ರಕ್ತ ಹರಿಸಲು ಸಿದ್ಧ, ಬಂಗಾಳ ವಿಭಜನೆಗೆ ಬಿಡಲ್ಲ: ಮಮತಾ ಬ್ಯಾನರ್ಜಿ
ಕೋಲ್ಕತಾ ಜೂನ್ 7: ರಕ್ತವನ್ನು ಹರಿಸಲು ಸಿದ್ಧನಿದ್ದೇನೆ. ಆದರೆ ಪಶ್ಚಿಮ ಬಂಗಾಳ ರಾಜ್ಯವನ್ನು ವಿಭಜಿಸಲು ಬಿಡುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಕೆಲವು ನಾಯಕರು ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆಯಿಟ್ಟುರುವ ವಿಚಾರಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್(ಟಿಎಂಸಿ) ಅಧಿನಾಯಕಿ ಮಮತಾ ಬ್ಯಾನರ್ಜಿ ಈ ಪ್ರತಿಕ್ರಿಯೆ ನೀಡಿದ್ದಾರೆ.
ಟಿಎಂಸಿ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, "2024ರ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳವನ್ನು ಒಡೆಯುವ ಪ್ರಯತ್ನಗಳಿಗೆ ಕೇಸರಿ ಪಡೆ ಕೈಹಾಕಿದೆ. ಉತ್ತರ ಬಂಗಾಳದಲ್ಲಿ ದಶಕಗಳಿಂದ ಎಲ್ಲ ಸಮುದಾಯಗಳು ಸಾಮರಸ್ಯದಿಂದ ಜೀವನ ನಡೆಸುತ್ತಿವೆ,'' ಎಂದರು.
"ಮುಂಬುರುವ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯವನ್ನು ವಿಭಜಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಅದು ಕೆಲವೊಮ್ಮೆ ಗೋರ್ಖಾಲ್ಯಾಂಡ್ ಬೇಕು ಎಂದು ಒತ್ತಾಯಿಸುತ್ತದೆ. ಇನ್ನು ಕೆಲವೊಮ್ಮೆ ಉತ್ತರ ಬಂಗಾಳ ಪ್ರತ್ಯೇಕ ರಾಜ್ಯ ಬೇಕು ಎಂದು ಉಯಿಲು ಎಬ್ಬಿಸುತ್ತದೆ. ಅಗತ್ಯಬಿದ್ದರೆ ನನ್ನ ರಕ್ತವನ್ನು ಕೊಡಲು ಸಿದ್ಧಳಿದ್ದೇನೆ. ಆದರೆ ರಾಜ್ಯವನ್ನು ವಿಭಜಿಸಲು ಎಂದಿಗೂ ಬಿಡುವುದಿಲ್ಲ,'' ಎಂದು ಮಮತಾ ಬ್ಯಾನರ್ಜಿ ಪ್ರತಿಪಾದಿಸಿದರು.

ಪ್ರತ್ಯೇಕ ರಾಜ್ಯದ ಬೇಡಿಕೆ ವಿರೋಧ
ಕಾಮತಾಪುರ್ ವಿಮೋಚನಾ ಸಂಘಟನೆಯ ನಾಯಕ ಜೀವನ್ ಸಿಂಗ್, ಪ್ರತ್ಯೇಕ ಕಾಮತಾಪುರ್ ರಾಜ್ಯ ಮಾಡದಿದ್ದರೆ ಪಶ್ಚಿಮ ಬಂಗಾಳದಲ್ಲಿ ರಕ್ತಪಾತ ಹರಿಯಲಿದೆ ಎಂದು ಬೆದರಿಕೆ ಹಾಕಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ, "ಪ್ರತ್ಯೇಕ ಕಾಮತಾಪುರ್ ರಾಜ್ಯದ ಬೇಡಿಕೆಯನ್ನು ನಾನು ವಿರೋಧಿಸುತ್ತೇನೆ. ಈ ರೀತಿಯ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ,'' ಎಂದರು. "ಪ್ರತ್ಯೇಕ ರಾಜ್ಯದ ಬೇಡಿಕೆಯ ಹಿನ್ನೆಲೆಯಲ್ಲಿ ಕೆಲವರು ನನಗೆ ಬೆದರಿಕೆ ಹಾಕುತ್ತಿದ್ದಾರೆ. ಈ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಈ ರೀತಿಯ ಬೆದರಿಕೆಗಳ ಬಗ್ಗೆ ಹೆದರಿಕೊಳ್ಳುವುದಿಲ್ಲ,'' ಎಂದು ಮಮತಾ ಬ್ಯಾನರ್ಜಿ ಹೇಳಿದರು.
ಪ್ರತ್ಯೇಕ ರಾಜ್ಯಕ್ಕೆ ಬಿಜೆಪಿ ಶಾಸಕರ ಆಗ್ರಹ
ಕಳೆದ ತಿಂಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಪಶ್ವಿಮ ಬಂಗಾಳಕ್ಕೆ ಆಗಮಿಸಿದ್ದ ವೇಳೆ, ಉತ್ತರ ಬಂಗಾಳವನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಬೇಕು ಎಂದು ಪಶ್ವಿಮ ಬಂಗಾಳದ ಬಿಜೆಪಿ ಶಾಸಕರು ಮನವಿ ಮಾಡಿದ್ದರು.
ಪಶ್ವಿಮ ಬಂಗಾಳ ಬಿಜೆಪಿ ಮಾಜಿ ಅಧ್ಯಕ್ಷ, ಹಾಲಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್, ಉತ್ತರ ಬಂಗಾಳದ ಶಾಸಕರಾದ ಅನಂದಮಯ್ ಬರ್ಮನ್, ಶಿಖಾ ಚಟರ್ಜಿ ಉತ್ತರ ಬಂಗಾಳವು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶ ಆಗಬೇಕು ಎಂದು ಒತ್ತಾಯಿಸಿದ್ದಾರೆ.

"ಜಮ್ಮು ಮತ್ತು ಕಾಶ್ಮೀರದಿಂದ ಪ್ರತ್ಯೇಕವಾಗಿ ಲಡಾಖ್ ಕೇಂದ್ರಾಡಳಿತ ಪ್ರದೇಶ ಆಗಬಹುದಾದರೆ ಉತ್ತರ ಬಂಗಾಳ ಏಕೆ ಆಗಬಾರದು?. ಇದರಲ್ಲಿ ಏನು ಹಾನಿ ಇದೆ. ಉತ್ತರ ಬಂಗಾಳದ ಜನರು ದಶಕಗಳಿಂದ ಪ್ರತ್ಯೇಕ ರಾಜ್ಯ ಬೇಕು ಎಂದು ಒತ್ತಾಯಿಸುತ್ತಾ ಬಂದಿದ್ದಾರೆ. ಇವರ ಬೇಡಿಕೆಯನ್ನು ಈಡೇರಿಸುವ ಸಮಯ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಬಗ್ಗೆ ಗಮನಹರಿಸಬೇಕು,'' ಎಂದು ಶಾಸಕ ಅನಂದಮಯ್ ಬರ್ಮನ್ ಮನವಿ ಮಾಡಿದ್ದರು.

ಆದರೆ ಬಿಜೆಪಿಯ ಪ್ರತ್ಯೇಕ ರಾಜ್ಯದ ಬೇಡಿಕೆಗೆ ಟಿಎಂಸಿ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ರಾಜಕೀಯ ಲಾಭಕ್ಕಾಗಿ ಪಶ್ಚಿಮ ಬಂಗಾಳವನ್ನು ತುಂಡು ಮಾಡಲು ಬಿಜೆಪಿ ಯತ್ನಿಸುತ್ತಿದೆ ಎಂದು ಟಿಎಂಸಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications