ಪ. ಬಂಗಾಳ ಹಿಂಸಾಚಾರ: ಬಿಜೆಪಿ-ಟಿಎಂಸಿಯಲ್ಲಿ ಹೊಣೆಗಾರರು ಯಾರು?
ಕೋಲ್ಕತಾ, ಮೇ 15: ಪಶ್ಚಿಮ ಬಂಗಾಳದಲ್ಲಿ ಮಂಗಳವಾರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅಮಿತ್ ಶಾ ಅವರ ಚುನಾವಣಾ ಪ್ರಚಾರದ ವೇಳೆ ನಡೆದ ಹಿಂಸಾಚಾರ ತೀವ್ರ ವಾಕ್ಸಮರಕ್ಕೆ ಎಡೆಮಾಡಿಕೊಟ್ಟಿದೆ.
ರೋಡ್ ಶೋ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಅವರ ಕುಮ್ಮಕ್ಕಿನಿಂದ ದಾಳಿ ನಡೆಸಲಾಗಿದೆ. ಟಿಎಂಸಿ ಕಾರ್ಯಕರ್ತರು 19ನೇ ಶತಮಾನದ ಸಮಾಜ ಸುಧಾರಕ ಈಶ್ವರಚಂದ್ರ ವಿದ್ಯಾಸಾಗರ ಅವರ ಪ್ರತಿಮೆಯನ್ನು ಪುಡಿಮಾಡಿದ್ದಾರೆ. ಬಳಿಕ ಬಿಜೆಪಿಯ ವರ್ಚಸ್ಸಿಗೆ ಹಾನಿ ಮಾಡಲು ಪಕ್ಷದ ತಲೆಗೆ ಕಟ್ಟಲು ಪ್ರಯತ್ನಿಸುತ್ತಿದ್ದಾರೆ ಎಂದು ಅಮಿತ್ ಶಾ ಆರೋಪಿಸಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಪ್ರತಿಮೆ ಧ್ವಂಸ ಪ್ರಕರಣದಲ್ಲಿ ಎರಡೂ ಪಕ್ಷಗಳ ನಡುವೆ ಪರಸ್ಪರ ಆರೋಪ-ಪ್ರತ್ಯಾರೋಪ ಕೇಳಿಬರುತ್ತಿವೆ. ಈ ಸಂಬಂಧ ಮುಖ್ಯ ಚುನಾವಣಾ ಆಯೋಗಕ್ಕೆ ದೂರು ನೀಡಲು ನಿರ್ಧರಿಸಿರುವ ಬಿಜೆಪಿ, ಪ್ರತಿಭಟನೆಗೂ ಮುಂದಾಗಿದೆ. ಪ್ರತಿಮೆ ಹಾನಿಯಾಗಿರುವ ಚಿತ್ರವನ್ನು ಟಿಎಂಸಿ ಕಾರ್ಯಕರ್ತರು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದು, ಇದು ಅತ್ಯಂತ ಅವಮಾನಕಾರಿ ಘಟನೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಇದು ಹಿಂಸಾಚಾರವಲ್ಲ. ಇದು ಒಂದು ದಾಳಿ. ರಾಷ್ಟ್ರಪತಿಯ ಆಳ್ವಿಕೆಯ ಅಗತ್ಯವಿಲ್ಲ. ಅವರ ಆಡಳಿತವನ್ನು ಜನರೇ ಅಂತ್ಯಗೊಳಿಸುತ್ತಾರೆ. ದೇಶದೆಲ್ಲೆಡೆ ನಾವು ರೋಡ್ ಶೋಗಳನ್ನು ನಡೆಸುತ್ತಿದ್ದೇವೆ. ಆದರೆ, ಪಶ್ಚಿಮ ಬಂಗಾಳದಲ್ಲಿ ಮಾತ್ರ ಹಿಂಸಾಚಾರ ನಡೆದಿದೆ. ಏಕೆ? ಏಕೆಂದರೆ ಟಿಎಂಸಿ ಕಾರಣದಿಂದ. ಪ್ರಜಾಪ್ರಭುತ್ವವನ್ನು ಅಲುಗಾಡಿಸಲು ಟಿಎಂಸಿ ಸಂಘರ್ಷಗಳ ಪ್ರಯತ್ನ ನಡೆಸುತ್ತಿದೆ ಎಂದು ಅಮಿತ್ ಶಾ ಆರೋಪಿಸಿದ್ದಾರೆ.
'ಸೇವ್ ರಿಪಬ್ಲಿಕ್' ಸಮಾವೇಶದಲ್ಲಿ ಕೋಲ್ಕತಾ ಹಿಂದೆಂದೂ ನೋಡದಂತೆ ಕೇಸರಿಮಯವಾಗಿತ್ತು. ಎಲ್ಲೆಡೆ ಕೇಸರಿ ಬಲೂನುಗಳು ಹಾರಾಡುತ್ತಿದ್ದವು. ಶ್ರೀರಾಮ ಮತ್ತು ಹನುಮನ ವೇಷಧಾರಿಗಳು ಜೈ ಶ್ರೀರಾಮ್ ಮಂತ್ರ ಪಠಿಸುತ್ತಾ ನರ್ತಿಸುತ್ತಿದ್ದರು. 10 ಸಾವಿರ ಕೆ.ಜಿ. ಚಂಡುಮಲ್ಲಿಗೆ ಹೂವನ್ನು ಬಳಸಲಾಗಿತ್ತು.
ಸಾರ್ವತ್ರಿಕ ಚುನಾವಣೆಯ ಕೊನೆಯ ಹಂತದ ಉಳಿದ ದಿನಗಳಲ್ಲಿ ಪ್ರಚಾರ ಮಾಡದಂತೆ ಮಮತಾ ಬ್ಯಾನರ್ಜಿ ಅವರ ಮೇಲೆ ನಿಷೇಧ ಹೇರುವಂತೆ ಬಿಜೆಪಿ ಚುನಾವಣಾ ಆಯೋಗಕ್ಕೆ ಒತ್ತಾಯಿಸಿದೆ. ಮೇ 19ರಂದು ಒಂಬತ್ತು ಸ್ಥಾನಗಳಿಗೆ ಇಲ್ಲಿ ಚುನಾವಣೆ ನಡೆಯಲಿದೆ.

ಅದೇ ಮಾರ್ಗದಲ್ಲಿ ದೀದಿ ಪ್ರಚಾರ
ಅಮಿತ್ ಶಾ ಅವರು ಮಂಗಳವಾರ ನಡೆಸಿದ ರೋಡ್ ಶೋ ಮಾರ್ಗದಲ್ಲಿಯೇ ಮಮತಾ ಬ್ಯಾನರ್ಜಿ ಕೂಡ ಪ್ರಚಾರ ನಡೆಸಲಿದ್ದಾರೆ. ಕಲ್ಕತ್ತಾ ವಿಶ್ವವಿದ್ಯಾಲಯ, ವಿದ್ಯಾಸಾಗರ ಕಾಲೇಜು ದಾಟಿ ಸಾಗಲಿದ್ದಾರೆ.
ಮಂಗಳವಾರ ಸಂಜೆ ಕಲ್ಕತ್ತಾ ವಿವಿ ಬಳಿ ಹಿಂಸಾಚಾರ ಆರಂಭವಾಗಿತ್ತು. ವಿವಿ ಕ್ಯಾಂಪಸ್ನಲ್ಲಿದ್ದ ಕೆಲವು ವಿದ್ಯಾರ್ಥಿಗಳು ಬಿಜೆಪಿ ವಿರೋಧಿ ಘೋಷಣೆಗಳನ್ನು ಕೂಗಿದರು. ಅವರ ಮೇಲೆ ಬಿಜೆಪಿ ಕಾರ್ಯಕರ್ತರು ರಾಡ್ನಿಂದ ಹೊಡೆಯಲು ಮುಂದಾದರು. ಪೊಲೀಸರು ಘರ್ಷಣೆಯನ್ನು ತಪ್ಪಿಸಿದರು ಎಂದು ದೂರಲಾಗಿದೆ.
|
ಕಾಲೇಜು ಆವರಣದೊಳಗೆ ನುಗ್ಗಿ ದಾಂದಲೆ
ವಿದ್ಯಾಸಾಗರ್ ಕಾಲೇಜಿನ ಮುಂಭಾಗದಲ್ಲಿ ಅಮಿತ್ ಶಾ ವಾಹನ ಸಾಗುವಾಗ 'ಗೋ ಬ್ಯಾಕ್ ಅಮಿತ್ ಶಾ' ಎಂಬ ಪೋಸ್ಟರ್ಗಳನ್ನು ಹಿಡಿದಿದ್ದ ವಿದ್ಯಾರ್ಥಿಗಳ ಮೇಲೆ ಬಿಜೆಪಿ ಬೆಂಬಲಿಗರು ಹಲ್ಲೆ ನಡೆಸಿದರು ಎನ್ನಲಾಗಿದೆ. ಕ್ಯಾಂಪಸ್ ಒಳಗೆ ನುಗ್ಗಿದ ಗುಂಪು ಅದರೊಳಗಿದ್ದ ಮೋಟಾರ್ ಸೈಕಲ್ಗಳಿಗೆ ಬೆಂಕಿ ಹಚ್ಚಿದರು. ಈಶ್ವರ್ ಚಂದ್ರ ವಿದ್ಯಾಸಾಗರ್ ಪ್ರತಿಮೆಗೆ ಹಾನಿ ಮಾಡಿದರು ಎಂದು ಆರೋಪಿಸಲಾಗಿದೆ.
|
ಬಂಗಾಳದ ಇತಿಹಾಸ ಬಗ್ಗೆ ನಿಮಗೇನು ಗೊತ್ತು?
ಹತಾಶೆಗೊಳಗಾದ ಬಿಜೆಪಿ ಗೂಂಡಾಗಳು ಪಶ್ಚಿಮ ಬಂಗಾಳದ ಹೊರಗಿನಿಂದ ಬಂದು ಕಾಲೇಜಿನಲ್ಲಿದ್ದ ಪ್ರತಿಮೆಯನ್ನು ಧ್ವಂಸ ಮಾಡಿದ್ದಾರೆ. ಬಂಗಾಳದ ಬಗ್ಗೆ, ಅದರ ಶ್ರೀಮಂತ ಇತಿಹಾಸ, ಸಂಸ್ಕೃತಿ ಬಗ್ಗೆ ನಿಮಗೆ ಏನು ತಿಳಿದಿದೆ? ಇಂದು ಮಾಡಿದ್ದನ್ನು ಬಂಗಾಳ ಎಂದಿಗೂ ಕ್ಷಮಿಸುವುದಿಲ್ಲ ಎಂದು ಟಿಎಂಸಿ ಹಿರಿಯ ಮುಖಂಡ ಡೆರೆಕ್ ಓಬ್ರಿಯಾನ್ ಟ್ವೀಟ್ ಮಾಡಿದ್ದಾರೆ.
|
ಚುನಾವಣೆ ಪ್ರಭಾವಿಸಲು ಹಿಂಸಾಚಾರ
ಟಿಎಂಸಿ ಹಿಂಸಾಚಾರವನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿರುವ ಅಮಿತ್ ಶಾ, ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ 60 ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿತ್ತು. ಚುನಾವಣೆ ಮೇಲೆ ಪ್ರಭಾವ ಬೀರುವುದಕ್ಕಾಗಿಯೇ ಮಂಗಳವಾರದ ಹಿಂಸಾಚಾರ ನಡೆಸಲಾಗಿದೆ. ರೋಡ್ಶೋದಲ್ಲಿ ನೆರೆದಿದ್ದ ಜನರ ಗುಂಪು ನೋಡಿ ಮಮತಾ ದೀದಿ ಅವರ ಗೂಂಡಾಗಳು ಕಂಗಾಲಾಗಿದ್ದರು. ಅಲ್ಲಿ ಕಾಲ್ತುಳಿತ ಸೃಷ್ಟಿಸಲು ಪ್ರಯತ್ನಿಸಿದರು. ಟಿಎಂಸಿಯನ್ನು ಬಂಗಾಳದಿಂದ ಹೊರಹಾಕುವಂತೆ ಜನರಿಗೆ ಮನವಿ ಮಾಡುತ್ತೇನೆ ಎಂದರು.
|
ಅಮಿತ್ ಶಾ ಏನು ದೇವರೇ?
ಅಮಿತ್ ಶಾ ತಮ್ಮನ್ನು ಏನೆಂದುಕೊಂಡಿದ್ದಾರೆ? ಅವರು ಎಲ್ಲದಕ್ಕಿಂತಲೂ ಮೇಲಿನವರೇ? ತಮ್ಮ ವಿರುದ್ಧ ಪ್ರತಿಭಟನೆ ಮಾಡಬಾರದು ಎನ್ನುವುದಕ್ಕೆ ಅವರೇನು ದೇವರೇ? ಅವರ ಗೂಂಡಾಗಳು ರಾಡ್ಗಳನ್ನು ಬಳಸಿ ಬೆಂಕಿ ಹಚ್ಚಿದರು. ಪ್ರತಿಮೆ ಹಾಳುಮಾಡಿದರು. ಇದು ಅತ್ಯಂತ ದೊಡ್ಡ ನಾಚಿಕೆಗೇಡಿನ ಕೃತ್ಯ. ಹಿಂದೆಂದೂ ಕೋಲ್ಕತಾದಲ್ಲಿ ಹೀಗೆ ಆಗಿರಲಿಲ್ಲ. ಅವರನ್ನು ಸುಮ್ಮನೆ ಬಿಡುವುದಿಲ್ಲ. ಇಂಚಿಂಚೂ ಪ್ರತಿಕ್ರಿಯೆ ನೀಡುತ್ತೇನೆ ಎಂದು ಮಮತಾ ಬ್ಯಾನರ್ಜಿ ಕಿಡಿಕಾರಿದರು.












Click it and Unblock the Notifications