ಚುನಾವಣೆ ಹೊಸ್ತಿಲಲ್ಲಿ ದೀದಿ ಸರ್ಕಾರದಿಂದ ಭರ್ಜರಿ ಬಜೆಟ್ ಘೋಷಣೆ
ಕೋಲ್ಕತ್ತಾ, ಫೆಬ್ರುವರಿ 06: ಇನ್ನು ಕೆಲವೇ ತಿಂಗಳುಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ರಾಜ್ಯದಲ್ಲಿ ಈಗಾಗಲೇ ಚುನಾವಣಾ ಕಾರ್ಯ ಕಾವೇರಿದ್ದು, ಬಿಜೆಪಿ- ತೃಣಮೂಲ ಕಾಂಗ್ರೆಸ್ ಪಕ್ಷಗಳ ಪ್ರಚಾರ ಭರದಿಂದ ಸಾಗಿದೆ. ಈ ಬೆನ್ನಲ್ಲೇ ಸಿಎಂ ಮಮತಾ ಬ್ಯಾನರ್ಜಿ ಶುಕ್ರವಾರ ವಿಧಾನಸಭೆಯಲ್ಲಿ ರಾಜ್ಯ ವಾರ್ಷಿಕ ಬಜೆಟ್ ಮಂಡನೆ ಮಾಡಿದ್ದಾರೆ. ಈ ಮೂಲಕ ರಾಜ್ಯ ಬಜೆಟ್ ಮಂಡನೆ ಮಾಡಿದ ಮೊದಲ ಮಹಿಳೆ ಎಂದು ಕರೆಸಿಕೊಂಡಿದ್ದಾರೆ.
ರಾಜ್ಯ ಹಣಕಾಸು ಸಚಿವ ಅಮಿತ್ ಮಿತ್ರಾ ಅವರ ಅನಾರೋಗ್ಯದ ಕಾರಣ ಬಜೆಟ್ ಮಂಡನೆ ಮಾಡಲು ಸಾಧ್ಯವಾಗದೇ ಮಮತಾ ಬ್ಯಾನರ್ಜಿಯವರೇ ಬಜೆಟ್ ಮಂಡನೆ ಮಾಡಿದ್ದಾರೆ.
ಈ ನಡುವೆ ರಾಜ್ಯದಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಹಲ್ದಿಯಾ ಪೋರ್ಟ್ ಗೆ ಪ್ರಧಾನಿ ನರೇಂದ್ರ ಮೋದಿಯವರೂ ಫೆ.7ರಂದು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ. ಭೇಟಿ ಸಂದರ್ಭ ಬಂಗಾಳದ ಪ್ರತಿ ಮನೆಗೂ ಎಲ್ ಪಿಜಿ ಅಡುಗೆ ಗ್ಯಾಸ್ ಹಾಗೂ ದಕ್ಷಿಣೇಶ್ವರ ಮೆಟ್ರೋ ಯೋಜನೆಗೆ ಮೋದಿ ಚಾಲನೆ ನೀಡಲಿರುವುದಾಗಿ ತಿಳಿದುಬಂದಿದೆ. ಜೊತೆಗೆ ಬಿಜೆಪಿಗೆ ಪ್ರತಿಯಾಗಿ ಮಮತಾ ಬ್ಯಾನರ್ಜಿ ಬಜೆಟ್ ಘೋಷಣೆಯನ್ನು ಮಾಡಿದ್ದಾರೆ. ಚುನಾವಣಾ ಸಮಯವಾದ್ದರಿಂದ ಬಜೆಟ್ ಗೆ ಹೆಚ್ಚಿನ ಪ್ರಾಮುಖ್ಯವೂ ದೊರೆತಿದೆ. ಮುಂದೆ ಓದಿ...

"ನಾವು ಮಾಡಿದ ಕೆಲಸ ಬಿಜೆಪಿಯ ಘೋಷಣೆ"
ಮೋದಿ ಭೇಟಿ ಕುರಿತು ಮಾತನಾಡಿರುವ ಮಮತಾ ಬ್ಯಾನರ್ಜಿ, ಈಗಾಗಲೇ ಎಲ್ ಪಿಜಿ ಅನಿಲ ಹಾಗೂ ಮೆಟ್ರೋ, ಈ ಎರಡೂ ಯೋಜನೆಗಳನ್ನು ರಾಜ್ಯ ಸರ್ಕಾರದಿಂದ ಮಾಡಲಾಗಿದೆ. ತೃಣಮೂಲ ಕಾಂಗ್ರೆಸ್ ಮುಂದಾಳತ್ವದಲ್ಲಿ ಮಾಡಿದ ಕೆಲಸವನ್ನು ಬಿಜೆಪಿ ಮತ್ತೆ ತನ್ನ ಹೊಸ ಯೋಜನೆ ಎಂಬಂತೆ ಘೋಷಣೆ ಮಾಡುತ್ತಿದೆ ಎಂದು ತಿರುಗೇಟು ನೀಡಿದ್ದಾರೆ.

ಬಜೆಟ್ ನಲ್ಲಿ ಹಲವು ಕಲ್ಯಾಣ ಯೋಜನೆ ಪ್ಯಾಕೇಜ್ ಘೋಷಣೆ
ರಾಜ್ಯದಲ್ಲಿ ಪ್ರಚಾರ ಕಾರ್ಯ ಆರಂಭಿಸಿರುವ ಬಿಜೆಪಿ ನಾಯಕರು ಪಶ್ಚಿಮ ಬಂಗಾಳದಲ್ಲಿ ಏನೂ ಅಭಿವೃದ್ಧಿಯಾಗಿಲ್ಲ. ವಿದ್ಯುತ್, ನೌಕರಿ, ಅಭಿವೃದ್ಧಿಯ ಭರವಸೆಯೊಂದಿಗೆ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಪಶ್ಚಿಮ ಬಂಗಾಳವನ್ನು ಚಿನ್ನದ ಬಂಗಾಳವನ್ನಾಗಿ ಪರಿವರ್ತಿಸುವುದಾಗಿ ಘೋಷಣೆ ಮಾಡಿದೆ. ಈ ಎಲ್ಲದರ ನಡುವೆ ಪಶ್ಚಿಮ ಬಂಗಾಳದಲ್ಲಿ ಶುಕ್ರವಾರ ಅತಿ ಮುಖ್ಯ ಬೆಳವಣಿಗೆ ನಡೆದಿದೆ. ರಾಜ್ಯ ಬಜೆಟ್ ಮಂಡನೆ ಮಾಡಿರುವ ಸಿಎಂ ಮಮತಾ ಬ್ಯಾನರ್ಜಿ ಮೋದಿ ಸರ್ಕಾರಕ್ಕೆ ವಿರುದ್ಧವಾಗಿ ಹಲವು ಕಲ್ಯಾಣ ಯೋಜನೆ ಪ್ಯಾಕೇಜ್ ಗಳನ್ನು ಘೋಷಿಸಿದ್ದಾರೆ.

ಬಜೆಟ್ ಬಗ್ಗೆ ಬಿಜೆಪಿ ತಕರಾರು
ಮಮತಾ ಬ್ಯಾನರ್ಜಿ ಘೋಷಣೆ ಮಾಡಿರುವ ಈ ಬಜೆಟ್ ವಾಸ್ತವಕ್ಕೆ ದೂರವಾಗಿದೆ ಎಂದು ಬಿಜೆಪಿ ಆರೋಪಿಸಿದೆ. ವಿಧಾನಸಭೆ ಚುನಾವಣೆಯ ಉದ್ದೇಶದೊಂದಿಗೆ ಈ ಬಜೆಟ್ ಘೋಷಿಸಲಾಗಿದೆಯೇ ಹೊರತು ಜನರ ಅಭಿವೃದ್ಧಿಯ ಹಿನ್ನೆಲೆಯಲ್ಲಲ್ಲ ಎಂದು ಟೀಕಿಸಿದೆ. ಈ ಬಜೆಟ್ ಬರೀ ಘೋಷಣೆಗಳಾಗಿ ಉಳಿಯಲಿವೆ. ಅವ್ಯಾವೂ ಕಾರ್ಯರೂಪಕ್ಕೆ ಬರಲು ಸಾಧ್ಯವಿಲ್ಲ ಎಂದು ಹೇಳಿದೆ.

ಬಜೆಟ್ ನಲ್ಲಿ ದೀದಿ ಏನೇನು ಘೋಷಣೆ ಮಾಡಿದ್ದಾರೆ?
*ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಜೈಹಿಂದ್ ಭವನ ನಿರ್ಮಾಣ
* ನೇತಾಜಿ ರಾಜ್ಯ ಯೋಜನಾ ಆಯೋಗದ ರಚನೆ
*ವರ್ಷಕ್ಕೆ ಎರಡು ಬಾರಿ ಜನರ ಮನೆ ಬಾಗಿಲಿಗೆ ಸರ್ಕಾರಿ ಸೇವೆ ಒದಗಿಸುವ ಶಿಬಿರಗಳು ನಡೆಯಲಿದ್ದು, ಆಗಸ್ಟ್ ಸೆಪ್ಟೆಂಬರ್ ಹಾಗೂ ಡಿಸೆಂಬರ್ ಜನವರಿಯಲ್ಲಿ ಈ ಶಿಬಿರ ನಡೆಯಲಿದೆ.
* ಯುವಶಕ್ತಿ ಯೋಜನೆಯಡಿ ಪ್ರತಿ ಮೂರು ವರ್ಷಗಳಿಗೊಮ್ಮೆ ಹತ್ತು ಸಾವಿರ ವಿದ್ಯಾರ್ಥಿಗಳನ್ನು ವಿವಿಧ ಸರ್ಕಾರಿ ಸಂಸ್ಥೆಗಳಿಗೆ ಸೇರಿಸಿ ಉತ್ತಮ ಉದ್ಯೋಗಾವಕಾಶಗಳಿಗೆ ಅವಕಾಶ ಕಲ್ಪಿಸಲಾಗುವುದು.
* ಪ್ಯಾರಾ ಶಿಕ್ಷಕರಿಗೆ ಪ್ರತಿ ವರ್ಷ ಶೇ.3ರಷ್ಟು ಹೆಚ್ಚು ಸಂಬಳ ನೀಡಲಾಗುತ್ತದೆ.
* ಜೇ ಜಹಾರ್, ತಾಪ್ಸಿಲ್ ಬಂಧು, ಮನಬಿಕ್ ಯೋಜನೆಯಡಿ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಹಾಗೂ 18 ವರ್ಷ ಮೇಲ್ಪಟ್ಟ ವಿಧವೆಯರಿಗೆ ಪಿಂಚಣಿ
* 46,000 ಕಿ.ಮೀ ಗ್ರಾಮೀಣ ರಸ್ತೆ ನಿರ್ಮಾಣ
* ನಂದಿಗ್ರಾಮ ಹಾಗೂ ಹಲ್ದಿಯಾ ಸಂಪರ್ಕಿಸಲು ನಂದಿಗ್ರಾಮದಲ್ಲಿ ಸೇತುವೆ ನಿರ್ಮಾಣ
* ಪಶ್ಚಿಮ ಬಂಗಾಳ ಹೆದ್ದಾರಿ ಹಾಗೂ ಸೇತುವೆ ನಿರ್ಮಾಣ
* ಬಾಲೂರ್ ಘಾಟ್ ಮಾಲ್ದಾ ಹಾಗೂ ಕೂಚ್ ಬೇಹರ್ ನಲ್ಲಿ ಮೇಲ್ಸೇತುವೆ ನಿರ್ಮಾಣ
* ಅಂದಲ್ ವಿಮಾನ ನಿಲ್ದಾಣವನ್ನು ಅಂತರರಾಷ್ಟ್ರೀಯ ದರ್ಜೆಗೆ ಏರಿಸುವುದು
* 2021-22ನೇ ಆರ್ಥಿಕ ವರ್ಷದಲ್ಲಿ 299,688 ಕೋಟಿ ಬಜೆಟ್ ಪ್ರಸ್ತಾವ












Click it and Unblock the Notifications