'ದೀದಿ' ಬಂಗಾಳವನ್ನು ಸರ್ವನಾಶ ಮಾಡುತ್ತಿದ್ದಾರೆ: ಮೋದಿ ಕಿಡಿ
ಬಂಕುರಾ(ಪಶ್ಚಿಮ ಬಂಗಾಳ), ಮೇ 09: "ಮಮತಾ ಬ್ಯಾನರ್ಜಿ ಅವರು ಪಶ್ಚಿ ಬಂಗಾಳವನ್ನು ಸರ್ವನಾಶ ಮಾಡುತ್ತಿದ್ದಾರೆ" ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.
ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಬಂಕುರಾ ಎಂಬಲ್ಲಿ ಸಮಾವೇಶವೊಂದರಲ್ಲಿ ಮಾತನಾಡುತ್ತಿದ್ದ ಮೋದಿ, "ಪಶ್ಚಿಮ ಬಂಗಾಳದಲ್ಲಿ ಫೋನಿ ಚಂಡಮಾರುತದಿಂದ ಆದ ಹಾನಿಯ ಬಗ್ಗೆ ಮಾಹಿತಿ ಪಡೆಯಲು ನಾನು ಫೋನ್ ಮಾಡಿದರೆ ಅದನ್ನು ಸ್ವೀಕರಿಸುವ ಸೌಜನ್ಯ ಮಮತಾ ಅವರಿಗಿಲ್ಲ. ಅವರಿಗೆ ಪಶ್ಚಿಮ ಬಂಗಾಳದ ಜನರ ಬಗ್ಗೆ ನಿಜಕ್ಕೂ ಕಾಳಜಿ ಇದ್ದಿದ್ದರೆ ನನ್ನ ಕರೆ ಸ್ವೀಕರಿಸಿ, ಕೇಂದ್ರದ ಸಹಾಯ ಕೇಳುತ್ತಿದ್ದರು" ಎಂದು ಮೋದಿ ಹೇಳಿದರು.
"ಫೋನಿ ಬಗ್ಗೆ ವಿಚಾರಿಸಲು ನಾನು ಅವರಿಗೆ ಎರಡು ಬಾರಿ ಫೋನ್ ಮಾಡಿದ್ದೆ. ಆದರೆ ನನ್ನನ್ನು ಪ್ರಧಾನಿ ಎಂದು ಒಪ್ಪದ ದೀದಿ ನಮ್ಮ ಕರೆಯನ್ನು ಸ್ವೀಕರಿಸಲಿಲ್ಲ. ಬಹುಶಃ ಅವರು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅನ್ನು ಪ್ರಧಾನಿ ಎಂದು ಒಪ್ಪಿಕೊಳ್ಳುತ್ತಾರೆ ಎನ್ನಿಸುತ್ತದೆ" ಎಂದು ಮೋದಿ ಟೀಕಿಸಿದರು.

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಎದ್ದಿದೆ. ಬಿಜೆಪಿಗೆ ಬೆಂಬಲ ದೊರಕಿದೆ ಎಂದು ಅವರು ಹೇಳಿದರು.
ಕಳೆದ ಹಲವು ದಿನಗಳಿಂದ ಮಮತಾ ಬ್ಯಾನರ್ಜಿ ಮತ್ತು ನರೇಂದ್ರ ಮೋದಿ ಅವರ ನಡುವಲ್ಲಿ ಮಾತಿನ ಚಕಮಕಿ ನಡೆಯುತ್ತಿದ್ದು, ನರೇಂದ್ರ ಮೋದಿ ಆವರಿಗೆ ಪ್ರಜಾಪ್ರಭುತ್ವದ ಕಪಾಳಮೋಕ್ಷ ನೀಡಬೇಕು ಎಂದು ಇತ್ತೀಚೆಗೆ ಮಮತಾ ಬ್ಯಾನರ್ಜಿ ಹೇಳಿದ್ದರು. ನನ್ನ ಕರೆಯನ್ನೂ ಸ್ವೀಕರಿಸದ ಮಮತಾ ಬ್ಯಾನರ್ಜಿಗೆ ದುರಹಂಕಾರ ಎಂದು ಮೋದಿ ಟಿಕಿಸಿದ್ದರು.
ಪಶ್ಚಿಮ ಬಂಗಾಳದ ಒಟ್ಟು 42 ಲೋಕಸಭಾ ಕ್ಷೇತ್ರಗಳಿಗೆ ಈಗಾಗಲೇ ಐದು ಹಂತದ ಮತದಾನ ನಡೆದಿದ್ದು, ಮೇ 12 ಮತ್ತು 19 ರಂದು ಇನ್ನುಳಿದ ಎರಡು ಹಂತಗಳಿಗೆ ಮತದಾನ ನಡೆಯಲಿದೆ. ಮೇ 23 ರಂದು ಫಲಿತಾಂಶ ಹೊರಬೀಳಲಿದೆ.












Click it and Unblock the Notifications