ಬಿಜೆಪಿ ಸಮಾವೇಶಕ್ಕಿಂತ ಟೀಸ್ಟಾಲ್ಗಳಲ್ಲೇ ಹೆಚ್ಚು ಜನರಿರುತ್ತಾರೆ; ಶಾಗೆ ಟಿಎಂಸಿ ಮುಖಂಡನ ತಿರುಗೇಟು
ಕೋಲ್ಕತ್ತಾ, ಮಾರ್ಚ್ 15: "ಹೆಲಿಕಾಪ್ಟರ್ನಲ್ಲಿ ಕಾಣಿಸಿಕೊಂಡ ದೋಷದಿಂದಾಗಿ ಝಾರ್ಗ್ರಾಮದ ಚುನಾವಣಾ ಸಮಾವೇಶದಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ. ಆದರೆ ಇದನ್ನು ಸಂಚು ಎಂದು ನಾನು ಕರೆಯುವುದಿಲ್ಲ" ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಟೀಕೆಗೆ ಟಿಎಂಸಿ ಮುಖಂಡ ಅಭಿಷೇಕ್ ಬ್ಯಾನರ್ಜಿ ತಿರುಗೇಟು ನೀಡಿದ್ದಾರೆ.
ಸೋಮವಾರ ದತನ್, ಪಶ್ಚಿಮ ಮಿಡ್ನಾಪುರದ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅಭಿಷೇಕ್ ಬ್ಯಾನರ್ಜಿ, "ಬಿಜೆಪಿ ಸಮಾವೇಶಕ್ಕಿಂತ ಲೋಕಲ್ ಟೀ ಸ್ಟಾಲ್ಗಳಲ್ಲಿಯೇ ಹೆಚ್ಚಿನ ಜನ ಸೇರಿರುತ್ತಾರೆ" ಎಂದು ಟೀಕಿಸಿದ್ದಾರೆ.
"ಈ ಬಿರು ಬಿಸಿಲಿನಲ್ಲಿ ಸಮಾವೇಶಕ್ಕೆ ಯಾರೂ ಭಾಷಣ ಕೇಳಲು ಬರುವುದಿಲ್ಲ. ಝಾರ್ಗ್ರಾಮದಲ್ಲಿ ಇಂದು ಸಭೆಯೊಂದಕ್ಕೆ ಗೃಹ ಸಚಿವರು ಬರಬೇಕಿತ್ತು. ಆದರೆ ಹೆಲಿಕಾಪ್ಟರ್ ನಲ್ಲಿನ ತಾಂತ್ರಿಕ ದೋಷದಿಂದಾಗಿ ಬರಲು ಸಾಧ್ಯವಾಗಿಲ್ಲ ಎಂದು ಬೇಸರಿಸಿಕೊಂಡಿದ್ದಾರೆ. ಆದರೆ ನಾನು ನೋಡಿದ ಬಿಜೆಪಿ ಸಮಾವೇಶದ ಚಿತ್ರಗಳಲ್ಲಿ ಜನರೇ ಇರುವುದಿಲ್ಲ. ಅದಕ್ಕಿಂತ ಲೋಕಲ್ ಟೀ ಸ್ಟಾಲ್ಗಳಲ್ಲೇ ಎಷ್ಟೋ ಜನ ಇರುತ್ತಾರೆ" ಎಂದು ವ್ಯಂಗ್ಯ ಮಾಡಿದ್ದಾರೆ.

ಸೋಮವಾರ ಪಶ್ಚಿಮ ಬಂಗಾಳ ಚುನಾವಣಾ ಸಮಾವೇಶಕ್ಕೆ ಅಮಿತ್ ಶಾ ಆಗಮಿಸಬೇಕಿದ್ದು, ಹೆಲಿಕಾಪ್ಟರ್ನಲ್ಲಿನ ದೋಷದಿಂದಾಗಿ ಬರಲಾಗಿಲ್ಲ. ಹೀಗಾಗಿ ವರ್ಚುಯಲ್ ಕಾರ್ಯಕ್ರಮದಲ್ಲೇ ಮಾತನಾಡಿದ ಅಮಿತ್ ಶಾ, "ನನ್ನ ಹೆಲಿಕಾಪ್ಟರ್ನಲ್ಲಿ ತೊಂದರೆ ಉಂಟಾಗಿದ್ದರಿಂದ ನಾನು ಬರಲು ಸಾಧ್ಯವಾಗಿಲ್ಲ. ಆದರೆ ಅದನ್ನು ಸಂಚು ಎಂದು ನಾನು ಕರೆಯುವುದಿಲ್ಲ' ಎಂದು ಹೇಳಿದರು. ಈ ಮೂಲಕ ನಂದಿಗ್ರಾಮದಲ್ಲಿ ಯಾರೋ ಅಪರಿಚಿತರು ತಮ್ಮ ಮೇಲೆ ಹಲ್ಲೆ ನಡೆಸಿದರು ಎಂದು ಆರೋಪಿಸಿ ಎರಡು ದಿನ ಆಸ್ಪತ್ರೆ ವಾಸ ಅನುಭವಿಸಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಕಿಡಿಕಾರಿದರು.
ಇದೇ ಸಂದರ್ಭ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಪಂಡಿತ್ ರಘುನಾಥ್ ಮರ್ಮು ಬುಡಕಟ್ಟು ವಿಶ್ವವಿದ್ಯಾಲಯವನ್ನು ಝಾರ್ಗ್ರಾಮದಲ್ಲಿ ಸ್ಥಾಪಿಸುವುದಾಗಿ ಭರವಸೆ ನೀಡಿದರು.












Click it and Unblock the Notifications