ಆಘಾತಕಾರಿ ಸೋಲು: ರಾಜೀನಾಮೆಗೆ ಮಮತಾ ಬ್ಯಾನರ್ಜಿ ನಿರ್ಧಾರ
ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ನ ಹೀನಾಯ ಹಿನ್ನಡೆಯಿಂದ ಆಘಾತಗೊಂಡಿರುವ ಮಮತಾ ಬ್ಯಾನರ್ಜಿ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಪಕ್ಷದ ಅಧ್ಯಕ್ಷೆಯಾಗಿ ಮಾತ್ರ ಮುಂದುವರಿಯುವ ಬಯಕೆ ವ್ಯಕ್ತಪಡಿಸಿದ್ದರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಪಡೆಗಳು ರಾಜ್ಯದಲ್ಲಿ ಟಿಎಂಸಿ ವಿರುದ್ಧವಾಗಿ ಕೆಲಸ ಮಾಡಿವೆ ಎಂದು ಆರೋಪಿಸಿದರು. 'ಪಕ್ಷದ ಸಭೆಯ ಆರಂಭದಲ್ಲಿಯೇ ಹೇಳಿದ್ದೇನೆ. ನಾನು ಮುಖ್ಯಮಂತ್ರಿಯಾಗಿ ಮುಂದುವರಿಯಲು ಬಯಸುವುದಿಲ್ಲ' ಎಂದು ತಿಳಿಸಿದರು.
ಇದಕ್ಕೂ ಮೊದಲು ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಐದು ತಿಂಗಳಲ್ಲಿ ಸುದೀರ್ಘ ಚುನಾವಣೆಯಿಂದಾಗಿ ನಾವು ಹೆಚ್ಚು ಕೆಲಸಗಳನ್ನು ಮಾಡಲು ಸಾಧ್ಯವಾಗಲಿಲ್ಲ. ಎಲ್ಲ ಅಡ್ಡಿ ಆತಂಕಗಳ ನಡುವೆಯೂ ನಮ್ಮ ಮತಗಳ ಹಂಚಿಕೆಯಲ್ಲಿ ಹೆಚ್ಚಳವಾಗಿದೆ ಎಂದು ತಿಳಿಸಿದರು.
'ನಾನು ನಂಬುವುದಿಲ್ಲ...' ಪದ್ಯದ ಮೂಲಕ ಫಲಿತಾಂಶಕ್ಕೆ ದೀದಿ ಪ್ರತಿಕ್ರಿಯೆ
42 ಲೋಕಸಭಾ ಕ್ಷೇತ್ರಗಳಿರುವ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ 2014ರ ಚುನಾವಣೆಯಲ್ಲಿ 34 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು. ಆಗ ಬಿಜೆಪಿ ಕೇವಲ ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.
ಆದರ, ಈ ಚುನಾವಣೆಯಲ್ಲಿ ಬಿಜೆಪಿ 18 ಕ್ಷೇತ್ರಗಳಲ್ಲಿ ಜಯಗಳಿಸಿದೆ. ಟಿಎಂಸಿ ಕೇವಲ 22 ಕ್ಷೇತ್ರಗಳಲ್ಲಿ ಗೆದ್ದಿದೆ. ಕಾಂಗ್ರೆಸ್ ಎರಡು ಕ್ಷೇತ್ರಗಳಲ್ಲಿ ಗೆದ್ದಿದ್ದರೆ 36 ವರ್ಷ ರಾಜ್ಯವನ್ನು ಆಳಿದ್ದ ಎಡಪಕ್ಷಗಳು ಶೂನ್ಯ ಸಾಧನೆ ಮಾಡಿವೆ.
ಈ ಕುರ್ಚಿ ನನಗೇನೂ ಅಲ್ಲ
ಕಳೆದ ಆರು ತಿಂಗಳಿನಿಂದ ನನಗೆ ಕೆಲಸ ಮಾಡಲು ಸಾಧ್ಯವಾಗಲಿಲ್ಲ ಎಂದು ನನ್ನ ಪಕ್ಷಕ್ಕೆ ತಿಳಿಸಿದ್ದೇನೆ. ನಾನು ಅಧಿಕಾರವಿಲ್ಲದ ಮುಖ್ಯಮಂತ್ರಿಯಾಗಿದ್ದೆ. ನಾನು ಅದನ್ನು ಒಪ್ಪಿಕೊಳ್ಳಲಾರೆ. ನಾನು ಮುಖ್ಯಮಂತ್ರಿಯಾಗಿ ಮುಂದುವರಿಯಲು ಬಯಸುವುದಿಲ್ಲ. ಈ ಕುರ್ಚಿ ನನಗೇನೂ ಅಲ್ಲ. ಪಕ್ಷದ ಚಿಹ್ನೆಯೇ ನನಗೆ ಅತಿ ಮುಖ್ಯ ಎಂದರು.
ಭಾರೀ ಮುಖಭಂಗದ ನಂತರ ದೀದಿ ಮೊದಲ ಟ್ವೀಟ್!
ಎಡಪಕ್ಷಗಳ ಮತ ಬಿಜೆಪಿಗೆ
ಜನರು ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳಲು ಇಚ್ಛಿಸಿದ್ದರೆ ಮಾತ್ರ ನಾನು ಮುಂದುವರಿಯಲು ಸಾಧ್ಯ. ನಮ್ಮ ಮತಗಳ ಹಂಚಿಕೆ ಪ್ರಮಾಣವನ್ನು ನಾವು ಹೆಚ್ಚಿಸಿಕೊಳ್ಳಬೇಕಿದೆ. ಬಿಜೆಪಿಗೆ ಬಂದಿರುವ ಮತಗಳು ಎಡಪಕ್ಷಗಳ ಕಡೆಯಿಂದ ಸಿಕ್ಕಿರುವುದು. ಇದು ಬಹುದೊಡ್ಡ ಲೆಕ್ಕಾಚಾರ ಎಂದು ಹೇಳಿದರು.
ಚುನಾವಣಾ ಆಯೋಗ ಪಂದ್ಯಶ್ರೇಷ್ಠ
ತುರ್ತು ಪರಿಸ್ಥಿತಿಯ ಸನ್ನಿವೇಶವನ್ನು ಸೃಷ್ಟಿಸಲಾಯಿತು. ಹಿಂದೂ ಮುಸ್ಲಿಂ ವಿಭಜನೆ ಮಾಡಿ ಮತಗಳನ್ನು ವಿಭಜಿಸಲಾಯಿತು. ನಾವು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರೂ ಅದರತ್ತ ಯಾರೂ ಗಮನ ಹರಿಸಲಿಲ್ಲ ಎಂದು ಮಮತಾ ದೂರಿದರು.
'ಪ್ರೀತಿ ಮತ್ತು ಯುದ್ಧದಲ್ಲಿ ಯಾವುದೂ ಅನ್ಯಾಯವಲ್ಲ' ಎಂದು ಉಕ್ತಿಯನ್ನು ಚುನಾವಣಾ ಪ್ರಕ್ರಿಯೆಗೆ ಹೋಲಿಸಿದರು. ಚುನಾವಣಾ ಆಯೋಗವನ್ನು ಈ ಚುನಾವಣೆಯ 'ಪಂದ್ಯ ಶ್ರೇಷ್ಠ' ಎಂದು ಕರೆದ ಅವರು, 'ನಾನೇನು ಮಾಡಲು ಸಾಧ್ಯ?' ಎಂದು ಹತಾಶೆ ವ್ಯಕ್ತಪಡಿಸಿದರು.
ನಾನು ಹೆದರುವುದಿಲ್ಲ
'ಈ ಫಲಿತಾಂಶವನ್ನು ನನ್ನಿಂದ ಒಪ್ಪಿಕೊಳ್ಳಲಾಗದು. ರಾಜಸ್ಥಾನ, ಗುಜರಾತ್, ಹರಿಯಾಣಗಳಲ್ಲಿ ಬಿಜೆಪಿ ಅಷ್ಟೊಂದು ಸೀಟುಗಳನ್ನು ಗೆಲ್ಲುವುದು ಹೇಗೆ ಸಾಧ್ಯ? ಜನರು ಮಾತನಾಡಲು ಹೆದರುತ್ತಾರೆ. ಆದರೆ, ನಾನು ಹೆದರುವುದಿಲ್ಲ' ಎಂದರು.
ಕೇಂದ್ರದ ಪಡೆಗಳು ನಮ್ಮ ವಿರುದ್ಧವಾಗಿ ಕೆಲಸ ಮಾಡಿದವು. ಬಿಜೆಪಿಯು ತನ್ನ ಕೋಮುವಾದಿ ಅಜೆಂಡಾದಲ್ಲಿ ಗೆಲುವು ಸಾಧಿಸಿತು. ಧ್ರುವೀಕರಣದ ಫಾರ್ಮುಲಾದಲ್ಲಿ ಅವರು ಯಶಸ್ವಿಯಾದರು. ಚುನಾವಣಾ ಆಯೋಗವು ಸಂಪೂರ್ಣವಾಗಿ ಅವರ ಪರವಾಗಿ ಕೆಲಸ ಮಾಡಿತು. ಇದನ್ನು ಯಾರು ನಂಬಲಿ ಅಥವಾ ಬಿಡಲಿ ಎಂದು ಆರೋಪಿಸಿದರು.
ಸೋದರಳಿಯನಿಗೆ ಮುಖಭಂಗ
ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರು ಚುನಾವಣಾ ನೇತೃತ್ವ ವಹಿಸಿದ್ದ ಎಲ್ಲ ಜಿಲ್ಲೆಗಳೂ ಟಿಎಂಸಿಯಿಂದ ಕೈತಪ್ಪಿ ಹೋಗಿವೆ. ಪುರುಲಿಯಾ ಮತ್ತು ಝಾರ್ಗರಾಮ್ ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದೆ. ಹೀಗಾಗಿ ಅವರ ಅಧಿಕಾರಕ್ಕೆ ಕತ್ತರಿ ಹಾಕಲು ಮಮತಾ ನಿರ್ಧರಿಸಿದ್ದಾರೆ.