ಚುನಾವಣೆ ಹೊಸ್ತಿಲಲ್ಲೇ ಬಂಗಾಳದಲ್ಲಿ ಮೈತ್ರಿಯಲ್ಲಿ ಅಸಮಾಧಾನದ ಹೊಗೆ
ಕೋಲ್ಕತಾ, ಮಾರ್ಚ್ 21: ಲೋಕಸಭೆ ಚುನಾವಣೆಗೂ ಮುನ್ನವೇ ಮಹಾಮೈತ್ರಿಕೂಟದ ಭಾಗಗಳಾದ ಕಾಂಗ್ರೆಸ್ ಮತ್ತು ಪಶ್ಚಿಮ ಬಂಗಾಳದ ಎಡಪಕ್ಷಗಳಲ್ಲಿ ಸಮನ್ವಯದ ಕೊರತೆ ಎದುರಾಗಿದೆ. ಪ್ರಮುಖ ಪಕ್ಷಗಳ ನಡುವೆ ಸೀಟು ಹಂಚಿಕೆಯಲ್ಲಿನ ಗೊಂದಲ ತಾರಕಕ್ಕೇರುವ ಲಕ್ಷಣಗಳು ಕಂಡುಬಂದಿವೆ.
ಈಗಾಗಲೇ 11 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿರುವ ಕಾಂಗ್ರೆಸ್, ಅದರಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಇದು ಪಶ್ಚಿಮ ಬಂಗಾಳದ ಆಡಳಿತಾರೂಢ ಟಿಎಂಸಿ, ಸಿಪಿಎಂ ಅಸಮಾಧಾನಕ್ಕೆ ಕಾರಣವಾಗಿದೆ.
'ಅಭ್ಯರ್ಥಿಗಳ ಪಟ್ಟಿಯ ವಿಚಾರದಲ್ಲಿ ನಮ್ಮ ಕಡೆಯಿಂದ ಮರು ಆಲೋಚನೆ ನಡೆಸುವ ಪ್ರಶ್ನೆಯೇ ಇಲ್ಲ' ಎಂದು ರಾಜ್ಯ ಕಾಂಗ್ರೆಸ್ ಮುಖಂಡ ಮತ್ತು ರಾಜ್ಯ ಸಭಾ ಸದಸ್ಯ ಪ್ರದೀಪ್ ಭಟ್ಟಾಚಾರ್ಯ ಸ್ಪಷ್ಟಪಡಿಸಿದ್ದಾರೆ.
ಈ ವಾರದ ಆರಂಭದಲ್ಲಿ ಕಾಂಗ್ರೆಸ್ ಒಟ್ಟು 11 ಲೋಕಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿತ್ತು. ಅದರಲ್ಲಿ 2014ರ ಚುನಾವಣೆಯಲ್ಲಿ ಟಿಎಂಸಿ ಗೆಲುವು ಸಾಧಿಸಿದ್ದ ರಾಯ್ಗಂಜ್ ಮತ್ತು ಮುರ್ಷಿದಾಬಾದ್ ಕೂಡ ಸೇರಿದೆ.
ಅತ್ತ ಕಾಂಗ್ರೆಸ್ ನಡೆಯಿಂದ ಕುಪಿತಗೊಂಡಿದ್ದರೂ ಎಡಪಕ್ಷಗಳು, ಮೈತ್ರಿಯನ್ನು ಉಳಿಸಿಕೊಳ್ಳುವ ಪ್ರಯತ್ನವಾಗಿ 2014ರಲ್ಲಿ ಕಾಂಗ್ರೆಸ್ ಜಯಗಳಿಸಿದ್ದ ನಾಲ್ಕು ಕ್ಷೇತ್ರಗಳಾದ ಬಹರಾಂಪುರ್, ಜಂಗಿಪುರ್, ಮಾಲ್ದಾ ಉತ್ತರ ಮತ್ತು ಮಾಲ್ದಾ ದಕ್ಷಿಣಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿಲ್ಲ.

ಐದು ಕ್ಷೇತ್ರದಲ್ಲಿ ಸ್ಪರ್ಧೆ ಬೇಡ
ದಕ್ಷಿಣ ಬಂಗಾಳದಲ್ಲಿನ ಐದು ಕ್ಷೇತ್ರಗಳಾದ ಡೈಮಂಡ್ ಹಾರ್ಬರ್, ಅಸನ್ಸೊಲ್, ತಮ್ಲೂಕ್, ಬೋಪ್ಲುರ್ ಮತ್ತು ಬಿಷ್ಣುಪುರ್ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ನಿಲ್ಲಿಸದಂತೆ ಎಡರಂಗದ ಪ್ರಸ್ತಾವ ಸಲ್ಲಿಸಿದೆ. ಈ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಯಾವುದೇ ಅಸ್ತಿತ್ವ ಹೊಂದಿಲ್ಲ ಎಂದು ಎಡ ಪಕ್ಷಗಳ ನಾಯಕರು ಹೇಳಿದ್ದಾರೆ.

ಒಪ್ಪಂದ ಬದ್ಧವಾಗದ ಕಾಂಗ್ರೆಸ್
'ಬಿಷ್ಣುಪುರ್ನಲ್ಲಿ ಕಾಂಗ್ರೆಸ್ ಹೆಚ್ಚೆಂದರೆ ಶೇ 2ರಷ್ಟು ಮತಗಳನ್ನು ಹೊಂದಿದೆ. ಇದು ಈಗ ಚರ್ಚೆಯ ವಿಷಯವಾಗಬಾರದು. ಈಗ ಪ್ರಶ್ನೆಯೆಂದರೆ ಎಡಪಕ್ಷಗಳು ಗೆದ್ದ ಆರು ಕ್ಷೇತ್ರಗಳಲ್ಲಿ ಹೊಂದಾಣಿಕೆಯ ಒಪ್ಪಂದಕ್ಕೆ ಕಾಂಗ್ರೆಸ್ ಏಕೆ ಬದ್ಧವಾಗಿಲ್ಲ ಎನ್ನುವುದು' ಎಂದು ಸಿಪಿಎಂ ನಾಯಕ ಮತ್ತು ಶಾಸಕ ಸುಜನ್ ಚಕ್ರವರ್ತಿ ಹೇಳಿದ್ದಾರೆ.

ಪರಸ್ಪರ ದೋಷಾರೋಪಣೆ
ಮೈತ್ರಿಕೂಟದ ಮಾತುಕತೆಯ ಪ್ರಯತ್ನಗಳು ವಿಫಲವಾಗುತ್ತಿರುವ ಬೆನ್ನಲ್ಲೇ ಪರಸ್ಪರ ದೋಷಾರೋಪ ಹೊರಿಸುವ ಚಟುವಟಿಕೆಗಳು ಆರಂಭವಾಗಿವೆ. ಈ ಪ್ರತ್ಯಾರೋಪದ ಬಂದೂಕಿನ ನಳಿಗೆಯನ್ನು ಎಡಪಕ್ಷಗಳತ್ತಲೇ ತಿರುಗಿಸಿರುವ ಕಾಂಗ್ರೆಸ್ನ ಭಟ್ಟಾಚಾರ್ಯ, ಕಾಂಗ್ರೆಸ್ ಮೈತ್ರಿಯನ್ನು ಬಯಸಿದೆ. ಎಡರಂಗ ಸೀಟು ಹಂಚಿಕೆಗೆ ಅಂಟಿ ಕುಳಿತಿದೆ ಎಂದು ಆರೋಪಿಸಿದ್ದಾರೆ.

ಆಗಲೂ ಗೆದ್ದಿದ್ದೆವು
ನಾವು ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದರೆ ನಮ್ಮ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ ಎಂದು ನಂಬಲು ಯಾವುದೇ ಕಾರಣವಿಲ್ಲ. ಈ ಹಿಂದೆ ನಡೆದ ಚುನಾವಣೆಗಳಲ್ಲಿ ನಾವು ಸೀಟುಗಳನ್ನು ಗೆದ್ದಾಗಲೂ ಈ ಪಕ್ಷಗಳು ರಾಜ್ಯದಲ್ಲಿ ಸಾಕಷ್ಟು ಪ್ರಬಲವಾಗಿದ್ದವು ಎಂದು ಅವರು ಹೇಳಿದ್ದಾರೆ.












Click it and Unblock the Notifications