ಮಮತಾ ಆಪ್ತ ಪೊಲೀಸ್ ಅಧಿಕಾರಿ ವಿರುದ್ಧ ಲುಕೌಟ್ ನೋಟಿಸ್
ನವದೆಹಲಿ, ಮೇ 26: ಬಹುಕೋಟಿ ಶಾರದಾ ಚಿಟ್ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಪ್ತ ಕೋಲ್ಕತಾದ ಮಾಜಿ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರಿಗೆ ಬಂಧನ ಭೀತಿ ಎದುರಾಗಿದ್ದು, ಲುಕೌಟ್ ನೋಟಿಸ್ ಜಾರಿಗೊಳಿಸಲಾಗಿದೆ.
ಲುಕೌಟ್ ನೋಟಿಸ್ ಪ್ರಕಾರ, ರಾಜೀವ್ ಕುಮಾರ್ ಅವರು ದೇಶ ಬಿಟ್ಟು ಹೊರಕ್ಕೆ ಹೋಗುವಂತಿಲ್ಲ. ಇನ್ನು ಒಂದು ವರ್ಷ ಅವಧಿಯಲ್ಲಿ ಈ ಪ್ರಯತ್ನ ಪಟ್ಟರೆ ತಕ್ಷಣವೇ ಬಂಧಿಸುವಂತೆ ಎಲ್ಲಾ ವಿಮಾನ ನಿಲ್ದಾಣಗಳಿಗೂ ಸಿಬಿಐನಿಂದ ಸೂಚನೆ ಸಿಕ್ಕಿದೆ. ಇದೇ ಆದೇಶದ ಪ್ರತಿಯನ್ನು ನೌಕಾದಳಕ್ಕೂ ರವಾನಿಸಲಾಗಿದೆ.
ಮಮತಾ ಬ್ಯಾನರ್ಜಿಗೆ ಹಿನ್ನಡೆ: ಆಪ್ತ ಪೊಲೀಸ್ ಅಧಿಕಾರಿಗೆ ಬಂಧನ ಭೀತಿ
ಶಾರದಾ ಚಿಟ್ ಫಂಡ್ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ, ಸಾಕ್ಷ್ಯ ನಾಶಪಡಿಸಿದ ಆರೋಪದಲ್ಲಿ ರಾಜೀವ್ ಕುಮಾರ್ ಅವರನ್ನು ಬಂಧಿಸಲು ಮುಂದಾಗಿತ್ತು. ರಾಜೀವ್ ಅವರಿಗೆ ಬಂಧನದಿಂದ ಮಧ್ಯಂತರ ರಕ್ಷಣೆ ಒದಗಿಸಿ ಫೆಬ್ರವರಿಯಲ್ಲಿ ಸುಪ್ರೀಂಕೋರ್ಟ್ ಆದೇಶಿಸಿತ್ತು. ಈ ರಕ್ಷಣೆ ಇನ್ನು ಏಳು ದಿನಗಳ ಕಾಲ ಮಾತ್ರ ಇರಲಿದೆ.
ಈ ಪ್ರಕರಣದಲ್ಲಿ ಅತ್ಯಂತ ಪ್ರಮುಖವಾಗಿರುವ ಸಾಕ್ಷ್ಯಗಳನ್ನು ನಾಶಪಡಿಸಲು ಅಥವಾ ಹಾಳು ಮಾಡಲು ರಾಜೀವ್ ಕುಮಾರ್ ಅವರು ಪ್ರಯತ್ನಿಸಿದ್ದಕ್ಕೆ ಪ್ರಾಥಮಿಕ ಪುರಾವೆಗಳಿವೆ. ಹೀಗಾಗಿ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲು ಬಯಸಿರುವುದಾಗಿ ಸುಪ್ರೀಂಕೋರ್ಟ್ಗೆ ಸಿಬಿಐ ಹೇಳಿತ್ತು. ಇದಕ್ಕೆ ಪೂರಕವಾಗಿ ಮೇ 17ರಂದು ತನಿಖೆ ಮುಂದುವರೆಸಲು ಆದೇಶ ಸಿಕ್ಕಿತ್ತು. 1989ರ ಬ್ಯಾಚಿನ ಐಪಿಎಸ್ ಅಧಿಕಾರಿ ರಾಜೀವ್ ಕುಮಾರ್ ಅವರು 2500 ಕೋಟಿ ರು ಮೌಲ್ಯದ ಶಾರಾದ ಚಿಟ್ ಫಂಡ್ ಹಗರಣದಲ್ಲಿ ಸಿಲುಕಿದ್ದಾರೆ.