ಕೇಂದ್ರ ಬಜೆಟ್ಗೆ ಬಂಗಾಳಿಗಳದ್ದೇ ಚಿಂತೆ; ನಿರ್ಮಲಾ ಸೀರೆಯಲ್ಲಿ ಅಡಗಿತ್ತಾ ಮರ್ಮ?
ಕೋಲ್ಕತ್ತಾ, ಫೆಬ್ರವರಿ.01: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಮಂಡಿಸಿದ 2021-22ನೇ ಸಾಲಿನ ಆಯವ್ಯಯ ಮತ್ತು ಬಜೆಟ್ ಮಂಡನೆಯ ರೀತಿಯು ಪಶ್ಚಿಮ ಬಂಗಾಳದ ಪ್ರಜೆಗಳನ್ನು ಸೆಳೆಯುವ ತಂತ್ರದಂತೆ ಗೋಚರಿಸಿತು ಎಂದು ವಿಶ್ಲೇಷಿಸಲಾಗುತ್ತಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಂಗಾಳದ ಪ್ರಸಿದ್ಧ "ಲಾಲ್ ಪಾದ್" ಸೀರೆಯನ್ನುಟ್ಟು ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ 9ನೇ ಬಜೆಟ್ ಮಂಡಿಸಿದರು. ಬಜೆಟ್ ಮಂಡನೆ ಆರಂಭಿಸುವುದಕ್ಕೂ ಮೊದಲು ರವಿಂದ್ರನಾಥ್ ಟ್ಯಾಗೋರ್ ಅವರ ವಾಕ್ಯವನ್ನು ಉಲ್ಲೇಸಿದ್ದರು. ಅಲ್ಲದೇ 2021-22ನೇ ಸಾಲಿನ ಕೇಂದ್ರ ಸರ್ಕಾರದ ಆಯವ್ಯಯದಲ್ಲಿ ಪಶ್ಚಿಮ ಬಂಗಾಳಕ್ಕೆ 25000 ಕೋಟಿ ರೂಪಾಯಿ ಯೋಜನೆ ಘೋಷಿಸಿದರು.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲೇ ಕೇಂದ್ರ ಸರ್ಕಾರವು ಈ ರಾಜ್ಯಕ್ಕೆ ಹೆಚ್ಚಿನ ಯೋಜನೆ ಘೋಷಿಸುವುದರ ಹಿಂದೆ ರಾಜಕೀಯ ತಂತ್ರವಿದೆ. ಪ್ರಜೆಗಳನ್ನು ತನ್ನತ್ತ ಸೆಳೆದುಕೊಳ್ಳುವ ಉದ್ದೇಶದಿಂದ ಭಾವನಾತ್ಮಕವಾಗಿ ಸೆಳೆಯುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸುತ್ತಿದ್ದಾರೆ.

ಬಂಗಾಳದ ಸಾಂಪ್ರದಾಯಿಕ ಸೀರೆಯುಟ್ಟು ಬಜೆಟ್ ಮಂಡನೆ
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಇನ್ನೇನು ಎರಡು ತಿಂಗಳು ಬಾಕಿ ಉಳಿದಿದೆ. ಮತದಾರರನ್ನು ಸೆಳೆಯುವ ತಂತ್ರಗಾರಿಕೆ ಈಗಿನಿಂದಲೇ ಆರಂಭವಾದಂತೆ ಕಾಣುತ್ತಿದೆ. ಪಶ್ಚಿಮ ಬಂಗಾಳದ ಸಾಂಪ್ರದಾಯಿಕ ಲಾಲ್ ಪಾದ್ ಸೀರೆಯಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಿಂಚಿದ್ದು ಅದಕ್ಕೆ ಸಾಕ್ಷಿ ಎನ್ನುವಂತಿದೆ. ಪಶ್ಚಿಮ ಬಂಗಾಳದಲ್ಲಿ ವಿಶೇಷ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಮಾತ್ರ ಈ ಲಾಲ್ ಪಾದ್ ಸೀರೆಯನ್ನು ಉಟ್ಟುಕೊಳ್ಳಲಾಗುತ್ತದೆ.

ಬಜೆಟ್ ಮಂಡನೆಗೂ ಮುನ್ನ ಟ್ಯಾಗೋರ್ ಬಗ್ಗೆ ಉಲ್ಲೇಖ
ಕೇಂದ್ರ ಬಜೆಟ್ ಮಂಡನೆ ಆರಂಭಕ್ಕೂ ಮೊದಲು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪಶ್ಚಿಮ ಬಂಗಾಳ ಮೂಲದ ಪ್ರಖ್ಯಾತ ಕವಿ ರವೀಂದ್ರನಾಥ್ ಟ್ಯಾಗೋರ್ ಅವರ ಮಾತಿನ ಬಗ್ಗೆ ಉಲ್ಲೇಖಿಸಿದರು. "ವಿಶ್ವಾಸ ಎಂಬುದು ಬೆಳಕನ್ನು ಅನುಭವಿಸುವ ಹಕ್ಕಿಯಂತೆ, ಅದು ಕತ್ತಲೆಯಲ್ಲಿದ್ದರೂ ಹಾಡುತ್ತದೆ" ಎಂದು ಹೇಳಿದರು. ಇತಿಹಾಸದಲ್ಲಿ ಈ ದಿನವು ಹೊಸ ಯುಗದ ಉದಯಕ್ಕೆ ಸಾಕ್ಷಿಯಾಗಿರಲಿದೆ. ಮುಂದಿನ ದಿನಗಳಲ್ಲಿ ಭಾರತವು ಭರವಸೆ ಮತ್ತು ವಿಶ್ವಾಸದ ಭೂಮಿ ಆಗಿರಲಿದೆ ಎಂದರು.

ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂಗೆ ಬಂಪರ್
2022ರ ಮಾರ್ಚ್ ವೇಳೆಗೆ ಕಟ್ಟಡಗಳು ಮತ್ತು ಮೂಲಭೂತ ಸೌಕರ್ಯಗಳು ಸೇರಿದಂತೆ 8500 ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿ ನಿರ್ಮಿಸುವುದರ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದರು. ವಿಧಾನಸಭಾ ಚುನಾವಣೆಗಳು ನಡೆಯುವ ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಅನುದಾನ ಘೋಷಿಸಲಾಗಿತ್ತು. ಆದರೆ ಈ ಪೈಕಿ ಪಶ್ಚಿಮ ಬಂಗಾಳಕ್ಕೆ 25000 ಕೋಟಿ ರೂಪಾಯ ಘೋಷಿಸಿರುವುದು ಎದ್ದು ಕಾಣುವಂತಿತ್ತು.

ಪಶ್ಚಿಮ ಬಂಗಾಳ ಚುನಾವಣೆಗೆ ಎರಡು ತಿಂಗಳಷ್ಟೇ ಬಾಕಿ
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯು ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ನಡೆಯಲಿದೆ. ತೃಣಮೂಲ ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರು ಮೇಲಿಂದ ಮೇಲೆ ಮುರಿದು ಬೀಳುತ್ತಿದ್ದಾರೆ. ಈ ಬಾರಿ ರಾಜ್ಯದಲ್ಲಿ ಕಮಲ ಅರಳಿಸುವುದಕ್ಕೆ ಬಿಜೆಪಿ ನಾಯಕರು ಪಣ ತೊಟ್ಟಂತೆ ಕಾಣುತ್ತಿದೆ. ಟಿಎಂಸಿ ಬಹುತೇಕ ಶಾಸಕರು ಈಗಾಗಲೇ ಪಕ್ಷವನ್ನು ತೊರೆದು ಬಿಜೆಪಿ ಕಡೆಗೆ ಮುಖ ಮಾಡಿದ್ದಾರೆ.












Click it and Unblock the Notifications