'ಅವರಿಗೇನು ತಲೆ ಸರಿಯಿಲ್ಲವಾ?': ಬಿಜೆಪಿ ಟಿಕೆಟ್ ನಿರಾಕರಿಸಿದ ಅಭ್ಯರ್ಥಿ!
ಕೋಲ್ಕತಾ, ಮಾರ್ಚ್ 19: ಕೇರಳದಲ್ಲಿ ಬುಡಕಟ್ಟು ಸಮುದಾಯದ ಯುವ ಪದವೀಧರ ಬಿಜೆಪಿಯಿಂದ ಉಮೇದುವಾರಿಕೆ ನಿರಾಕರಿಸಿದ ಬೆನ್ನಲ್ಲೇ, ಪಶ್ಚಿಮ ಬಂಗಾಳದಲ್ಲಿಯೂ ಬಿಜೆಪಿಗೆ ಮತ್ತೊಂದು ಮುಜುಗರ ಎದುರಾಗಿದೆ. ತಾವು ಬೇಡ ಎಂದಿದ್ದರೂ ಕೋಲ್ಕತಾದ ಚೌರಿಂಘೀ ವಿಧಾನಸಭೆ ಕ್ಷೇತ್ರದಿಂದ ತಮ್ಮನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವ ಬಿಜೆಪಿ ವಿರುದ್ಧ ಶಿಖಾ ಮಿತ್ರಾ ಕಿಡಿಕಾರಿದ್ದಾರೆ.
ತಾವು ಬಿಜೆಪಿಯನ್ನು ಸೇರುವ ಆಹ್ವಾನವನ್ನೇ ನಿರಾಕರಿಸಿದ್ದರೂ, ಪಕ್ಷದ ಅಭ್ಯರ್ಥಿಯನ್ನಾಗಿ ಹೆಸರಿಸಲಾಗಿದೆ ಎಂದು ಶಿಖಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಬಂಗಾಳದ ಕೊನೆಯ ನಾಲ್ಕು ಹಂತಗಳ ವಿಧಾನಸಭೆ ಚುನಾವಣೆಗೆ 148 ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಗುರುವಾರ ಪ್ರಕಟಿಸಿತ್ತು. ಇದರಲ್ಲಿ ಚೌರಿಂಘೀ ವಿಧಾನಸಭೆ ಕ್ಷೇತ್ರದಿಂದ ಶಿಖಾ ಮಿತ್ರಾ ಅವರನ್ನು ಅಭ್ಯರ್ಥಿಯನ್ನಾಗಿ ಹೆಸರಿಸಿತ್ತು.
ಈ ಪಟ್ಟಿಯಲ್ಲಿ ತಮ್ಮ ಹೆಸರು ಕಾಣಿಸುತ್ತಿದ್ದಂತೆಯೆ ಶಿಖಾ ತೀವ್ರ ಅಸಮಾಧಾನಗೊಂಡಿದ್ದಾರೆ. ಬಿಜೆಪಿ ಸೇರುವ ಆಹ್ವಾನವನ್ನು ನಿರಾಕರಿಸಿದ್ದರೂ, ಅಭ್ಯರ್ಥಿಯನ್ನಾಗಿ ಘೋಷಿಸಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.

ಆಹ್ವಾನ ತಿರಸ್ಕಾರ
ಇತ್ತೀಚೆಗಷ್ಟೇ ಟಿಎಂಸಿ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ನಂದಿಗ್ರಾಮ ಕ್ಷೇತ್ರದ ಅಭ್ಯರ್ಥಿ ಸುವೇಂದು ಅಧಿಕಾರಿ ಅವರು ಕೆಲವು ವಾರಗಳ ಹಿಂದೆ ತಮ್ಮನ್ನು ಭೇಟಿಯಾಗಿ ಬಿಜೆಪಿ ಸೇರುವಂತೆ ಆಹ್ವಾನ ನೀಡಿದ್ದರು. ಆದರೆ ಆ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದಾಗಿ ಶಿಖಾ ತಿಳಿಸಿದ್ದಾರೆ. ಈಗ ಏಕಾಏಕಿ ತಮ್ಮ ಹೆಸರು ಪ್ರಕಟಿಸಿರುವುದು ಮುಜುಗರ ಉಂಟುಮಾಡಿದೆ ಎಂದಿದ್ದಾರೆ.

ವಿವೇಕ ಕಳೆದುಕೊಂಡಿದ್ದಾರೆ
'ನನ್ನ ಹೆಸರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಪ್ರಕಟಿಸಲಾಗಿದೆ ಎಂದು ನನಗೆ ಮಾಧ್ಯಮಗಳ ಮೂಲಕ ತಿಳಿಯಿತು. ಅವರು ನನಗಿಂತ ಸಂಪೂರ್ಣ ವಿಭಿನ್ನ, ನಾನು ಹೇಗೆ ಬಿಜೆಪಿ ಸೇರಲು ಸಾಧ್ಯ?. ಆ ಪಕ್ಷದ ನಾಯಕರು ವಿವೇಕ ಕಳೆದುಕೊಂಡಿದ್ದಾರೆ' ಎಂದು ಟೀಕಿಸಿದ್ದಾರೆ.
|
ಬಿಜೆಪಿ ಜತೆ ನಿಲ್ಲುವುದಿಲ್ಲ
ಶಿಖಾ ಮಿತ್ರಾ ಅವರು ಪಶ್ಚಿಮ ಬಂಗಾಳ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಸೋಮೆನ್ ಮಿತ್ರಾ ಅವರ ಪತ್ನಿ. ಅವರ ಮಗ ಮತ್ತು ಪಶ್ಚಿಮ ಬಂಗಾಳ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೋಹನ್ ಮಿತ್ರಾ ವಿಡಿಯೋ ಪೋಸ್ಟ್ ಮಾಡಿದ್ದು, ಆಕೆಯ ಉಮೇದುವಾರಿಕೆ ಘೋಷಣೆ ಸರಿಯಲ್ಲ. ಆಕೆ ಎಂದಿಗೂ ಬಿಜೆಪಿ ಜತೆ ನಿಲ್ಲುವುದಿಲ್ಲ ಎಂದಿದ್ದಾರೆ.

ಟಿಎಂಸಿ ಶಾಸಕಿ ಪತಿ ತರುಣ್ ಸಾಹಾಗೆ ಟಿಕೆಟ್
ಶಿಖಾ ಮಿತ್ರಾ ಅಲ್ಲದೆ, ತೃಣಮೂಲ ಕಾಂಗ್ರೆಸ್ ಶಾಸಕಿ ಮಾಲಾ ಸಾಹಾ ಅವರ ಪತಿ ತರುಣ್ ಸಾಹಾ ಅವರನ್ನು ಅಭ್ಯರ್ಥಿಯನ್ನಾಗಿ ಬಿಜೆಪಿ ಘೋಷಿಸಿದೆ. ತರುಣ್ ಸಾಹಾ ಅವರೂ ಬಿಜೆಪಿಯ ನಾಮನಿರ್ದೇಶನವನ್ನು ತಿರಸ್ಕರಿಸಿದ್ದು, ತಾವು ಪಕ್ಷಕ್ಕೆ ಬದ್ಧವಾಗಿರುವುದಾಗಿ ತಿಳಿಸಿದ್ದಾರೆ.












Click it and Unblock the Notifications