ಮಮತಾ ಬ್ಯಾನರ್ಜಿಗೆ ಬೆಂಬಿಡದ 'ಶಾರದಾ': ರಕ್ಷಣೆ ಹಿಂಪಡೆದ ಕೋಲ್ಕತ್ತ ಹೈಕೋರ್ಟ್
ಕೋಲ್ಕತಾ, ಸೆ 13: ಕೇಂದ್ರ ತನಿಖಾ ದಳ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವೆ, ಮತ್ತೊಂದು ಸುತ್ತಿನ ರಾಜಕೀಯ ಮೇಲಾಟಕ್ಕೆ ವೇದಿಕೆ ಸಿದ್ದವಾಗುತ್ತಿದೆ.
ಶಾರದಾ ಚಿಟ್ ಫಂಡ್ ಹಗರಣ ಪ್ರಕರಣದಲ್ಲಿ ಸಿಬಿಐ ಬಂಧನದಿಂದ ರಕ್ಷಣೆ ಕೋರಿ ಮಹಾನಗರದ ಮಾಜಿ ಪೊಲೀಸ್ ಆಯುಕ್ತರು ಕೋರ್ಟ್ ಮೊರೆ ಹೋಗಿದ್ದರು. ಈಗ, ರಕ್ಷಣೆಯನ್ನು ಶುಕ್ರವಾರ (ಸೆ 13) ಕೋಲ್ಕತಾ ಹೈಕೋರ್ಟ್ ಹಿಂಪಡೆದುಕೊಂಡಿದೆ.
ಮಮತಾ ಬ್ಯಾನರ್ಜಿಯವರ ಪರಮಾಪ್ತ ಮತ್ತು ಕೋಲ್ಕತಾ ಮಹಾನಗರದ ಪೊಲೀಸ್ ಆಯುಕ್ತರಾದ ರಾಜೀವ್ ಕುಮಾರ್ ಅವರನ್ನು ಬಂಧಿಸಲು ಕೆಲವು ತಿಂಗಳ ಹಿಂದೆ ಸಿಬಿಐ ಮುಂದಾಗಿತ್ತು. ಆ ವೇಳೆ, ಸಿಬಿಐ ಅಧಿಕಾರಿಗಳಿಗೇ ಮಮತಾ ಕೋಟೆಯನ್ನು ಹಾಕಿದ್ದರು.

ಈಗ ಹೊರಬಿದ್ದಿರುವ ಕೋಲ್ಕತಾ ಹೈಕೋರ್ಟಿನ ತೀರ್ಪು ಮಾಜಿ ಪೊಲೀಸ್ ಆಯುಕ್ತರು ಮತ್ತು ಮಮತಾ ಬ್ಯಾನರ್ಜಿಗೆ ಆದ ತೀವ್ರ ಹಿನ್ನಡೆಯೆಂದೇ ವ್ಯಾಖ್ಯಾನಿಸಲಾಗುತ್ತಿದೆ. ಹೈಕೋರ್ಟ್ ರಕ್ಷಣೆ ಸ್ಥಗಿತಗೊಂಡಿರುವುದರಿಂದ, ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಬಂಧನದ ಭೀತಿ ಎದುರಾಗಿದೆ.
"ಯಾವುದೇ ವಾರಂಟ್ ಇಲ್ಲದೆ ಪೊಲೀಸ್ ಕಮಿಷನರ್ ಮನೆಗೆ ಬರಲು ನಿಮಗೆಷ್ಟು ಧೈರ್ಯ" ಎಂದು ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐಗೆ ಧಮ್ಕಿ ನೀಡಿದ್ದ ಮಮತಾ, 'ಸಂವಿಧಾನವನ್ನು ಉಳಿಸಿ' ಎಂದು ಧರಣಿ ಕುಳಿತಿದ್ದರು.
ಕಳೆದ ಫೆಬ್ರವರಿ ತಿಂಗಳಲ್ಲಿ, ಸಿಬಿಐ ಮತ್ತು ಕೋಲ್ಕತಾ ಪೊಲೀಸ್ ಕಮಿಷನರ್ ನಡುವಿನ ಸಂಘರ್ಷ ತಾರಕಕ್ಕೇರಿತ್ತು. ಕೋಲ್ಕತಾ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ಅವರ ವಿಚಾರಣೆಗೆಂದು ಬಂದಿದ್ದ ಐವರು ಸಿಬಿಐ ಅಧಿಕಾರಿಗಳನ್ನೇ ಪೊಲೀಸ್ ವಾಹನದಲ್ಲಿ ಬಲವಂತವಾಗಿ ಕರೆದೊಯ್ದು, ವಶಕ್ಕೆ ತೆಗೆದುಕೊಳ್ಳಲಾಗಿತ್ತು.












Click it and Unblock the Notifications