'ಜೈ ಶ್ರೀರಾಮ್' ಎಂದಿದ್ದಕ್ಕೆ ಕಾರಿನಿಂದ ಇಳಿದುಬಂದ ದೀದಿ ಮಾಡಿದ್ದೇನು?
Recommended Video
ಕೋಲ್ಕತ್ತಾ, ಮೇ 31: "ನಿಮ್ಮನ್ನು ನೀವೇನಂತ ತಿಳಿದುಕೊಂಡಿದ್ದೀರಿ? ಬೇರೆ ರಾಜ್ಯಗಳಿಂದ ಬಂದು ನಮ್ಮ ಮೇಲೆ ದಬ್ಬಾಳಿಕೆ ನಡಿಸ್ತೀರಾ? ನನ್ನ ವಿರುದ್ಧ ಘೋಷಣೆ ಕೂಗಲು ನಿಮಗೆಷ್ಟು ಧೈರ್ಯ? ನಾನಿದನ್ನು ಸಹಿಸಿಕೊಳ್ಳುವುದಿಲ್ಲ. ನಿಮ್ಮೆಲ್ಲರ ಹೆಸರು ಮತ್ತು ಇತರ ವಿವರಗಳನ್ನು ಕಲೆ ಹಾಕಲಾಗಿದೆ" ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅಬ್ಬರಿಸಿದ್ದಾರೆ.
ದೀದಿ ಅವರ ಶಾರ್ಟ್ ಟೆಂಪರ್ ಮನಸ್ಥಿತಿಗೆ ಮತ್ತೊಂದು ಘಟನೆ ಸಾಕ್ಷಿಯಾಗಿದೆ.
ಅವರು ಕಾರಿನಲ್ಲಿ ಸಂಚರಿಸುತ್ತಿದ್ದ ವೇಳೆಯಲ್ಲಿ ರಸ್ತೆಯಲ್ಲಿದ್ದ ಜನರ ಗುಂಪು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಕ್ಕಾಗಿ ಕಾರನ್ನು ಅಲ್ಲೇ ನಿಲ್ಲಿಸಿ, ಜನರನ್ನು ತರಾಟೆಗೆ ತೆಗೆದುಕೊಂಡ ಘಟನೆ ಗುರುವಾರ ನಡೆದಿದೆ.
ಲೋಕಸಭೆ ಚುನಾವಣಾ ಪ್ರಚಾರದ ಸಮಯದಲ್ಲೂ ಸಾಕಷ್ಟು ಬಾರಿ ತಮ್ಮ ಕೋಪವನ್ನು ಹೊರಹಾಕಿದ್ದ ಮಮತಾ ಬ್ಯಾನರ್ಜಿ ಮತ್ತೊಮ್ಮೆ ಅಂಥ ಸನ್ನಿವೇಶ ತಂದಿಟ್ಟರು.
"ನಾನು ಈ ಎಲ್ಲಾ ಜನರನ್ನು ಬಲ್ಲೆ. ಇವರಿಗೆಲ್ಲ ನಾನು ಸವಾಲು ಹಾಕುತ್ತೇನೆ. ನಾನು ನಿಮಗೆ ಇಲ್ಲಿ ಹೊಡೆದರೆ, ಬೇರೆಲ್ಲೋ ನ್ಯಾಯ ಸಿಕ್ಕುತ್ತದೆ" ಎಂದು ಕಾರಿನಿಂದ ಇಳಿದ ಮಮತಾ ಬ್ಯಾನರ್ಜಿ ಗುಡುಗಿದರು.

ನಂತರ ತಮ್ಮೊಂದಿಗಿದ್ದ ಭದ್ರತಾ ಸಿಬ್ಬಂದಿ ಬಳಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ ಎಲ್ಲ ಹೆಸರನ್ನೂ ನೋಟ್ ಮಾಡಿಕೊಳ್ಳುವಂತೆ ಆದೇಶಿಸಿದರು. ಜೈ ಶ್ರೀ ರಾಮ್ ಎಂದು ಮತ್ತು ನನ್ನ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದವರು ಕ್ರಿಮಿನಲ್ ಗಳಾಗಿದ್ದು, ಇವರೆಲ್ಲ ಬಿಜೆಪಿ ಕಾರ್ಯಕರ್ತರು ಮತ್ತು ಹೊರ ರಾಜ್ಯದವರಾಗಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆಗೆ ಅವರು ಹೇಳಿಕೆ ನೀಡಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಜೈ ಶ್ರೀ ರಾಮ್ ಎಂದು ಕೂಗಿದವರನ್ನು ಜೈಲಿಗೆ ಅಟ್ಟಲಾಗುವುದು ಎಂದು ಅವರು ಹೂಂಕರಿಸಿದ್ದರು.
ಆಗಿದ್ದೇನೆಂದರೆ, ನಾರ್ತ್ 24 ಪರ್ಗಣಾಸ್ ನಲ್ಲಿ ಮಮತಾ ಬ್ಯಾನರ್ಜಿ ಅವರು ಕಾರಿನಲ್ಲಿ ಗುರುವಾರ ಹೋಗುತ್ತಿದ್ದಾಗ, ಕೆಲವೊಂದು ಜನರು 'ಜೈ ಶ್ರೀ ರಾಮ್' ಎಂದು ಘೋಷಣೆ ಕೂಗಿದ್ದಾರೆ. ಇದರಿಂದ ರೊಚ್ಚಿಗೆದ್ದ ಮಮತಾ ಬ್ಯಾನರ್ಜಿ ಅವರು, ಎರಡು ಬಾರಿ ಕಾರಿನಿಂದಿಳಿದು ಘೋಷಣೆ ಕೂಗುತ್ತಿದ್ದ ಜನರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ನಿಮ್ಮೆಲ್ಲರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಒಂದೆಡೆ ಲೋಕಸಭೆ ಚುನಾವಣೆಯಲ್ಲಿ ಕಡಿಮೆ ಕ್ಷೇತ್ರ ಗೆದ್ದಿರುವುದು (2014ರಲ್ಲಿ 34 ಇದ್ದದ್ದು 2019ರಲ್ಲಿ 22), ಇಬ್ಬರು ಶಾಸಕರು ಸೇರಿದಂತೆ 50ಕ್ಕೂ ಹೆಚ್ಚು ಕಾರ್ಪೊರೇಟರ್ ಗಳು ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವುದು, ಲೋಕಸಭೆಯಲ್ಲಿ ಮಹಾಘಟಬಂಧನ್ ದ ವಿಫಲತೆ ಮತ್ತು ಇದೀಗ 'ಜೈ ಶ್ರೀ ರಾಮ್' ಎಂದು ಕೂಗಿರುವುದು ಅವರ ಪ್ರತಿಷ್ಠೆಗೆ ಭಾರೀ ಪೆಟ್ಟುಕೊಟ್ಟಿದೆ ಮತ್ತು ಗಾಯದ ಮೇಲೆ ಉಪ್ಪು ಸುರಿದಂತಾಗಿದೆ.
"ಅನವಶ್ಯಕವಾಗಿ ನನ್ನ ಕಾರಿನ ಮುಂದೆ ಕೆಲವರು ಜೈ ಶ್ರೀರಾಮ್ ಎಂದು ಕೂಗುತ್ತ ಬಂದರು. ಅವರೆಲ್ಲ ಬಿಜೆಪಿ ಕಾರ್ಯಕರ್ತರು ಎಂಬುದು ನನಗೆ ಗೊತ್ತು" ಎಂದು ಬ್ಯಾನರ್ಜಿ ಹೇಳಿದರು.
ಆದರೆ ದೀದಿ ಹೀಗೆ ಕಾರಿನಿಂದ ಇಳಿದುಬಂದು ಜನರ ಮೇಲೆ ಹರಿಹಾಯ್ದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ದೀದಿ ನಡೆಗೆ ಕಟು ಟೀಕೆ ವ್ಯಕ್ತವಾಗಿದೆ.












Click it and Unblock the Notifications