'ದಯವಿಟ್ಟು ಕ್ಷಮಿಸಿ,' ಪ್ರಧಾನಿ ಮೋದಿಗೆ ಮಮತಾ ದೀದಿ ಸಂದೇಶ
Recommended Video
ನವದೆಹಲಿ, ಮೇ 29: ಗುರುವಾರ ದೇಶದ 15 ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ನರೇಂದ್ರ ಮೋದಿ ಅವರಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂದೇಶ ಕಳಿಸಿದ್ದಾರೆ.
"ನಾನು ಮೊದಲು ನಿಮ್ಮ ಪ್ರಮಾಣವಚನ ಕಾರ್ಯಕ್ರಮಕ್ಕೆ ಹಾಜರಾಗಬೇಕು ಎಂದುಕೊಂಡಿದ್ದೆ. ಆದರೆ ಕೆಲವು ಸಂಗತಿಗಳಿಂದ ಬೇಸರವಾಗಿದ್ದು, ಕಾರ್ಯಕ್ರಮಕ್ಕೆ ಆಗಮಿಸಲು ಸಾಧ್ಯವಾಗುತ್ತಿಲ್ಲ. ಕ್ಷಮಿಸಿ" ಎಂದು ಮಮತಾ ಬ್ಯಾನರ್ಜಿ ಮೋದಿಯವರಿಗೆ ಸಂದೇಶ ಕಳಿಸಿದ್ದಾರೆ.
"ನೂತನ ಪ್ರಧಾನಿ ನರೇಂದ್ರ ಮೋದಿ ಜೀ ಅವರಿಗೆ ಅಭಿನಂದನೆಗಳು. ಸಾಂವಿಧಾನಿಕ ಆಮಂತ್ರಣವನ್ನು ಸ್ವೀಕರಿಸಿ ನಿಮ್ಮ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾನು ನಿರ್ಧರಿಸಿದ್ದೆ. ಆದರೆ ನಾನು ಆಮಂತ್ರಣವನ್ನು ಒಪ್ಪಿಕೊಂಡ ಒಂದು ಗಂಟೆಯಲ್ಲಿ ಬಿಜೆಪಿಯು ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ ರಾಜಕೀಯ ಹಿಂಸಾಚಾರದಲ್ಲಿ 54 ಜನರನ್ನು ಕೊಲ್ಲಲಾಗಿದೆ ಎಂದು ದೂರಿದೆ. ಮಾಧ್ಯಮಗಳಲ್ಲಿ ಈ ಸುದ್ದಿ ನೋಡಿದೆ. ಈ ಎಲ್ಲಾ ಕೊಲೆಗಳೂ ನಡೆದಿದ್ದು ವೈಯಕ್ತಿಕ ಕಾರಣ, ಕೌಟುಂಬಿಕ ದ್ವೇಷ ಮತ್ತಿತರ ಕಾರಣದಿಂದ. ಅದಕ್ಕೆ ರಾಜಕೀಯದ ಬಣ್ಣ ಹಚ್ಚಲಾಗಿದೆ. ಈ ಸುದ್ದಿ ಸುಳ್ಳು. ಇದ್ಯಾವುದಕ್ಕೂ ದಾಖಲೆಗಳಿಲ್ಲ" ಎಂದು ಮಮತಾ ಹೇಳಿದ್ದಾರೆ.
|
ಮೋದಿಜಿ, ನನ್ನನ್ನು ಕ್ಷಮಿಸಿ
"ಮೋದಿಜಿ, ನನ್ನನ್ನು ಕ್ಷಮಿಸಿ. ನಾನು ಪ್ರಮಾಣವಚನ ಕಾರ್ಯಕ್ರಮಕ್ಕೆ ಬರದೆ ಇರಲು ನಿರ್ಧರಿಸಿದ್ದೇನೆ. ಆ ಕಾರ್ಯಕ್ರಮ ಪ್ರಜಾಪ್ರಭುತ್ವವನ್ನು ಸಂಭ್ರಮಿಸುವುದಕ್ಕೆ. ಭಿನ್ನ ರಾಜಕೀಯ ನಂಬಿಕೆಗಳನ್ನು ಅಗೌರವದಿಂದ ಕಾಣುವುದಕ್ಕಾಗಲೀ, ಮತ್ತೊಬ್ಬರ ರಾಜಕೀಯ ನಂಬಿಕೆಗಳನ್ನು ಅವಹೇಳಮಾಡುವುದಕ್ಕಾಗಲಿ ಅಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ." ಎಂದು ಮಮತಾ ಬ್ಯಾನರ್ಜಿ ಟ್ವೀಟ್ ಮೂಲಕ ಮೋದಿ ಅವರಿಗೆ ಸಂದೇಶ ಕಳಿಸಿದ್ದು, ತಾವು ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಾರ್ಯಕ್ರಮಕ್ಕೆ ಹೋಗಲು ಸಜ್ಜಾಗಿದ್ದ ಮಮತಾ
ಪ್ರಮಾಣ ವಚನ ಕಾರ್ಯಕ್ರಮವಾಗಿರುವುದರಿಂದ ನಾವು ಅದಕ್ಕೆ ಹೋಗದೆ ಇರುವುದು ಸರಿಯಲ್ಲ. ವಿಪಕ್ಷದ ಇತರ ರಾಜ್ಯದ ಮುಖ್ಯಮಂತ್ರಿಗಳೊಂದಿಗೂ ನಾನು ಮಾತುಕತೆ ನಡೆಸಿದ್ದೇನೆ. ನಾವೆಲ್ಲರೂ ಕಾರ್ಯಕ್ರಮಕ್ಕೆ ಹೋಗುತ್ತೇವೆ ಎಂದು ಮಂಗಳವಾರವಷ್ಟೇ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಹೇಳಿಕೆ ನೀಡಿದ್ದರು.

ಹಿಂದೆ ಸರಿದ ಮಮತಾ
ಲೋಕಸಭೆ ಚುನಾವಣೆಯ ಸಮಯದಲ್ಲಿ ಮಮತಾ ಬ್ಯಾನರ್ಜಿ ಮತ್ತು ನರೇಂದ್ರ ಮೊದಿ ಅವರ ನಡುವೆ ವ್ಯಾಪಕ ವಾಗ್ದಾಳಿ ನಡೆದಿದ್ದರಿಂದ ಮೋದಿ ಪ್ರಮಾಣವಚನಕ್ಕೆ ದೀದಿ ಆಗಮಿಸುತ್ತಾರೋ ಇಲ್ಲವೋ ಎಂಬುದು ಕುತೂಹಲ ಕೆರಳಿಸಿದ್ದ ಪ್ರಶ್ನೆಯಾಗಿತ್ತು. ಆದರೆ ನಂತರ ತಾವು ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಹೇಳಿ ಅಚ್ಚರಿ ಸೃಷ್ಟಿಸಿದ್ದರು. ಇದೀಗ ಮತ್ತೆ ತಮ್ಮ ನಡೆಯಿಂದ ಮಮತಾ ಹಿಂದೆ ಸರಿದಿದ್ದಾರೆ.

ಮೇ 30 ರಂದು ಪ್ರಮಾಣವಚನ
ಏಪ್ರಿಲ್ 11 ರಿಂದ ಮೇ 19 ರವರೆಗೆ ಒಟ್ಟು 7 ಹಂತಗಳಲ್ಲಿ ನಡೆದ ಲೋಕಸಭೆ ಚುನಾವಣೆಯ ಫಲಿತಾಂಶ ಮೇ 23 ರಂದು ಹೊರಬಿದ್ದಿತ್ತು. ಬಿಜೆಪಿ 303 ಕ್ಷೇತ್ರಗಳಲಲ್ಲಿ ಗೆದ್ದು ಬಹುಮತ ಪಡೆದರೆ, ಎನ್ ಡಿಎ ಮೈತ್ರಿಕೂಟ 352(542) ಸ್ಥಾನಗಳನ್ನು ಗೆದ್ದುಕೊಂಡಿತ್ತು. ಮೇ 25 ರಂದು ನರೇಂದ್ರ ಮೋದಿ ಅವರನ್ನು ಎನ್ ಡಿಎ ಮೈತ್ರಿಕೂಟದ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆರಿಸಲಾಗಿತ್ತು. ಮೇ 30 ರಂದು ಗುರುವಾರ ಸಂಜೆ 7 ಗಂಟೆಗೆ ಅವರು ಈ ದೇಶದ ಹದಿನೈದನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.












Click it and Unblock the Notifications