ಬಂಗಾಳದ ಅಭಿವೃದ್ಧಿ ಬಯಸುವವರು ಟಿಎಂಸಿಯಲ್ಲಿ ಇರುವುದಿಲ್ಲ; ರಾಜಿಬ್
ಕೋಲ್ಕತ್ತಾ, ಫೆಬ್ರವರಿ.13: ಪಶ್ಚಿಮ ಬಂಗಾಳದ ಜನತೆಗಾಗಿ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಬೇಕು ಎಂದು ಬಯಸುವ ಯಾರೊಬ್ಬರೂ ಕೂಡಾ ತೃಣಮೂಲ ಕಾಂಗ್ರೆಸ್ ನಲ್ಲಿ ಮುಂದುವರಿಯುವುದಕ್ಕೆ ಬಯಸುವುದಿಲ್ಲ ಎಂದು ಬಿಜೆಪಿ ಮುಖಂಡ ರಾಜಿಬ್ ಬ್ಯಾನರ್ಜಿ ಹೇಳಿದ್ದಾರೆ.
ಕೋಲ್ಕತ್ತಾದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ರಾಜಿಬ್ ಬ್ಯಾನರ್ಜಿ, ಟಿಎಂಸಿ ವಿರುದ್ಧ ಹರಿ ಹಾಯ್ದರು. ರಾಜ್ಯ ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲಿ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದ ದಿನೇಶ್ ತ್ರಿವೇದಿಯವರು ಭಾರತೀಯ ಜನತಾ ಪಕ್ಷಕ್ಕೆ ಸೇರುತ್ತಾರೆ ಎಂದು ನನಗೆ ಹಲವು ಮೂಲಗಳಿಂದ ತಿಳಿದು ಬಂದಿದೆ ಎಂದು ಹೇಳಿದರು.
ರಾಜ್ಯಸಭಾ ಸ್ಥಾನಕ್ಕೆ ಟಿಎಂಸಿ ಸಂಸದ ದಿನೇಶ್ ತ್ರಿವೇದಿ ರಾಜೀನಾಮೆ
ಸಂಸದ ದಿನೇಶ್ ತ್ರಿವೇದಿಯಷ್ಟೇ ಅಲ್ಲ, ಪ್ರಾಮಾಣಿಕರಾಗಿ ಇರುವ ಯಾರೊಬ್ಬರೂ ಕೂಡಾ ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ಇರುವುದಕ್ಕೆ ಇಚ್ಛಿಸುವುದಿಲ್ಲ. ಒಂದು ವೇಳೆ ಅವರು ಬಿಜೆಪಿಗೆ ಸೇರುವುದಾದರೆ ಧಾರಾಳವಾಗಿ ಬರಬಹುದು ಎಂದು ಬಿಜೆಪಿ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಆಹ್ವಾನ ನೀಡಿದ್ದರು.
ಫೆಬ್ರವರಿ.12ರಂದು ದಿನೇಶ್ ತ್ರಿವೇದಿ ರಾಜೀನಾಮೆ:
ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಡೆಯುತ್ತಿದ್ದರೆ ಅದರ ಬಗ್ಗೆ ನಾವಿಲ್ಲಿ ಕುಣಿತು ಏನನ್ನೂ ಮಾತನಾಡದ ಸ್ಥಿತಿಯಲ್ಲಿದ್ದೇವೆ. ನಮ್ಮ ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ನಾವಿಲ್ಲಿ ಮಾತನಾಡವುದಕ್ಕೂ ಆಗುತ್ತಿಲ್ಲ. ಈ ಕಾರಣಕ್ಕಾಗಿ ನಾನು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ರಾಜ್ಯಸಭೆಯಲ್ಲಿ ದಿನೇಶ್ ತ್ರಿವೇದಿ ಹೇಳಿದ್ದರು.
ರಾಜ್ಯಸಭೆಯಲ್ಲಿ ದಿನೇಶ್ ತ್ರಿವೇದಿ ಅಸಮಾಧಾನ:
"ರಾಜ್ಯಸಭೆಗೆ ನನ್ನನ್ನು ಕಳುಹಿಸಿ ಕೊಟ್ಟ ಟಿಎಂಸಿ ಪಕ್ಷಕ್ಕೆ ನಾವು ಆಭಾರಿಯಾಗಿದ್ದೇನೆ. ರಾಜ್ಯದಲ್ಲಿ ಹಿಂಸಾಚಾರ ನಡೆಯುತ್ತಿದ್ದರೂ ನಾನೇನೂ ಮಾಡದ ಸ್ಥಿತಿಯಲ್ಲಿರುವುದು ಸಾಕಷ್ಟು ನೋವು ಉಂಟು ಮಾಡಿದೆ. ಈ ಸ್ಥಾನದಲ್ಲಿ ಇದ್ದರೂ ನಿನ್ನಿಂದ ಏನನ್ನೂ ಮಾಡಲಾಗದಿದ್ದರೆ, ನೀನೇಕೆ ರಾಜೀನಾಮೆ ಸಲ್ಲಿಸಬಾರದು ಎಂದು ನನ್ನ ಮನಸ್ಸು ಹೇಳುತ್ತಿದೆ. ಹಾಗಾಗಿ ನಾನು ಪಶ್ಚಿಮ ಬಂಗಾಳದ ಜನರೊಂದಿಗೆ ಸೇರಿ ಕೆಲಸ ಮಾಡುವುದಕ್ಕಾಗಿ ಈ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ" ಎಂದು ಸಂಸದ ದಿನೇಶ್ ತ್ರಿವೇದಿ ಹೇಳಿದ್ದಾರೆ.