ಮೋದಿ ಸರ್ಕಾರ ನನ್ನನ್ನು ಗುರಿಯಾಗಿಸಿಕೊಂಡಿದೆ; ಮಮತಾ ಬ್ಯಾನರ್ಜಿ
ಕೋಲ್ಕತ್ತಾ, ಡಿಸೆಂಬರ್ 28: ನರೇಂದ್ರ ಮೋದಿ ಸರ್ಕಾರ ತಮ್ಮನ್ನು ರಾಜಕೀಯವಾಗಿ ಗುರಿಯಾಗಿಸಿಕೊಂಡಿದೆ ಹಾಗೂ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಗಲಭೆಗಳ ಮೂಲಕ ಕಿಡಿ ಹೊತ್ತಿಸಲು ಪ್ರಯತ್ನಿಸುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಆರೋಪಿಸಿದ್ದಾರೆ.
ಸೋಮವಾರ ಬಿಜೆಪಿ ಕುರಿತು ಮಾತನಾಡಿದ ಮಮತಾ ಬ್ಯಾನರ್ಜಿ, "ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಗಲಭೆಗಳನ್ನು ಸೃಷ್ಟಿಸಿ ಕಿಡಿ ಹೊತ್ತಿಸುತ್ತಿದೆ. ಇಲ್ಲಿನ ಶಿಕ್ಷಣ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳನ್ನು ಜೆಎನ್ ಯು ರೀತಿ ಒಡೆದುಹಾಕಲು ಪ್ರಯತ್ನಿಸುತ್ತಿದೆ. ಬಂಗಾಳದಲ್ಲಿ ಬಿಜೆಪಿ ಅಪಚಾರ ಮಾಡುತ್ತಿದೆ" ಎಂದು ದೂರಿದ್ದಾರೆ.
ಪಶ್ಚಿಮ ಬಂಗಾಳ ರೈತರ ಬಗ್ಗೆ ಉಲ್ಲೇಖ; ಮೋದಿಗೆ ಮಮತಾ ತಿರುಗೇಟು
"ಮೋದಿ ಸರ್ಕಾರ ನನ್ನನ್ನು ರಾಜಕೀಯವಾಗಿ ಗುರಿಯಾಗಿಸಿಕೊಂಡಿದೆ. ನಮ್ಮ ಶಿಕ್ಷಣ ತಜ್ಞರನ್ನು ಬಿಜೆಪಿ ಗುರಿಯಾಗಿಸಿಕೊಂಡಿದೆ. ಇಷ್ಟು ವರ್ಷಗಳಲ್ಲಿ ಬಿಜೆಪಿಯವರು ನೇತಾಜಿ ಬಗ್ಗೆ ಮಾತನಾಡಿರಲಿಲ್ಲ, ಈಗ ಮಾತನಾಡುತ್ತಿದ್ದಾರೆ" ಎಂದು ವಾಗ್ದಾಳಿ ನಡೆಸಿದರು.
ದೆಹಲಿಯಲ್ಲಿ ಕೃಷಿ ಕಾಯ್ದೆ ವಿರುದ್ಧ ರೈತರ ಹೋರಾಟದ ಕುರಿತು ಪ್ರತಿಕ್ರಿಯಿಸಿ, "ಈ ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕೆಂಬ ರೈತರ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಈ ಕಾಯ್ದೆಗಳನ್ನು ಕೇಂದ್ರ ರದ್ದುಗೊಳಿಸಲೇಬೇಕು" ಎಂದು ಆಗ್ರಹಿಸಿದ್ದಾರೆ.