ಮಮತಾ ಮತ್ತೊಂದು ಕ್ಷೇತ್ರದಲ್ಲಿ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ: ಮೋದಿಗೆ ಟಿಎಂಸಿ ತಿರುಗೇಟು
ಕೋಲ್ಕತಾ, ಏಪ್ರಿಲ್ 1: ನಂದಿಗ್ರಾಮದಿಂದ ಸ್ಪರ್ಧಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಲಿನ ಭೀತಿಯಿಂದ ಮತ್ತೊಂದು ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ತೃಣಮೂಲ ಕಾಂಗ್ರೆಸ್ ತಳ್ಳಿಹಾಕಿದೆ.
'ನಂದಿಗ್ರಾಮದ ಹೊರತಾಗಿ ಬೇರೆ ಯಾವುದೇ ಎರಡನೆಯ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಕಣಕ್ಕಿಳಿಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅವರು ನಂದಿಗ್ರಾಮದಲ್ಲಿ ಸುಲಭವಾಗಿ ಗೆಲ್ಲಲಿದ್ದಾರೆ' ಎಂದು ಟಿಎಂಸಿ ಮುಖಂಡರು ಹೇಳಿದ್ದಾರೆ.
ಮಮತಾ ಬ್ಯಾನರ್ಜಿ 66 ವರ್ಷದ 'ಆಂಟಿ' ಎಂದ ಸುವೇಂದು ಅಧಿಕಾರಿ!
ಪಶ್ಚಿಮ ಬಂಗಾಳದಲ್ಲಿ ಎರಡನೆಯ ಹಂತದ ಮತದಾನ ಗುರುವಾರ ನಡೆದಿದ್ದು, ನಂದಿಗ್ರಾಮ ಸೇರಿದಂತೆ 30 ಕ್ಷೇತ್ರಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇನ್ನೂ ಆರು ಹಂತಗಳ ಚುನಾವಣೆ ಬಾಕಿ ಇದ್ದು, ನಂದಿಗ್ರಾಮದಲ್ಲಿ ಸೋಲುವ ಸೂಚನೆ ಅರಿತಿರುವ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಮತ್ತೊಂದು ಕ್ಷೇತ್ರದಲ್ಲಿ ಕೂಡ ಕಣಕ್ಕಿಳಿಯಲು ತಯಾರಿ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೊಪಿಸಿದೆ.
ನಂದಿಗ್ರಾಮದಿಂದ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಎದುರು ಸ್ಪರ್ಧಿಸಿರುವ ಮಮತಾ ಬ್ಯಾನರ್ಜಿ, ಈಗ ಎರಡನೆಯ ಕ್ಷೇತ್ರದಲ್ಲಿ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದರು. 'ದೀದಿ, ನೀವು ಮತ್ತೊಂದು ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದೀರಿ ಎಂಬ ವದಂತಿಯಲ್ಲಿ ಸತ್ಯವಿದೆಯೇ? ಮೊದಲು ನೀವು ನಂದಿಗ್ರಾಮಕ್ಕೆ ಹೋದಿರಿ. ಜನರು ನಿಮಗೆ ಒಂದು ಉತ್ತರ ನೀಡಿದ್ದಾರೆ. ನೀವು ಬೇರೊಂದು ಕಡೆ ಹೋದರೆ ಬಂಗಾಳದ ಜನರು ಸಿದ್ಧರಾಗಿದ್ದಾರೆ' ಎಂದು ಉಲುಬೆರಿಯಾದಲ್ಲಿ ಗುರುವಾರ ನಡೆದ ಚುನಾವಣಾ ಸಮಾವೇಶದಲ್ಲಿ ಮೋದಿ ಹೇಳಿದ್ದರು.
ಬಾಂಗ್ಲಾದೇಶ ಪ್ರವಾಸ ಪ್ರಶ್ನಿಸಿದ ಟಿಎಂಸಿಗೆ ಪ್ರಧಾನಿ ತಿರುಗೇಟು!
'ಮಮತಾ ಬ್ಯಾನರ್ಜಿ ಅವರು ಸೋಲಿನ ಭೀತಿಯಿಂದ ನಂದಿಗ್ರಾಮದಲ್ಲಿಯೇ ನೆಲೆಯೂರುವಂತಾಗಿತ್ತು. ದೀದಿ ನಂದಿಗ್ರಾಮಕ್ಕೆ ತೆರಳುವುದಕ್ಕಾಗಿ ತಮ್ಮ ಕ್ಷೇತ್ರವಾದ ಭವಾನಿಪುರವನ್ನು ತೊರೆದರು. ಇಲ್ಲಿಗೆ ಬಂದಿರುವುದು ತಪ್ಪಾದ ಆಯ್ಕೆ ಎಂದು ಅವರಿಗೆ ನಂತರ ಅರಿವಾಯಿತು. ನಂದಿಗ್ರಾಮದಲ್ಲಿ ಅವರು ಮೂರು ದಿನ ನೆಲೆಯೂರುವುದು ಅನಿವಾರ್ಯದಂತಾಯಿತು' ಎಂದು ಮೋದಿ ವ್ಯಂಗ್ಯವಾಡಿದ್ದರು.