5 ರಾಜ್ಯಗಳಿಂದ ರೈಲು, ವಿಮಾನ ಸಂಚಾರ ನಿಲ್ಲಿಸಿ: ಕೇಂದ್ರಕ್ಕೆ ಸಿಎಂ ಮಮತಾ ಆಗ್ರಹ
ಕೊಲ್ಕತ್ತಾ, ಜೂನ್ 29: ಪಶ್ಚಿಮ ಬಂಗಾಳದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಐದು ರಾಜ್ಯಗಳಿಂದ ಬರುತ್ತಿರುವ ವಿಮಾನ ಹಾಗೂ ರೈಲು ಸಂಚಾರ ನಿಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸಿಎಂ ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದಾರೆ.
ಈ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ''ಕೊರೊನಾ ಕೇಸ್ಗಳು ಹೆಚ್ಚಿರುವ ಐದು ರಾಜ್ಯಗಳಿಂದ ಬಂಗಾಳಕ್ಕೆ ಸ್ವಲ್ಪ ದಿನಗಳ ಕಾಲ ವಿಮಾನ ಮತ್ತು ರೈಲು ಕಳುಹಿಸಬೇಡಿ'' ಎಂದು ಆಗ್ರಹಿಸಿದ್ದಾರೆ.
ದೆಹಲಿ, ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ಹಾಗೂ ಮಧ್ಯಪ್ರದೇಶದಿಂದ ಬರುವ ವಿಮಾನ, ರೈಲುಗಳನ್ನು ನಮ್ಮ ರಾಜ್ಯಕ್ಕೆ ಕಳುಹಿಸಬೇಡಿ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಕೇಂದ್ರಕ್ಕೆ ಪತ್ರದ ಮೂಲಕ ವಿನಂತಿಸಿದ್ದಾರೆ.

ರಾಜ್ಯದಲ್ಲಿ ಸೋಂಕು ಹೆಚ್ಚು ಹರಡುತ್ತಿರುವ ಕಾರಣ ವಿಮಾನ, ರೈಲು ಸಂಚಾರ ನಿಲ್ಲಿಸಿದರೆ ಸ್ವಲ್ಪ ಮಟ್ಟಿಗೆ ಸರ್ಕಾರಕ್ಕೆ ಸಹಾಯವಾಗಲಿದೆ ಎಂದು ಕೇಂದ್ರಕ್ಕೆ ಮನವರಿಕೆ ಮಾಡಿದ್ದಾರೆ.
ಇನ್ನು ಪಶ್ಚಿಮ ಬಂಗಾಳದಲ್ಲಿ ಇಂದು 624 ಮಂದಿಗೆ ಕೊರೊನಾ ಅಂಟಿಕೊಂಡಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 17,907ಕ್ಕೆ ಏರಿಕೆಯಾಗಿದೆ. 5,535 ಪ್ರಕರಣಗಳು ಸಕ್ರಿಯವಾಗಿದ್ದು, ಈವರೆಗೂ ರಾಜ್ಯದಲ್ಲಿ 653 ಜನರು ಸಾವನ್ನಪ್ಪಿದ್ದಾರೆ.
ಸದ್ಯಕ್ಕೆ ಪಶ್ಚಿಮ ಬಂಗಾಳದಲ್ಲಿ ಮೆಟ್ರೋ ಸಂಚಾರ ಬಂದ್ ಆಗಿದೆ. ರಾಜ್ಯ ಸರ್ಕಾರವೂ ಮೆಟ್ರೋ ಸಂಚಾರ ಆರಂಭಿಸಲು ಮನವಿ ಮಾಡಿದೆಯಂತೆ. ಆದರೆ, ಅನ್ಲಾಕ್ ಮಾರ್ಗಸೂಚಿ ಅನ್ವಯ ಮೆಟ್ರೋ ಸಂಚಾರ ಮಾಡಲು ರೈಲ್ವೆ, ಆರೋಗ್ಯ ಹಾಗೂ ಗೃಹ ಇಲಾಖೆಗಳಿಂದ ಅನುಮತಿ ಬೇಕು ಎಂದು ಆಡಳಿತ ಮಂಡಳಿ ತಿಳಿಸಿದೆ.












Click it and Unblock the Notifications