ಮಮತಾ ಬಜೆಟ್ ಮಂಡಿಸುವಾಗ 'ಜೈ ಶ್ರೀರಾಮ್' ಘೋಷಣೆ ಕೂಗಿದ ಬಿಜೆಪಿ
ಕೋಲ್ಕತಾ, ಫೆಬ್ರವರಿ 5: ಪಶ್ಚಿಮ ಬಂಗಾಳ ವಿಧಾನಸಭೆಯ ಅಧಿವೇಶನದ ವೇಳೆ ಶುಕ್ರವಾರ 'ಜೈ ಶ್ರೀರಾಮ್' ಎಂಬ ಘೋಷಣೆಗಳನ್ನು ಕೂಗಿದ ಬಿಜೆಪಿ ಶಾಸಕರು, ಸದನದಿಂದ ಹೊರನಡೆದರು.
ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಿ ಶುಕ್ರವಾರ ಬಜೆಟ್ ಅಧಿವೇಶನ ಆರಂಭವಾಯಿತು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜ್ಯ ಬಜೆಟ್ ಮಂಡಿಸಿದರು. ಸಾಮಾನ್ಯವಾಗಿ ಹಣಕಾಸು ಸಚಿವರು ಬಜೆಟ್ ಮಂಡಿಸುತ್ತಾರೆ. ಆದರೆ ರಾಜ್ಯ ಹಣಕಾಸು ಸಚಿವ ಅಮಿತ್ ಮಿತ್ರಾ ಅನಾರೋಗ್ಯದ ಕಾರಣ ವಿಧಾನಸಭೆಗೆ ಹಾಜರಾಗಲಿಲ್ಲ. ಹೀಗಾಗಿ ಮಮತಾ ಬ್ಯಾನರ್ಜಿ ಬಜೆಟ್ ಓದಿದರು.
ವಿಧಾನಸಭೆ ಅಧಿವೇಶನದ ಮೊದಲ ದಿನದಂದು ಕಲಾಪಕ್ಕೆ ರಾಜ್ಯಪಾಲರನ್ನು ಆಹ್ವಾನಿಸದೆ ಇರುವುದನ್ನು ವಿರೋಧಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, ಗದ್ದಲವೆಬ್ಬಿಸಿದರು. ಬಳಿಕ ಜೈ ಶ್ರೀರಾಮ್ ಎಂಬ ಘೋಷಣೆಗಳನ್ನು ಕೂಗಿ ಸದನದಿಂದ ಹೊರನಡೆದರು.

ಬಿಜೆಪಿ ಶಾಸಕರು ನಡೆಸಿದ ಗಲಾಟೆಯನ್ನು ಖಂಡಿಸಿದ ಬಂಗಾಳ ವಿಧಾನಸಭೆ ಸ್ಪೀಕರ್ ಬಿಮಾನ್ ಬ್ಯಾನರ್ಜಿ, 'ಇದು ಬಹಳ ಖೇದಕರ ಘಟನೆ. ಇದನ್ನು ನಾನು ಖಂಡಿಸುತ್ತೇನೆ. ಈ ರೀತಿ ನಡವಳಿಕೆಯನ್ನು ನಾನು ನೋಡಿರಲಿಲ್ಲ' ಎಂದು ಹೇಳಿದರು.
ಬಜೆಟ್ ಮಂಡನೆ ವೇಳೆ ಈ ರೀತಿ ಅಡ್ಡಿಪಡಿಸುವ ವರ್ತನೆಯನ್ನು ತಾವು ಕೂಡ ನೋಡಿರಲಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಿಡಿಕಾರಿದರು. 'ಬಿಜೆಪಿಗೆ ಯಾವುದೇ ಚರ್ಚೆ ಅಥವಾ ಸಂವಾದಗಳನ್ನು ನಡೆಸುವುದು ಬೇಕಾಗಿಲ್ಲ' ಎಂದು ಅವರು ಆರೋಪಿಸಿದರು.
ಈ ನಡುವೆ 2021-22ನೇ ಸಾಲಿಗೆ 2,99,688 ಕೋಟಿ ರೂ ಮೊತ್ತದ ಬಜೆಟ್ ಅನ್ನು ಮಮತಾ ಮಂಡಿಸಿದರು. ಜನವರಿ 1ರಿಂದ ಜೂನ್ 30ರವರೆಗೆ ಎಲ್ಲ ಸಾರಿಗೆ ವಾಹನಗಳ ಪ್ರಯಾಣಿಕರ ಮೇಲಿನ ರಸ್ತೆ ತೆರಿಗೆಯನ್ನು ಮನ್ನಾ ಮಾಡಿರುವುದಾಗಿ ಪ್ರಕಟಿಸಿದರು.












Click it and Unblock the Notifications