ಪಶ್ಚಿಮ ಬಂಗಾಳ ರೈತರ ಬಗ್ಗೆ ಉಲ್ಲೇಖ; ಮೋದಿಗೆ ಮಮತಾ ತಿರುಗೇಟು
ಕೋಲ್ಕತ್ತಾ, ಡಿಸೆಂಬರ್ 25: ಪಶ್ಚಿಮ ಬಂಗಾಳ ರೈತರಿಗೆ ಕೇಂದ್ರದ ಯೋಜನೆ ತಲುಪದ ಕುರಿತಂತೆ ಪ್ರಧಾನಿ ಮೋದಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, "ಮೋದಿ ಅರ್ಧ ಸತ್ಯದೊಂದಿಗೆ ಜನರ ದಾರಿ ತಪ್ಪಿಸುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಶುಕ್ರವಾರ ಏಳನೇ ಕಂತಿನ ಹಣ ಬಿಡುಗಡೆ ಮಾಡಿ ಆರು ರಾಜ್ಯಗಳ ರೈತರೊಂದಿಗೆ ವಿಡಿಯೋ ಸಂವಾದ ನಡೆಸಿದ ಮೋದಿ, ಪಶ್ಚಿಮ ಬಂಗಾಳದ ಕುರಿತು ಪ್ರಸ್ತಾಪ ಮಾಡಿದ್ದರು.
ಪಶ್ಚಿಮ ಬಂಗಾಳದ ರೈತರು ಕೇಂದ್ರ ಸರ್ಕಾರದ ಈ ಯೋಜನೆಯಿಂದ ವಂಚಿತರಾಗಿದ್ದಾರೆ. ರೈತರಿಗೆ ಈ ಯೋಜನೆ ತಲುಪಿಸದ ಏಕೈಕ ರಾಜ್ಯವೆಂದರೆ ಪಶ್ಚಿಮ ಬಂಗಾಳ ಎಂದು ಉಲ್ಲೇಖಿಸಿದ್ದರು. ಜೊತೆಗೆ ಮಮತಾ ಬ್ಯಾನರ್ಜಿ ಸಿದ್ಧಾಂತಗಳು ಬಂಗಾಳವನ್ನು ನಾಶಪಡಿಸುತ್ತವೆ, ರೈತರ ಕುರಿತಂತೆ ಮಮತಾ ಬ್ಯಾನರ್ಜಿ ಕ್ರಮಗಳು ನನಗೆ ಬೇಸರ ಮೂಡಿಸಿವೆ ಎಂದು ಹೇಳಿದ್ದರು.

ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿ, "ಮೋದಿ ಅವರು ದೆಹಲಿಯಲ್ಲಿ ಪ್ರತಿಭಟನಾ ನಿರತ ರೈತರ ಸಮಸ್ಯೆಗಳನ್ನು ಬಗೆಹರಿಸುವುದನ್ನು ಬಿಟ್ಟು ರೈತರ ಬಗ್ಗೆ ವಿಡಿಯೋ ಮೂಲಕ ಭಾರೀ ಕಾಳಜಿ ಮೆರೆದಿದ್ದಾರೆ. ತಮ್ಮ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಪಶ್ಚಿಮ ಬಂಗಾಳ ರೈತರಿಗೆ ಸಹಾಯ ಮಾಡುವ ಉದ್ದೇಶವನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಿದ್ದಾರೆ. ಆದರೆ ಅವರು ಅರ್ಧ ಸತ್ಯ ಹೇಳಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ" ಎಂದು ದೂರಿದ್ದಾರೆ.
"ಪಶ್ಚಿಮ ಬಂಗಾಳಕ್ಕೆ ಮೋದಿ ಸರ್ಕಾರ ಏನೂ ಮಾಡಿಲ್ಲ. 8000 ಕೋಟಿ ರೂ ಜಿಎಸ್ ಟಿ ಬಾಕಿ ಸೇರಿದಂತೆ 85,000 ಕೋಟಿ ರೂ ಬಾಕಿಯ ಒಂದು ಭಾಗವನ್ನೂ ಕೇಂದ್ರ ಬಿಡುಗಡೆ ಮಾಡಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications