ಬಂಗಾಳದಲ್ಲಿ ಕಮಲ ಅರಳಿದ ನಂತರವಷ್ಟೇ ನನಗೆ ನಿದ್ದೆ; ಸುವೇಂದು ಅಧಿಕಾರಿ ಶಪಥ
ಕೋಲ್ಕತ್ತಾ, ಡಿಸೆಂಬರ್ 25: "ಪಶ್ಚಿಮ ಬಂಗಾಳದಲ್ಲಿ ಕಮಲ ಅರಳಿದ ನಂತರವಷ್ಟೇ ನಾನು ನಿದ್ದೆ ಮಾಡುವುದು. ನಾನು ಹಾಗೂ ದಿಲೀಪ್ ಘೋಷ್ ಬಿಜೆಪಿ ಗೆಲ್ಲಿಸಲು ನಿರಂತರ ಶ್ರಮಿಸುತ್ತೇವೆ" ಎಂದು ಈಚೆಗಷ್ಟೆ ಟಿಎಂಸಿ ತೊರೆದು ಬಿಜೆಪಿ ಸೇರಿರುವ ಸುವೇಂದು ಅಧಿಕಾರಿ ಶಪಥ ಮಾಡಿದ್ದಾರೆ.
ತಮ್ಮ ತವರೂರು ಕಾಂತಿಯಲ್ಲಿ ಬೃಹತ್ ರೋಡ್ ಶೋ ಹಮ್ಮಿಕೊಂಡಿದ್ದ ಸಂದರ್ಭ ಮಾತನಾಡಿದ ಸುವೇಂದು ಅಧಿಕಾರಿ. "ನಾನು ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದು ಒಳ್ಳೆಯ ನಿರ್ಧಾರವಾಗಿದೆ. ಈ ನಡೆಗೆ ಜನರ ಒಪ್ಪಿಗೆಯೂ ಇದೆ" ಎಂದು ಹೇಳಿದ್ದಾರೆ. ಮುಂದೆ ಓದಿ...

"ಮಮತಾ ಬ್ಯಾನರ್ಜಿಗೆ ಅಲ್ಲಿ ಉತ್ತರಿಸುತ್ತೇನೆ"
ಜನವರಿ 8ರಂದು ನಂದಿಗ್ರಾಮದಲ್ಲಿ ಸುವೇಂದು ಅಧಿಕಾರಿ ಮತ್ತೊಂದು ರೋಡ್ ಶೋ ನಡೆಯುತ್ತಿದೆ. ಜನವರಿ 7ರಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಾರ್ಯಕ್ರಮವೂ ಅದರ ಹಿಂದಿನ ದಿನ ನಡೆಯುವುದಾಗಿ ತಿಳಿದುಬಂದಿದೆ. ಹೀಗಾಗಿ ಅಲ್ಲಿಯೇ ಸಿಎಂಗೆ ಉತ್ತರ ಕೊಡುತ್ತೇನೆ ಎಂದು ಸುವೇಂದು ಹೇಳಿದ್ದಾರೆ. "ನಿಮಗೆ ನಂದಿಗ್ರಾಮಕ್ಕೆ ಸ್ವಾಗತ. ಅಲ್ಲಿ ನೀವು ಏನು ಹೇಳುತ್ತೀರೋ ಅದಕ್ಕೆ ನಾನು ಮರು ದಿನ ಉತ್ತರ ಕೊಡುತ್ತೇನೆ" ಎಂದು ಮಮತಾ ಬ್ಯಾನರ್ಜಿಗೆ ಹೇಳಿದ್ದಾರೆ.

"ಬಿಜೆಪಿ ಸೇರುವ ಒಳ್ಳೆಯ ನಿರ್ಧಾರ ತೆಗೆದುಕೊಂಡೆ"
"ನಾನು ಬಿಜೆಪಿ ಸೇರಿ ಒಳ್ಳೆಯ ನಿರ್ಧಾರ ಮಾಡಿದೆ ಎಂದು ಈಗ ಅನ್ನಿಸುತ್ತಿದೆ. ಇದಕ್ಕೆ ಜನರ ಅನುಮತಿ ಇದೆ ಎಂಬುದು ಈ ರೋಡ್ ಶೋ ಮೂಲಕ ಗೊತ್ತಾಯಿತು. ಸಾವಿರಾರು ಮಂದಿ ನನಗೆ ಬೆಂಬಲ ನೀಡಿ ಇಲ್ಲಿಗೆ ಬಂದಿದ್ದಾರೆ. ಅವರೆಲ್ಲರಿಗೂ ಧನ್ಯವಾದ" ಎಂದು ಹೇಳಿದ್ದಾರೆ.

"ನಂದಿಗ್ರಾಮಕ್ಕೆ ಮಮತಾ ಬ್ಯಾನರ್ಜಿ ಎಂದಿಗೂ ಬಂದಿಲ್ಲ"
2007ರಲ್ಲಿ ನಂದಿಗ್ರಾಮದಲ್ಲಿ ಮಹತ್ವದ ತಿರುವುಗಳನ್ನು ಸೂಚಿಸುವ ದಿನಗಳಾದ ಜನವರಿ 7, ಮಾರ್ಚ್ 14 ಅಥವಾ ನವೆಂಬರ್ 10ರಂದು ಮಮತಾ ಬ್ಯಾನರ್ಜಿ ಎಂದಿಗೂ ನಂದಿ ಗ್ರಾಮಕ್ಕೆ ಬಂದಿಲ್ಲ ಎಂದು ಅಧಿಕಾರಿ ಹೇಳಿದರು. ಆದರೆ ಈಗ ಬರುತ್ತಿದ್ದಾರೆ ಎಂದು ಟೀಕಿಸಿದರು.
ಮಾಜಿ ಟಿಎಂಸಿ ನಾಯಕ ಸುವೇಂದು ಅಧಿಕಾರಿಯನ್ನು ನಂದಿಗ್ರಾಮ ಚಳವಳಿಯ ಬೆನ್ನೆಲುಬು ಎಂದು ಪರಿಗಣಿಸಲಾಗಿದ್ದು, 2011ರಲ್ಲಿ ಮಮತಾ ಬ್ಯಾನರ್ಜಿ ಅಧಿಕಾರಕ್ಕೆ ಬರುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

"ನನ್ನ ರಾಜೀನಾಮೆ ಬಗ್ಗೆ ಏಕೆ ಚಿಂತಿಸುತ್ತಿದ್ದೀರಾ?"
"ನನ್ನ ರಾಜೀನಾಮೆ ಅವರಿಗೆ ಒಂದು ವಿಷಯವೇ ಆಗಿಲ್ಲ ಎಂದರೆ ಏಕೆ ಟಿಎಂಸಿ ಚಿಂತಿಸುತ್ತಿದೆ? ಹಾಗೂ ಪ್ರತಿ ವಾರವೂ ತನ್ನ ನಾಯಕರನ್ನು ಪರ್ಬ ಮಿಡ್ನಾಫುರಕ್ಕೆ ಏಕೆ ಕಳುಹಿಸುತ್ತಿದೆ ಎಂದು ಪ್ರಶ್ನಿಸಿದರು.
ಸಚಿವ ಫಿರಾದ್ ಹಕಿಮ್ ಕುರಿತು ಟೀಕೆ ಮಾಡಿ, ಅಂಫಾನ್ ಚಂಡಮಾರುತ ಸಂದರ್ಭ ಪರಿಸ್ಥಿತಿ ನಿಭಾಯಿಸುವಲ್ಲಿ ಸೋತರು. ರಾಜ್ಯವನ್ನು ಸಹಜ ಸ್ಥಿತಿಗೆ ತರಲು ಒಡಿಶಾದಿಂದ ಸೇನೆ, ಪ್ರಾಕೃತಿಕ ವಿಕೋಪ ನಿರ್ವಹಣಾ ತಂಡ ಕರೆಸಬೇಕಾಯಿತು ಎಂದು ದೂರಿದರು.
ಕಾಂತಿ ಜಿಲ್ಲೆಯ ಬಗ್ಗೆ ಮಲತಾಯಿ ಧೋರಣೆ ತೋರುತ್ತಿದೆ ಎಂದು ಆರೋಪಿಸಿ, ಡೈಮಂಡ್ ಹಾರ್ಬರ್ ಗೆ ಎರಡು ವಿಶ್ವವಿದ್ಯಾಲಯಗಳನ್ನು, ಎರಡು ವೈದ್ಯಕೀಯ ಕಾಲೇಜುಗಳನ್ನು ನೀಡಲಾಗಿದೆ. ಕಾಂತಿಗೆ ಏನೂ ಸಿಕ್ಕಿಲ್ಲ ಎಂದು ದೂರಿದರು.












Click it and Unblock the Notifications