ನಾನು ಬಂಗಾಳದ ಹುಲಿ; ದೀದಿ ಹೇಳಿಕೆಗೆ ಬಿಜೆಪಿ ಟೀಕೆ
ಕೋಲ್ಕತ್ತಾ, ಫೆಬ್ರುವರಿ 11: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತಮ್ಮನ್ನು ತಾವು ಬಂಗಾಳದ ಹುಲಿ ಎಂದುಕೊಂಡಿದ್ದಾರೆ. ಆದರೆ ಅವರ ಪರಿಸ್ಥಿತಿ ಬೆಕ್ಕಿನಂತಾಗಿದೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ಟೀಕಿಸಿದ್ದಾರೆ.
"ಮಮತಾ ಬ್ಯಾನರ್ಜಿ ಹುಲಿಯಲ್ಲ. ಅವರ ಪರಿಸ್ಥಿತಿ ಬೆಕ್ಕಿನಂತಾಗಿದೆ. ಅವರಿಗೆ ಅವರ ಪಕ್ಷದ ಸದಸ್ಯರಾಗಲೀ, ಆಡಳಿತಾಧಿಕಾರಿಗಳಾಗಲೀ ಹೆದರಿಕೊಳ್ಳುತ್ತಿಲ್ಲ" ಎಂದು ಹೇಳಿದ್ದಾರೆ. ಮುಂದೆ ಓದಿ...

ತಮ್ಮನ್ನು ಬಂಗಾಳದ ಹುಲಿ ಎಂದು ಕರೆದುಕೊಂಡಿದ್ದ ಮಮತಾ ಬ್ಯಾನರ್ಜಿ
ಬುಧವಾರ ಪ್ರಚಾರ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಮಮತಾ ಬ್ಯಾನರ್ಜಿ ತಮ್ಮನ್ನು ಬಂಗಾಳದ ಹುಲಿ ಎಂದು ಕರೆದುಕೊಂಡಿದ್ದರು. ತಾವು ಯಾರಿಗೂ ಹೆದರುವುದಿಲ್ಲ ಎಂದು ಹೇಳಿಕೊಂಡಿದ್ದರು. ಈ ಹೇಳಿಕೆ ಬಗ್ಗೆ ದಿಲೀಪ್ ಘೋಷ್ ಮಮತಾ ಬ್ಯಾನರ್ಜಿಯನ್ನು ಬೆಕ್ಕಿಗೆ ಹೋಲಿಸಿದ್ದಾರೆ.

"ಮಮತಾ ಬ್ಯಾನರ್ಜಿಯದ್ದು ಸರ್ವಾಧಿಕಾರಿ ಮನಸ್ಥಿತಿ"
ಬಿಜೆಪಿಗೆ ಸಭೆಗಳನ್ನು ನಡೆಸಲು ರಾಜ್ಯದಲ್ಲಿ ಅನುಮತಿ ನೀಡಲಾಗುತ್ತಿಲ್ಲ ಎಂದು ದಿಲೀಪ್ ಘೋಷ್ ಆರೋಪಿಸಿದಾರೆ. "ಮಮತಾ ಬ್ಯಾನರ್ಜಿಯವರ ಸರ್ವಾಧಿಕಾರಿ ಮನಸ್ಥಿತಿ ಪ್ರಜಾಪ್ರಭುತ್ವಕ್ಕೆ ಹೊಂದುವುದಿಲ್ಲ. ವಿರೋಧ ಪಕ್ಷಗಳಿಗೆ ಸಭೆ ಹಾಗೂ ಯಾತ್ರೆಗಳನ್ನು ಹಮ್ಮಿಕೊಳ್ಳಲು ಅವರು ಅನುಮತಿ ನೀಡುತ್ತಿಲ್ಲ. ಪ್ರಧಾನಿ ವಿರುದ್ಧವೇ ಮಮತಾ ಬ್ಯಾನರ್ಜಿ ಆಕ್ಷೇಪಾರ್ಹ ಪದಗಳನ್ನು ಬಳಸುತ್ತಾರೆ ಎಂದು ಆರೋಪಿಸಿದ್ದಾರೆ.

"ಕೋಮುಗಲಭೆಗಳಿಗೆ ರಕ್ಷಣೆ ನೀಡಲಾಗುತ್ತಿದೆ"
ಪಶ್ಚಿಮ ಬಂಗಾಳದಲ್ಲಿ ಕಾನೂನು ಪರಿಸ್ಥಿತಿ ಕುರಿತು ಆಕ್ಷೇಪ ಮಾಡಿದ್ದು, "ಮಮತಾ ಬ್ಯಾನರ್ಜಿ ಆಳ್ವಿಕೆಯಲ್ಲಿ ಸಾಕಷ್ಟು ಗಲಭೆಗಳು ನಡೆದಿವೆ. ಇಂಥ ಘಟನೆಗಳಿಗೆ ಇಲ್ಲಿ ರಕ್ಷಣೆ ನೀಡಲಾಗುತ್ತಿದೆ. ಆದ್ದರಿಂದಲೇ ಕೋಮುಗಲಭೆಗಳು ಹೆಚ್ಚಾಗಿವೆ" ಎಂದಿದ್ದಾರೆ ಘೋಷ್.

ಬಿರುಸಾಗಿರುವ ಪ್ರಚಾರ ಕಾರ್ಯ
ಮುಂಬರುವ ವಿಧಾನಸಭಾ ಚುನಾವಣೆಗೆ ಪಶ್ಚಿಮ ಬಂಗಾಳ ಸಜ್ಜಾಗುತ್ತಿದೆ. ಇದೇ ಏಪ್ರಿಲ್-ಮೇ ತಿಂಗಳಿನಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದ್ದು, ಬಿಜೆಪಿ, ತೃಣಮೂಲ ಕಾಂಗ್ರೆಸ್ ಪ್ರಚಾರ ಕಾರ್ಯ ಬಿರುಸಾಗಿದೆ. 294 ಸೀಟುಗಳಿಗೆ ಚುನಾವಣೆ ನಡೆಯಲಿದೆ.












Click it and Unblock the Notifications