಲೆಗೆ ಕರೆದುಕೊಂಡು ಹೋಗಿದ್ದಾರೆ. ಸುಹಾಸ್ ಶಾಲಾ ಆವರಣದಲ್ಲಿ ಕಾರಿನಲ್ಲಿಯೇ ಮಲಗಿದ್ದ. ಆತನನ್ನು ನೋಡಿ ಇಡೀ ಶಾಲೆಯೇ ಕಣ್ಣೀರಿಟ್ಟಿತ್ತು. ಸುಹಾಸ್ ಸ್ನೇಹಿತರು ಆತನ ಪರಿಸ್ಥಿತಿಯನ್ನು ಕಂಡು ಕಣ್ಣೀರು ಹಾಕುತ್ತಲೇ ಫ್ರೆಂಡ್ಶಿಪ್ ಬ್ಯಾಂಡ್ ಕಟ್ಟಿದ್ದರು.

ಓದಿನಲ್ಲಿ ಟಾಪರ್ ಆಗಿದ್ದ ಸುಹಾಸ್ ಒಂದು ತಿಂಗಳ ಬಳಿಕ ಶಾಲೆಗೆ ಬಂದಿದ್ದರಿಂದ ಆತನ ಸ್ನೇಹಿತರು, ಶಿಕ್ಷಕರು, ಸಹಪಾಠಿಗಳು ಅನಾರೋಗ್ಯಕ್ಕೆ ತುತ್ತಾಗಿದ್ದ ಸುಹಾಸ್ನನ್ನು ಮಾತನಾಡಿಸಿದ್ದಾರೆ. ಆದೆ ತೀವ್ರ ಅನಾರೋಗ್ಯಕ್ಕೊಳಗಾಗಿದ್ದರಿಂದ ಬಾಲಕ ಸುಹಾಸ್ ಕಾರಿನಲ್ಲಿಯೇ ಮಲಗಿಕೊಂಡಿದ್ದ. ವಿದ್ಯಾರ್ಥಿಗಳು ಅಲ್ಲಿಗೆ ಬಂದು ಸುಹಾಸ್ನನ್ನು ಮಾತನಾಡಿಸಿ, ಆತನ ಸ್ಥಿತಿ ನೋಡಿ ಕಣ್ಣೀರಿಟಿದ್ದರು.

ಇನ್ನು ಸ್ನೇಹಿತರ ದಿನವಾಗಿದ್ದರಿಂದ ಕೆಲವು ಹುಡುಗರು ಸುಹಾಸ್ಗೆ ಫ್ರೆಂಡ್ಶಿಪ್ ಬ್ಯಾಂಡ್ ಕಟ್ಟಿ, ಸುಹಾಸ್ ಬೇಗನೇ ಗುಣಮುಖವಾಗಲಿ ಎಂದು ಹಾರೈಸಿದ್ದರು. ಆದರೆ,ವಿದಿಯಾಟ ಭಾನುವಾರ ಸುಹಾಸ್ ತನ್ನ ಕೊನೆಯುಸಿರೆಳೆದಿದ್ದಾನೆ. ಈ ಮೂಲಕ ಕುಟುಂಬದವರನ್ನು ದುಃಖಕ್ಕೆ ಮುಳುಗಿಸಿದ್ದಾನೆ. ನಿನ್ನೆಯಷ್ಟೆ ಗೆಳೆಯರ ದಿನವನ್ನಾಚರಿಸಿಕೊಂಡಿದ್ದ ಆತನ ಗೆಳೆಯರು ಕೂಡ ಸುಹಾಸ್ನನ್ನು ಕಳೆದುಕೊಂಡಿದ್ದಕ್ಕೆ ಕಣ್ಣೀರಿಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.












Click it and Unblock the Notifications