ಬೆಡ್ ಟೀ ಕೊಟ್ಟಿದ್ದು ತಡವಾಯ್ತು, ಗಲಾಟೆಯಾಗಿದ್ದೇ ಗೊತ್ತಿಲ್ಲ ಎಂದ ಟಿಎಂಸಿ ಅಭ್ಯರ್ಥಿ!
ಅಸನ್ಸೋಲ್, ಏಪ್ರಿಲ್ 29: ದೇಶದಾದ್ಯಂತ ನಾಲ್ಕನೆಯ ಹಂತದ ಚುನಾವಣೆ ನಡೆಯುತ್ತಿದೆ. ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರವಿರುವ ರಾಜ್ಯದಲ್ಲಿ ಸಂಘರ್ಷಗಳು ನಡೆಯುತ್ತಿರುವುದು ವರದಿಯಾಗಿದೆ. ಆದರೆ, ರಾಜ್ಯದಲ್ಲಿ ಮಾತ್ರವಲ್ಲ ತಮ್ಮದೇ ಕ್ಷೇತ್ರದಲ್ಲಿ ಸಂಘರ್ಷ, ಗಲಾಟೆಗಳು ನಡೆದಿರುವುದು ಮಮತಾ ಅವರ ಪಕ್ಷದವರೇ ಆದ ಅಭ್ಯರ್ಥಿಯೊಬ್ಬರಿಗೆ ಗೊತ್ತೇ ಇರಲಿಲ್ಲವಂತೆ. ಅಭ್ಯರ್ಥಿಯಾಗಿ, ವಾಹಿನಿಗಳಲ್ಲಿ ಸುದ್ದಿ ಪ್ರಸಾರವಾಗಿದ್ದರೂ ತಮ್ಮ ಕ್ಷೇತ್ರದಲ್ಲಿ ಸಂಘರ್ಷ ನಡೆದಿರುವುದು ಗೊತ್ತಿಲ್ಲ ಅಂದರೆ ಹೇಗೆ?
'ಅವರು ನನಗೆ ಬೆಡ್ ಟೀ ಕೊಟ್ಟಿದ್ದು ತಡವಾಗಿ. ಹೀಗಾಗಿ ನಾನು ಏಳುವುದು ತಡವಾಗಿತ್ತು. ಹೀಗಿರುವಾಗ ನಾನೇನು ಹೇಳಲಿ? ನಿಜಕ್ಕೂ ನನಗೇನೂ ಗೊತ್ತಿಲ್ಲ' ಎಂದು ತೃಣಮೂಲ ಕಾಂಗ್ರೆಸ್ನ ಅಸನ್ಸೋಲ್ ಕ್ಷೇತ್ರದ ಅಭ್ಯರ್ಥಿ ಮೂನ್ ಮೂನ್ ಸೇನ್ ಹೇಳಿದ್ದಾರೆ. ಮೂನ್ ಮೂನ್ ಸೇನ್ ಬಂಗಾಳದ ನಟಿಯಾಗಿ ಪ್ರಸಿದ್ಧರಾಗಿದ್ದವರು.
ಸೋಮವಾರ ಬೆಳಿಗ್ಗೆ ಮತದಾನ ಆರಂಭವಾಗುತ್ತಿದ್ದಂತೆಯೇ ಪಶ್ಚಿಮ ಬಂಗಾಳದ ಅನೇಕ ಮತಗಟ್ಟೆಗಳಲ್ಲಿ ಘರ್ಷಣೆಗಳು ನಡೆದಿವೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪಕ್ಷದ ಬೆಂಬಲಿಗರು ಮತ್ತು ಬಿಜೆಪಿ ಬೆಂಬಲಿಗರ ನಡುವೆ ಹೊಡೆದಾಟಗಳಾಗಿವೆ.
ಅಸನ್ಸೋಲ್ ಕ್ಷೇತ್ರದಲ್ಲಿ ಮೂನ್ ಮೂನ್ ಸೇನ್ ವಿರುದ್ಧ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಬಾಬುಲ್ ಸುಪ್ರಿಯೋ ಅವರ ಕಾರಿನ ಗಾಜನ್ನು ಒಡೆದು ಹಾಕಲಾಗಿದೆ. ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಮತಗಟ್ಟೆಗಳನ್ನು ಆಕ್ರಮಿಸಿಕೊಂಡಿದ್ದಾರೆ. ಜನರಿಗೆ ಮತ ಹಾಕಲು ಬಿಡುತ್ತಿಲ್ಲ ಎಂದು ಸುಪ್ರಿಯೋ ಆರೋಪಿಸಿದ್ದಾರೆ. ಸುಪ್ರಿಯೋ ಅವರು ಮತಗಟ್ಟೆಗಳಲ್ಲಿ ತಮ್ಮ ಕಾರಲ್ಲಿ ತೆರಳಿ ಅಲ್ಲಿನ ಪರಿಸ್ಥಿತಿಯ ಬಗ್ಗೆ ವಿವರಿಸುತ್ತಿದ್ದರು. ಈ ಸಂದರ್ಭದಲ್ಲಿ ಅವರ ಕಾರಿನ ಗಾಜುಗಳನ್ನು ಪುಡಿ ಮಾಡಲಾಗಿದೆ.

ಬೆಡ್ ಟೀ ಕೊಟ್ಟಿದ್ದೇ ತಡವಾಗಿ
ನಿಮ್ಮದೇ ಕ್ಷೇತ್ರದಲ್ಲಿ ಇಷ್ಟೆಲ್ಲಾ ಗಲಾಟೆಗಳಾಗಿವೆಯಲ್ಲ? ಎಂದು ಸುದ್ದಿಗಾರರು ಪ್ರಶ್ನಿಸಿದಾಗ ಮೂನ್ ಮೂನ್ ಸೇನ್ ಅವರು ತಮಗೇನೂ ಗೊತ್ತೇ ಇಲ್ಲ ಎಂದು ಹೇಳಿದ್ದಾರೆ. 'ತಡವಾಗಿ ಎದ್ದಿದ್ದರಿಂದ ಏನೂ ಗೊತ್ತಾಗಿಲ್ಲ. 'ಅವರು (ಮನೆಗೆಲಸದವರು) ನನಗೆ ಬೆಡ್ ಟೀ ಕೊಡುವುದು ತಡಮಾಡಿದರು. ಹೀಗಾಗಿ ನಾನು ತಡವಾಗಿ ಎದ್ದೆ. ನಾನು ಏನನ್ನು ಹೇಳುವುದು? ನನಗೆ ನಿಜಕ್ಕೂ ಗೊತ್ತಿಲ್ಲ' ಎಂದು ಹೇಳಿದರು.
|
ಬಾಬುಲ್ ಹೆಸರು ಹೇಳಬೇಡಿ
ಟಿಎಂಸಿ ಕಾರ್ಯಕರ್ತರು ಮತಗಟ್ಟೆಗಳಲ್ಲಿ ದಾಂದಲೆ ಎಬ್ಬಿಸುತ್ತಿದ್ದಾರೆ. ಜನರ ಮೇಲೆ ಹಲ್ಲೆ ಮಾಡುತ್ತಿದ್ದಾರೆ ಎಂಬ ಬಾಬುಲ್ ಸುಪ್ರಿಯೋ ಆರೋಪ ಮಾಡಿದ್ದಾರಲ್ಲ? ಎಂಬ ಪ್ರಶ್ನೆಗೆ, 'ದಯವಿಟ್ಟು ಅವರ ಹೆಸರು ಹೇಳಬೇಡಿ. ನಾನು ಮುಂದೆ ಮಾತನಾಡುವುದೇ ಇಲ್ಲ' ಎಂದು ಮೂನ್ ಮೂನ್ ಸೇನ್ ಕೋಪದಿಂದ ಪ್ರತಿಕ್ರಿಯಿಸಿದರು.
|
ಬಂಗಾಳದಲ್ಲಿ ಮಾತ್ರ ಅಲ್ಲ!
ಚುನಾವಣೆ ಸಂದರ್ಭದಲ್ಲಿ ಪಶ್ಚಿಮ ಬಂಗಾಳದಲ್ಲಿ ಇಂತಹ ಹಿಂಸಾಚಾರ ಮಾಮೂಲಿ ಎನ್ನುವಂತೆ ಆಗಿದೆಯಲ್ಲ ಎಂದು ಪತ್ರಕರ್ತರು ಪ್ರಶ್ನಿಸಿದರು. ಆಗ ಮೂನ್ ಮೂನ್ ಸೇನ್, 'ನೀವು ಕಮ್ಯುನಿಸ್ಟರು ಅಧಿಕಾರದಲ್ಲಿ ಇದ್ದಾಗ ತೀರಾ ಚಿಕ್ಕವರಾಗಿದ್ದಿರಿ. ಇದು ಭಾರತದ ಎಲ್ಲ ಕಡೆಯೂ ನಡೆಯುತ್ತಿದೆ. ಬಂಗಾಳದಲ್ಲಿ ಮಾತ್ರ ಅಲ್ಲ' ಎಂದರು.

ಈಗಾಗಲೇ ಗೆದ್ದಾಗಿದೆ
ತೃಣಮೂಲ ಕಾಂಗ್ರೆಸ್ ಈಗಾಗಲೇ ಈ ಸೀಟನ್ನು ಗೆದ್ದಾಗಿದೆ. ಮುಂದೆ ಏನಾಗುತ್ತದೆಯೋ ನೋಡೋಣ ಎಂದು ತಮ್ಮ ಗೆಲುವಿನ ಬಗ್ಗೆ ಮೂನ್ ಮೂನ್ ಸೇನ್ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ವರ್ಷ ರಾಮನವಮಿ ಮೆರವಣಿಗೆ ಸಂದರ್ಭದಲ್ಲಿ ಅಸನ್ಸೋಲ್ನಲ್ಲಿ ನಡೆದ ಗಲಭೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. 'ಗಲಭೆ ನಡೆದ ಸಂದರ್ಭದಲ್ಲಿ ನಾನು ಅಲ್ಲಿ ಇರಲಿಲ್ಲ. ನಾನು ಎಷ್ಟು ಸಭೆಗಳನ್ನು ನಡೆಸಿದ್ದೇನೆ ಎಂದು ನಿಮಗೆ ತಿಳಿದಿಲ್ಲ. ನಾನು ಎಷ್ಟು ಬ್ಯುಸಿ ಇದ್ದೆ ಎಂಬುದು ನಿಮಗೆ ಗೊತ್ತಿಲ್ಲ' ಎಂದರು. ಮತ್ತೆ ಬಾಬುಲ್ ಸುಪ್ರಿಯೋ ಅವರ ಕುರಿತು ಪ್ರಶ್ನೆ ಮುಂದಿಟ್ಟಾಗ ಕೋಪಗೊಂಡ ಅವರು, 'ನಾನು ಅವರ ಹೆಸರನ್ನು ಕೇಳಲು ಬಯಸುವುದಿಲ್ಲ. ಸಾಕು' ಎಂದು ಕಿಡಿಕಾರಿ ಅಲ್ಲಿಂದ ತೆರಳಿದರು.

ಬಹುಭಾಷಾ ತಾರೆಕನ್ನಡದಲ್ಲಿಯೂ ನಟನೆ
ಮೂನ್ ಮೂನ್ ಸೇನ್ ಪಶ್ಚಿಮ ಬಂಗಾಳದಲ್ಲಿ ಜನಿಸಿದವರಾದರೂ ಭಾರತದ ಬಹುತೇಕ ಸಿನಿಮಾ ಪ್ರಿಯರಿಗೆ ಪರಿಚಿತವಾದ ಹೆಸರು. ಬಂಗಾಳಿ ಸಿನಿಮಾಗಳಿಗಿಂತಲೂ ಹಿಂದಿ ಸಿನಿಮಾಗಳಲ್ಲಿಯೇ ಅವರು ಹೆಚ್ಚು ನಟಿಸಿರುವುದು. ಜತೆಗೆ, ಮಲಯಾಳಂ, ಕನ್ನಡ, ತೆಲುಗು, ತಮಿಳು ಮತ್ತು ಇಂಗ್ಲಿಷ್ ಭಾಷೆಯ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಡಿ. ರಾಜೇಂದ್ರ ಬಾಬು ನಿರ್ದೇಶನದ ರವಿಚಂದ್ರನ್ ಮತ್ತು ಖುಷ್ಬೂ ನಟನೆಯ 'ಯುಗಪುರುಷ' ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಮೂನ್ ಮೂನ್ ಸೇನ್ ನಟಿಸಿದ್ದರು. ಕಟ್ಟೆ ರಾಮಚಂದ್ರ ಅವರ ನಿರ್ದೇಶನದ 'ವೈಶಾಖದ ದಿನಗಳು' ಚಿತ್ರದಲ್ಲಿ ವಿಷ್ಣುವರ್ಧನ್ ಅವರೊಂದಿಗೆ ನಟಿಸಿದ್ದರು. ಅನಂತ್ ನಾಗ್ ಮತ್ತು ಮಾಲಾಶ್ರೀ ನಟಿಸಿದ್ದ, ಪಿ. ವಾಸು ನಿರ್ದೇಶನದ 'ಮಾಂಗಲ್ಯ ಬಂಧನ' ಚಿತ್ರದಲ್ಲಿ ಕೂಡ ಅವರು ಬಣ್ಣ ಹಚ್ಚಿದ್ದರು.












Click it and Unblock the Notifications