ಕೆ.ಕಲ್ಯಾಣ್ ದಾಂಪತ್ಯ ಕಲಹ ಪ್ರಕರಣ ಆರೋಪಿ ಗಂಗಾ ಕುಲಕರ್ಣಿ ಡೆತ್ ನೋಟ್ ಪತ್ತೆ
ಕೊಪ್ಪಳ, ಅಕ್ಟೋಬರ್ 29: ಚಿತ್ರ ಸಾಹಿತಿ ಕೆ.ಕಲ್ಯಾಣ್ ದಾಂಪತ್ಯದಲ್ಲಿ ಕಲಹ ಉಂಟುಮಾಡಿದ ಪ್ರಕರಣದಲ್ಲಿ ಆರೋಪಿಯಾಗಿದ್ದ ಗಂಗಾ ಕುಲಕರ್ಣಿ ಇಂದು ಕುಷ್ಟಗಿ ನ್ಯಾಯಾಲಯದ ಆವರಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರು ಬರೆದಿದ್ದರು ಎನ್ನಲಾದ ಎರಡು ಪುಟಗಳ ಡೆತ್ ನೋಟ್ ಪತ್ತೆಯಾಗಿದೆ.
ಮರಾಠಿ ಭಾಷೆಯಲ್ಲಿರುವ ಡೆತ್ ನೋಟ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಅದರಲ್ಲಿ ಗಂಗಾ ಕುಲಕರ್ಣಿ, "ನನ್ನ ಮೇಲೆ ಹಲವಾರು ಕೇಸುಗಳಿವೆ. ನನಗೆ ಇಬ್ಬರು ಮಕ್ಕಳಿದ್ದಾರೆ. ನನ್ನ ಕರ್ಮಕ್ಕೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ" ಎಂದು ಬರೆದು ಇನ್ನಿತರ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಕೆ. ಕಲ್ಯಾಣ ಪತ್ನಿ ಅಶ್ವಿನಿ ಹಾಗೂ ಅವರ ತಂದೆ ತಾಯಿಯಿಂದ ಹಣ ವರ್ಗಾಯಿಸಿಕೊಳ್ಳಲು ಮನೆಗೆಲಸದ ನೆಪದಲ್ಲಿ ಕಲ್ಯಾಣ್ ಅವರ ಮನೆ ಸೇರಿದ್ದ ಗಂಗಾ, ಆರೋಪಿ ಶಿವಾನಂದ ವಾಲಿ ಜೊತೆ ಕೈ ಜೋಡಿಸಿ ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು ಮೂಡಲು ಕಾರಣವಾಗಿದ್ದರು. ಈ ಕುರಿತು ಕೆ.ಕಲ್ಯಾಣ್ ದೂರು ನೀಡಿದ್ದರು. ಗ್ರಾಸ್ಥರೊಬ್ಬರಿಗೂ ಹಣ ವಂಚನೆ ಎಸಗಿದ್ದ ಆರೋಪ ಗಂಗಾ ಕುಲಕರ್ಣಿ ಮೇಲಿದ್ದು, ಈ ಸಂಬಂಧ ನವೆಂಬರ್ 3ರಂದು ಕುಷ್ಟಗಿಯ ನ್ಯಾಯಾಲಯದಲ್ಲಿ ವಿಚಾರಣೆ ನಿಗದಿಯಾಗಿತ್ತು. ಈ ಸಂಬಂಧ ವಕೀಲರನ್ನು ಭೇಟಿಯಾಗಲು ಕೊಪ್ಪಳದ ಕುಷ್ಟಗಿಯ ನ್ಯಾಯಾಲಯಕ್ಕೆ ಬಂದಿದ್ದ ಗಂಗಾ ಕುಲಕರ್ಣಿ ಇಂದು ಬೆಳಿಗ್ಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.












Click it and Unblock the Notifications