ಬಂಗಾಳ ಚುನಾವಣೆ: ನಂದಿಗ್ರಾಮದಿಂದ ಸ್ಪರ್ಧಿಸಲು ಸಜ್ಜಾದ ಮಮತಾ
ಕೋಲ್ಕತಾ, ಜನವರಿ 18: "ಮೊದಲು 30 ಸ್ಥಾನಗಳನ್ನು ಗೆದ್ದು ನೋಡಿ, ಆಮೇಲೆ 294 ಸೀಟುಗಳ ಬಗ್ಗೆ ಕನಸು ಕಾಣುವಿರಂತೆ" ಎಂದು ಬಿಜೆಪಿಗೆ ಸವಾಲು ಹಾಕಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಂದು ಮಹತ್ವದ ಘೋಷಣೆ ಮಾಡಿದ್ದಾರೆ.
ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಸುವೇಂದು ಅಧಿಕಾರಿ ಅವರ ಸ್ವಕ್ಷೇತ್ರ ನಂದಿಗ್ರಾಮ್ ವಿಧಾನಸಭೆಯಿಂದಲೇ ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದಾಗಿ ಮಮತಾ ಘೋಷಿಸಿದ್ದಾರೆ.
ನಂದಿಗ್ರಾಮ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು ಮಮತಾ ಅಧಿಕಾರಕ್ಕೇರಲು ಸಹಕರಿಸಿದ್ದ ಸುವೇಂದು ಅವರು ಪಕ್ಷ ತೊರೆದರೆ ಮಮತಾಗೆ ಭಾರಿ ಹಿನ್ನಡೆಯಾಗಿದೆ.

ತಮ್ಮ ಸ್ಪರ್ಧೆ ಬಗ್ಗೆ ಮಾತನಾಡಿದ ಮಮತಾ, ನಂದಿಗ್ರಾಮ ನನ್ನ ಅದೃಷ್ಟತಾಣ, ನಾನು ನಂದಿಗ್ರಾಮದಿಂದಲೇ ಸ್ಪರ್ಧಿಸುತ್ತೇನೆ ಎಂದಿದ್ದಾರೆ. ಇದಲ್ಲದೆ ಕೋಲ್ಕತಾದ ಭೋವನಿಪುರ್ ಕ್ಷೇತ್ರದಿಂದಲೂ ಮಮತಾ ಸ್ಪರ್ಧಿಸುವ ಸಾಧ್ಯತೆಯಿದೆ. ಆದರೆ, ಮೊದಲ ಆಯ್ಕೆ ನಂದಿಗ್ರಾಮ ಎಂದು ಮಮತಾ ಸ್ಪಷ್ಟಪಡಿಸಿದ್ದಾರೆ.
2007ರಲ್ಲಿ ವಿಶೇಷ ಆರ್ಥಿಕ ವಲಯ ಯೋಜನೆ ವಿರೋಧಿಸಿ ಎಡಪಕ್ಷಗಳ ವಿರುದ್ಧ ತೃಣಮೂಲ ಕಾಂಗ್ರೆಸ್ ಹೋರಾಟ ನಡೆಸಿತ್ತು. ಅಂದು ಸುವೇಂದು ಹಾಗೂ ಮಮತಾ ನಡೆಸಿದ ಮಾ ಮಾತಿ ಮಾನುಷ್ ಹೋರಾಟಕ್ಕೆ ತಕ್ಕ ಬೆಲೆ ಸಿಕ್ಕಿ, ಪಕ್ಷ ಅಧಿಕಾರ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿತ್ತು.

ಸುವೇಂದು ಅಧಿಕಾರಿ ಬಿಜೆಪಿಗೆ ಸೇರ್ಪಡೆ:
ಸಾರಿಗೆ, ನೀರಾವರಿ ಹಾಗೂ ಜಲ ಸಂಪನ್ಮೂಲ ಖಾತೆ ಸಚಿವರಾಗಿದ್ದ ಸುವೇಂದು ಅಧಿಕಾರಿ ಬಿಜೆಪಿಗೆ ಸೇರ್ಪಡೆಯಾಗಿದ್ದು, ಸುವೇಂದು ಅವರು ಕನಿಷ್ಠ 40 ರಿಂದ 45 ವಿಧಾನಸಭೆ ಕ್ಷೇತ್ರಗಳಲ್ಲಿ ತಮ್ಮ ಪ್ರಭಾವವನ್ನು ಹೊಂದಿದ್ದಾರೆ. ಜಂಗಲ್ ಮಹಾಲ್ ಪ್ರದೇಶ ಬುಡಕಟ್ಟು ಜನಾಂಗ, ಪಶ್ಚಿಮ ಮಿಡ್ನಾಪೂರ್, ಬಂಕುರಾ, ಪುರೂಲಿಯಾ ಹಾಗೂ ಝರ್ಗ್ರಾಮ್ ಹಾಗೂ ಬಿರ್ಬಂ ಕೆಲಭಾಗ ಮತ್ತುಅಲ್ಪಸಂಖ್ಯಾತರನ್ನು ಹೆಚ್ಚಾಗಿ ಹೊಂದಿರುವ ಮುರ್ಷಿದಾಬಾದ್ ಪ್ರದೇಶದಲ್ಲಿ ಸುವೇಂದು ಅವರಿಗೆ ಹಿಡಿತವಿದೆ.
ಸುವೇಂದು ನಂತರ ಅನೇಕ ಮುಖಂಡರು, ಶಾಸಕರು ಟಿಎಂಸಿ ತೊರೆದು ಬಿಜೆಪಿಯತ್ತ ಮುಖ ಮಾಡಿದ್ದಾರೆ. 40ಕ್ಕೂ ಅಧಿಕ ಶಾಸಕರು ಬಿಜೆಪಿ ಸೇರಲು ಉತ್ಸುಕರಾಗಿದ್ದಾರೆ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ.
ಮಮತಾ ಸ್ಪರ್ಧೆ ಬಗ್ಗೆ ಬಿಜೆಪಿ :
ಕೋಲ್ಕತಾದ ಕ್ಷೇತ್ರ ಬಿಟ್ಟು ನಂದಿಗ್ರಾಮದತ್ತ ಮಮತಾ ಮುಖ ಮಾಡಿರುವುದು ಅವರ ಅಸ್ಥಿರ ರಾಜಕೀಯ ಪರಿಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ನಂದಿಗ್ರಾಮ ಘರ್ಷಣೆಯಲ್ಲಿ 14 ಜನ ಬಲಿಯಾಗಿದ್ದರು. ಅಂದು ಗುಂಡು ಹಾರಿಸಿದ್ದ ಸತ್ಯಜಿತ್ ಬಂಡೋಪಾಧ್ಯಾಯ್ ಐಪಿಎಸ್ ಅವರ ವಿರುದ್ಧ ಸಿಬಿಐ ಚಾರ್ಜ್ ಶೀಟ್ ಹಾಕಿದೆ. ಈಗ ಆ ವ್ಯಕ್ತಿಯನ್ನು ಟಿಎಂಸಿ ಸೇರಿಸಿಕೊಂಡಿದ್ದು ಹೇಗೆ? ಏಕೆ? ಎಂದು ಬಿಜೆಪಿ ಸಾಮಾಜಿಕ ಜಾಲ ತಾಣಗಳ ಮುಖ್ಯಸ್ಥ ಅಮಿತ್ ಮಾಳವಿಯಾ ಪ್ರಶ್ನಿಸಿದ್ದಾರೆ.












Click it and Unblock the Notifications