ಪಶ್ಚಿಮ ಬಂಗಾಳದಲ್ಲಿ ಹಸಿರು ಪಟಾಕಿ ಹಾರಿಸಲು ಸುಪ್ರೀಂಕೋರ್ಟ್ ಅನುಮತಿ
ನವದೆಹಲಿ, ನವೆಂಬರ್ 1: ಪಶ್ಚಿಮ ಬಂಗಾಳದಲ್ಲಿ ಪಟಾಕಿ ಸಿಡಿಸುವುದಕ್ಕೆ ನಿರ್ಬಂಧ ವಿಧಿಸಿದ ಕೋಲ್ಕತ್ತಾ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ಪ್ರಮಾಣಿತ ಹಸಿರು ಪಟಾಕಿಗಳನ್ನು ಸಿಡಿಸಲು ಕೋರ್ಟ್ ಅನುಮತಿ ನೀಡಿದೆ.
ಕೋಲ್ಕತ್ತಾ ಹೈಕೋರ್ಟ್ ನೀಡಿದ ಆದೇಶವನ್ನು ಪ್ರಶ್ನಿಸಿ ಹಸಿರು ಪಟಾಕಿ ಮಾರಾಟಗಾರರು ಸಲ್ಲಿಸಿದ ಎರಡು ಅರ್ಜಿಗಳನ್ನು ಸೋಮವಾರ ವಿಚಾರಣೆ ನಡೆಸಲಾಯಿತು. ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎ.ಎಂ ಖಾನ್ವಿಲ್ಕರ್ ಮತ್ತು ಅಜಯ್ ರಸ್ತೋಗಿ ನೇತೃತ್ವದ ವಿಭಾಗೀಯ ಪೀಠ ಅರ್ಜಿಗಳ ವಿಚಾರಣೆ ನಡೆಸಿತು.
ಮಧ್ಯಮ ಮತ್ತು ಉತ್ತಮದ ಗುಣಮಟ್ಟದ ಹವಾಮಾನವಿರುವ ಪ್ರದೇಶಗಳಲ್ಲಿ ಹಸಿರು ಪಟಾಕಿಗಳ ಮಾರಾಟ ಮತ್ತು ಸಿಡಿಸುವುದಕ್ಕೆ ಯಾವುದೇ ರೀತಿ ನಿರ್ಬಂಧವಿಲ್ಲ ಎಂದು ಕೋರ್ಟ್ ಹೇಳಿತು. ಸರ್ವೋಚ್ಛ ನ್ಯಾಯಾಲಯದ ಆದೇಶಕ್ಕೆ ಬದ್ಧವಾಗಿದ್ದು, ಪಾಲನೆ ಮಾಡುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದತ್ತಾಂಶ ಸಲ್ಲಿಸಲು ಸುಪ್ರೀಂಕೋರ್ಟ್ ಅನುಮತಿ:
ಪಶ್ಚಿಮ ಬಂಗಾಳದಲ್ಲಿ ಪಟಾಕಿ ಸಿಡಿಸುವುದಕ್ಕೆ ನಿರ್ಬಂಧ ವಿಧಿಸಲು ಸಂಬಂಧಿಸಿದಂತೆ ಪಟಾಕಿ ವ್ಯಾಪಾರಿಗಳು ಹಾಗೂ ರಾಜ್ಯ ಸರ್ಕಾರದ ವಾದದ ಕುರಿತು ದತ್ತಾಂಶವನ್ನು ಸಲ್ಲಿಸುವುದಕ್ಕೆ ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಅಲ್ಲದೇ ನಿಷೇಧಿತ ಪಟಾಕಿ ಅಥವಾ ಸಂಬಂಧಿತ ವಸ್ತುಗಳನ್ನು ಆಮದು ಮಾಡಿಕೊಳ್ಳದಂತೆ ನೋಡಿಕೊಳ್ಳಲು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಕೋರ್ಟ್ ಸೂಚನೆ ನೀಡಿದೆ.
ಅಕ್ಟೋಬರ್ 29ರಂದು ಪಟಾಕಿ ನಿರ್ಬಂಧ:
ಕಳೆದ ಅಕ್ಟೋಬರ್ 29ರಂದು ಅರ್ಜಿ ವಿಚಾರಣೆ ನಡೆಸಿದ ಕೋಲ್ಕತ್ತಾ ಹೈಕೋರ್ಟ್, ಕಾಳಿ ಪೂಜೆ, ದೀಪಾವಳಿ, ಛತ್ ಪೂಜೆ ಮತ್ತು ಹೊಸ ವರ್ಷದ ಆಚರಣೆಗಳಲ್ಲಿ ಪಟಾಕಿಗಳನ್ನು ಬಳಸುವುದನ್ನು ನಿಷೇಧಿಸಲಾಗಿತ್ತು. ಮೇಣ ಅಥವಾ ತೈಲ ಆಧಾರಿತ ದಿಯಾಗಳನ್ನು ಮಾತ್ರ ಸಂದರ್ಭಗಳಲ್ಲಿ ಬಳಸಬಹುದು ಎಂದು ಹೇಳಿರುವ ಹೈಕೋರ್ಟ್ನ ಆದೇಶವು, "ಈ ವರ್ಷ ಕಾಳಿ ಪೂಜೆ, ದೀಪಾವಳಿ ಆಚರಣೆಗಳು ಮತ್ತು ಛತ್ ಪೂಜೆ, ಜಗಧಾತ್ರಿ ಪೂಜೆ, ಗುರುನಾನಕ್ ಜನ್ಮದಿನ ಮತ್ತು ಕ್ರಿಸ್ಮಸ್ ಮತ್ತು ಹೊಸ ವರ್ಷದ ಮುನ್ನಾ ದಿನದ ಆಚರಣೆಗಳಲ್ಲಿ ಯಾವುದೇ ರೀತಿಯ ಪಟಾಕಿಗಳ ಬಳಕೆ ಅಥವಾ ಪ್ರದರ್ಶನ ಅಥವಾ ಸಿಡಿಸುವಿಕೆಯನ್ನು ರಾಜ್ಯವು ಖಚಿತಪಡಿಸಿಕೊಳ್ಳಬೇಕು," ಎಂದು ಹೇಳಿತ್ತು.
ಹೈಕೋರ್ಟ್ನ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಒಂದು ಅರ್ಜಿಯಲ್ಲಿ ಮಾರುಕಟ್ಟೆಯಲ್ಲಿ ಪರಿಚಯಿಸಲಾದ ಹಸಿರು ಪಟಾಕಿಯು ಪರಿಸರ ಸ್ನೇಹಿಯಾಗಿದೆ ಎಂದು ಉಲ್ಲೇಖಿಸಲಾಗಿತ್ತು.