ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತರಿಂದ ಗೂಂಡಾಗಿರಿ
ಕೋಲ್ಕತಾ, ಮೇ 19 : "ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಹತ್ಯಾಕಾಂಡ ನಡೆಸುವ ಸಾಧ್ಯತೆಯಿದೆ. ಆದ್ದರಿಂದ ಚುನಾವಣಾ ನೀತಿ ಸಂಹಿತೆ ಜಾರಿ ಇರುವವರೆಗೆ ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಭದ್ರತಾ ಪಡೆಗಳನ್ನು ನಿಯೋಜಿಸಬೇಕು" ಎಂದು ಭಾರತೀಯ ಜನತಾ ಪಕ್ಷ ಆಗ್ರಹಿಸಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಬೂತ್ ಏಜೆಂಟರ ಜೊತೆ ಬಿಜೆಪಿ ಕಾರ್ಯಕರ್ತರು ಕುಳಿತುಕೊಂಡರೆ ಅವರ ಹತ್ಯೆ ಮಾಡಲಾಗುವುದು ಎಂದು ಟಿಎಂಸಿ ಕಾರ್ಯಕರ್ತರು ಬೆದರಿಸುತ್ತಿರುವುದಾಗಿ ಬಿಜೆಪಿಯ ಟಿಕೆ ಬೋಸ್ ಆರೋಪಿಸಿದ್ದಾರೆ. ಟಿಎಂಸಿ ಕಾರ್ಯಕರ್ತರು ಮತ್ತು ಭಯೋತ್ಪಾದಕರ ನಡುವಿನ ವ್ಯತ್ಯಾಸವಾದರೂ ಏನು ಎಂದು ಅವರು ಆರೋಪಿಸಿದ್ದಾರೆ.
ಏಳನೇ ಹಂತದ ಕಡೆಯ ದಿನವಾದ ಮೇ 19, ಭಾನುವಾರದಂದು ಪಶ್ಚಿಮ ಬಂಗಾಳದ ಹಲವೆಡೆಗಳಲ್ಲಿ ಹಿಂಸಾಚಾರ ನಡೆದ ಘಟನೆಗಳು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಬಿಜೆಪಿ ನಾಯಕರಾದ ಜೈ ಪ್ರಕಾಶ್ ಮಜುಂದಾರ್ ಮತ್ತು ಶಿಶಿರ್ ಬಜೋರಿಯಾ ಅವರು ಚುನಾವಣಾ ಆಯುಕ್ತರನ್ನು ಭೇಟಿ ಮಾಡಲಿದ್ದಾರೆ.

ಡೈಮಂಡ್ ಹಾರ್ಬರ್ ನಲ್ಲಿ ತಮ್ಮ ಹಿರಿಯ ನ್ಯೂಸ್ ಎಡಿಟರ್ ಶವನ್ ಸೇನ್ ಮೇಲೆ ತೃಣಮೂಲ ಕಾಂಗ್ರೆಸ್ ನ ಗೂಂಡಾಗಳು ಹಲ್ಲೆ ಮಾಡಿದ್ದಾರೆ ಎಂದು ರಿಪಬ್ಲಿಕ್ ಟಿವಿ ಆರೋಪಿಸಿದೆ. ಸೇನ್ ಕಣ್ಣಿಗೆ ತೀವ್ರವಾದ ಗಾಯವಾಗಿದ್ದು, ಕಣ್ಣಿನ ಕೆಳಭಾಗದಲ್ಲಿ ರಕ್ತ ಒಸರುತ್ತಿದೆ ಮತ್ತು ಊದಿಕೊಂಡಿದೆ. ಅಲ್ಲಿ ಬಿಜೆಪಿ ಅಭ್ಯರ್ಥಿ ನೀಲಂಜನ್ ರಾಯ್ ಅವರ ಕಾರನ್ನು ಕಿಡಿಗೇಡಿಗಳು ಪುಡಿಗಟ್ಟಿದ್ದಾರೆ.
ಇಷ್ಟು ಮಾತ್ರವಲ್ಲದೆ ಎರಡು ಬೂತ್ ಗಳನ್ನು ತೃಣಮೂಲ ಕಾಂಗ್ರೆಸ್ ನ ಕಾರ್ಯಕರ್ತರು ಮುಚ್ಚಿದ್ದಲ್ಲದೆ, ಕೆಲವೆಡೆ ಹಿಂದೂಗಳು ಮತ ಹಾಕದಂತೆ ತಡೆಯೊಡ್ಡುತ್ತಿದ್ದಾರೆ ಮತ್ತು ಬೆದರಿಕೆ ಹಾಕುತ್ತಿದ್ದಾರೆ ಎಂದೂ ದೂರಲಾಗಿದೆ. ಮತ್ತೊಂದೆಡೆ ಭದ್ರತಾ ಸಿಬ್ಬಂದಿಯ ಜೊತೆ ಟಿಎಂಸಿ ನಾಯಕಿಯ ಮಾತಿನ ಚಕಮಕಿ ನಡೆದಿದೆ.
ಬಸಿರ್ಹತ್ ನ 189ನೇ ಬೂತ್ ಬಳಿ ಮತದಾರರು ಪ್ರತಿಭಟನೆ ನಡೆಸಿದ್ದು, ತಮಗೆ ಮತದಾನ ಮಾಡಲು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಬಿಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಸುಮಾರು ನೂರು ಮತದಾರರು ಮತ ಚಲಾವಣೆ ಮಾಡದಂತೆ ತಡೆಹಿಡಿಯಲಾಗಿದೆ ಎಂದು ಅಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಸಯಂತನ್ ಬಸು ಅವರು ದೂರಿದ್ದಾರೆ.












Click it and Unblock the Notifications