ಮಮತಾ ಭರವಸೆ ಬಳಿಕ ಪ್ರತಿಭಟನೆ ಹಿಂದಕ್ಕೆ ಪಡೆದ ವೈದ್ಯರು
ಕೋಲ್ಕತಾ, ಜೂನ್ 17: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿಗೆ ಭದ್ರತೆ ಒದಗಿಸಲು ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭರವಸೆ ನೀಡಿದ ಬಳಿಕ ಪ್ರತಿಭಟನಾ ನಿರತ ವೈದ್ಯರು ಸೋಮವಾರ ತಮ್ಮ ಒಂದು ವಾರದ ಪ್ರತಿಭಟನೆಯನ್ನು ಅಂತ್ಯಗೊಳಿಸಿದ್ದಾರೆ.
31 ಕಿರಿಯ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆಡಳಿತ ಹಾಗೂ ಪೊಲೀಸ್ ಅಧಿಕಾರಿಗಳ ಜತೆಗೆ 90 ನಿಮಿಷಗಳ ಸುದೀರ್ಘ ಅವಧಿಯ ಸಭೆ ನಡೆಸಿದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಯಿತು.

'ನಮ್ಮ ವೈದ್ಯರ ಬಗ್ಗೆ ನಾವು ಹೆಮ್ಮೆ ಹೊಂದಿದ್ದೇವೆ. ನನ್ನ ಸರ್ಕಾರದ ವಿರುದ್ಧ ನೀವು ಸಿಟ್ಟಿಗೆದ್ದಿರಬಹುದು. ಆದರೆ, ದಯವಿಟ್ಟು ಕೆಲಸಕ್ಕೆ ಹಿಂದಿರುಗಿ. ನಿಮ್ಮ ಪ್ರತಿಭಟನೆಯನ್ನು ಈಗ ಅಂತ್ಯಗೊಳಿಸಿರುವುದಾಗಿ ಘೋಷಿಸಿದರೆ ನನಗೆ ಖುಷಿಯಾಗುತ್ತದೆ' ಎಂದು ಸಭೆಯ ಬಳಿಕ ಮಮತಾ ಬ್ಯಾನರ್ಜಿ ವೈದ್ಯರಿಗೆ ಹೇಳಿದ್ದಾರೆ. ಹಾಗೆಯೇ ಜನರೂ ಸಂವೇದನೆ ಹೊಂದಬೇಕು. ಎಲ್ಲ ರೋಗಿಗಳು ಕೆಟ್ಟವರಲ್ಲ ಎಂದಿದ್ದಾರೆ.
'ನಮಗೆ ಪರಿಹಾರ ಬೇಕಾಗಿರುವುದರಿಂದ ಇಲ್ಲಿ ಚರ್ಚೆಗೆ ಬಂದಿದ್ದೇವೆ. ನಿಮ್ಮಲ್ಲಿ ಒಳ್ಳೆಯ ಉದ್ದೇಶಗಳಿವೆ ಎಂದು ನಾವು ನಂಬಿದ್ದೇವೆ. ಸಾಧ್ಯವಾದರೆ ಈಗ ನಡೆದ ಅನಗತ್ಯ ಘಟನೆಗಳನ್ನು ತಡೆಯಲು ಸೂಕ್ತ ಕ್ರಮ ತೆಗೆದುಕೊಳ್ಳಿ' ಎಂದು ವೈದ್ಯರು, ಮಮತಾ ಅವರನ್ನು ತಮ್ಮ 'ರಕ್ಷಕಿ' ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ನಡೆದ ಘಟನೆಯ ಪರಿಣಾಮ ದೇಶದಾದ್ಯಂತ ವ್ಯಾಪಿಸಿ ಪ್ರತಿಭಟನೆಯ ಸ್ಥಿತಿ ನಿರ್ಮಾಣವಾಗಲು ಮಮತಾ ಬ್ಯಾನರ್ಜಿ ಅವರ ದುರಹಂಕಾರದ ವರ್ತನೆಯೇ ಕಾರಣ ಎಂದು ಬಿಜೆಪಿ ಸಂಸದ ಬಾಬುಲ್ ಸುಪ್ರಿಯೋ ಆರೋಪಿಸಿದ್ದಾರೆ.
'ಮಮತಾ ಅವರಿಗೆ ಅಹಂಕಾರ ಇಲ್ಲದೆ ಇದ್ದಿದ್ದರೆ ಮೊದಲ ದಿನವೇ ಗಾಯಾಳು ವೈದ್ಯರನ್ನು ಅವರು ಭೇಟಿಯಾಗಿ ಅವರಿಗೆ ಭದ್ರತೆ ಒದಗಿಸಬೇಕಿತ್ತು. ಆದರೆ, ಮಮತಾ ಅವರ ವಿರುದ್ಧವೇ ಹರಿಹಾಯ್ದರು. ಅವರ ವಿರುದ್ಧ ಎಸ್ಮಾ ಜಾರಿ ಮಾಡುವ ಬೆದರಿಕೆ ಹಾಕಿದರು' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications