ಬಿಜೆಪಿ ಮಾಸ್ಟರ್ ಪ್ಲಾನ್: ಮಮತಾ ರಾಜ್ಯ ಬಿಟ್ಟು ಪ್ರಚಾರಕ್ಕೆ ಹೋಗಲೇ ಆಗಿಲ್ಲ?
ಎಂಬತ್ತು ಸೀಟನ್ನು ಹೊಂದಿರುವ ಉತ್ತರಪ್ರದೇಶದಲ್ಲಿ ಏಳೂ ಹಂತದಲ್ಲಿ ಚುನಾವಣೆ ನಡೆಸಬೇಕಾದ ಅನಿವಾರ್ಯತೆ ಕೇಂದ್ರ ಚುನಾವಣಾ ಆಯೋಗಕ್ಕೆ ಇದ್ದಿರಬಹುದು. ಬಟ್, 42 ಸೀಟನ್ನು ಹೊಂದಿರುವ ಪಶ್ಚಿಮ ಬಂಗಾಳದಲ್ಲಿ?
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಕೇಂದ್ರ ಚುನಾವಣಾ ಆಯೋಗ ನರೇಂದ್ರ ಮೋದಿಯವರ ಅಣತಿಯಂತೆ ಕೆಲಸ ಮಾಡುತ್ತಿದೆ ಎಂದು ಬಹಿರಂಗ ಪ್ರಚಾರದ ಒಂದು ದಿನದ ಹಿಂದೆ ರಾಹುಲ್ ಗಾಂಧಿ ಹೇಳಿದ್ದರು, ಅದನ್ನು ಮಮತಾ ಬ್ಯಾನರ್ಜಿ ಬಹಳಷ್ಟು ಬಾರಿ ಈಗಾಗಲೇ ಹೇಳಿಯಾಗಿದೆ.
ಸಿಬಿಐ, ಇಡಿ, ಚುನಾವಣಾ ಆಯೋಗ, ಐಟಿ ಮುಂತಾದ ಇಲಾಖೆಗಳು ಸ್ವತಂತ್ರ ಸ್ವಾಯತ್ತ ಸಂಸ್ಥೆಗಳಾದರೂ, ಕೇಂದ್ರದಲ್ಲಿ ಯಾವುದೇ ಸರಕಾರವಿರಲಿ, ಅದರ ಅಣತಿಯಂತೇ ಕೆಲಸ ನಿರ್ವಹಿಸುತ್ತದೆ ಎನ್ನುವುದಕ್ಕೆ ಅಂದಿನ ಇಂದಿರಾ ಗಾಂಧಿಯಿಂದ ಹಿಡಿದು ಈಗಿನ ಮೋದಿಯವರೆಗೂ ಹಲವು ಉದಾಹರಣೆಗಳು ಸಿಗಬಹುದು.
ಮಮತಾ ಬ್ಯಾನರ್ಜಿ ಬುಡವನ್ನೇ ಅಲ್ಲಾಡಿಸಿರುವ ಅಮಿತ್ ಶಾ, ಮೋದಿ
ಚುನಾವಣಾ ದಿನಾಂಕ ಘೋಷಣೆಯಾದ ನಂತರ, ಕೊನೆಯ ಹಂತದ ಮತದಾನದ ಬಹಿರಂಗ ಪ್ರಚಾರ ಮುಗಿಯುವವರೆಗೆ ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳದ ಪ್ರಚಾರಕ್ಕೆ ಮಾತ್ರ ಸೀಮಿತವಾದರು. ಯಾಕೆಂದರೆ, ಏಳೂ ಹಂತದಲ್ಲಿ ನಡೆದ ಅಲ್ಲಿನ ಚುನಾವಣೆ.
ಕಳೆದ ಬಾರಿ ಗೆದ್ದಷ್ಟು ಸೀಟನ್ನು (32) ಉಳಿಸಿಕೊಳ್ಳುವುದು ಪ್ರತಿಷ್ಠೆಯ ಪ್ರಶ್ನೆ
2014ರ ಚುನಾವಣೆಯಂತೆ ಈ ಬಾರಿ ಇಲ್ಲ ಎನ್ನುವ ಸ್ಪಷ್ಟ ರಾಜಕೀಯ ಚಿತ್ರಣವನ್ನು ಅರಿತಿರುವ ಮಮತಾಗೆ, ಕಳೆದ ಬಾರಿ ಗೆದ್ದಷ್ಟು ಸೀಟನ್ನು (32) ಉಳಿಸಿಕೊಳ್ಳುವುದು ಪ್ರತಿಷ್ಠೆಯ ಪ್ರಶ್ನೆ. ಅದಕ್ಕೆ ಹರಸಾಹಸ ಪಡಬೇಕಾದ ಸ್ಥಿತಿ ಇರುವುದೂ ಮಮತಾಗೆ ಗೊತ್ತಿರುವ ವಿಚಾರ. ಹಾಗಾಗಿ, ತನ್ನ ರಾಜ್ಯದಲ್ಲಿ ಮತದಾನ ಪ್ರಕ್ರಿಯೆ ಸಂಪೂರ್ಣ ಮುಗಿಯುವವರೆಗೆ, ಬೇರೆ ರಾಜ್ಯದ ಚುನಾವಣಾ ಪ್ರಚಾರದ ಕಡೆಗೆ ಗಮನಹರಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿತ್ತು.
ಕರ್ನಾಟಕದಲ್ಲಿ ಬಿಜೆಪಿಗೆ 0 ಸ್ಥಾನ! ಮಮತಾ ಬ್ಯಾನರ್ಜಿ ಎಗ್ಸಿಟ್ ಪೋಲ್!
42 ಸೀಟಿಗೆ ಮತದಾನ ನಡೆದದ್ದು ಹೀಗೆ
ಪಶ್ಚಿಮ ಬಂಗಾಳದ 42 ಸೀಟಿಗೆ ಮತದಾನ ನಡೆದದ್ದು ಹೀಗೆ (ಕೊನೆಯ ಹಂತದ ಚುನಾವಣೆ ಬಾಕಿಯಿದೆ). ಮೊದಲನೇ ಹಂತದಲ್ಲಿ ಎರಡು, ಎರಡನೇ ಹಂತದಲ್ಲಿ ಮೂರು, ಮೂರನೇ ಹಂತದಲ್ಲಿ ಐದು, ನಾಲ್ಕನೇ ಹಂತದಲ್ಲಿ ಎಂಟು, ಐದನೇ ಹಂತದಲ್ಲಿ ಏಳು, ಆರನೇ ಹಂತದಲ್ಲಿ ಎಂಟು, ಏಳನೇ ಹಂತದಲ್ಲಿ ಒಂಬತ್ತು, ಎಲ್ಲಾ ಏಳು ಹಂತದ ಮತದಾನಕ್ಕೆ ರಾಜ್ಯ ಸಾಕ್ಷಿಯಾಗಿತ್ತು.
ಪಶ್ಚಿಮ ಬಂಗಾಳ ಹೊರತಾಗಿಯೂ ವರ್ಚಸ್ಸು ಇರುವ ನಾಯಕಿ
ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಹೊರತಾಗಿಯೂ ವರ್ಚಸ್ಸು ಇರುವ ನಾಯಕಿ, ಹೀಗಾಗಿ, ಎನ್ಡಿಎ ಹೊರತಾದ ಪಕ್ಷಗಳೂ ಇವರನ್ನು ಪ್ರಚಾರಕ್ಕೆ ಆಹ್ವಾನಿಸುತ್ತಿದ್ದರು. ಉದಾಹರಣೆಗೆ ಚಂದ್ರಬಾಬು ನಾಯ್ಡು, ಕರ್ನಾಟಕ ಮತ್ತು ಪಶ್ಚಿಮ ಬಂಗಾಳದಲ್ಲಿ ಪ್ರಚಾರ ಮಾಡಿದಂತೆ, ಇತರ ರಾಜ್ಯಗಳಿಗೂ ಮಮತಾ ಪ್ರಚಾರ ವಿಸ್ತರಣೆಯಾಗುವ ಸಾಧ್ಯತೆ ಇಲ್ಲದಿರಲಿಲ್ಲ. ಆದರೆ, ಏಳೂ ಹಂತದಲ್ಲಿ ಬಂಗಾಳದಲ್ಲಿ ಚುನಾವಣೆ ನಡೆದಿದ್ದರಿಂದ, ಅವರು ರಾಜ್ಯ ಬಿಟ್ಟು ಹೋಗದಂತಹ ಪರಿಸ್ಥಿತಿ ನಿರ್ಮಾಣವಾಯಿತು.
ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಮೇಲೆ ಮಮತಾಗಿರುವ ಸಿಟ್ಟು ಅಷ್ಟಿಷ್ಟಲ್ಲ
ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮೇಲೆ ಮಮತಾಗಿರುವ ಸಿಟ್ಟು ಅಷ್ಟಿಷ್ಟಲ್ಲ ಎನ್ನುವುದು ಅವರ ಹೇಳಿಕೆಯಿಂದಲೇ ಅರ್ಥವಾಗುತ್ತದೆ. ಹಾಗಾಗಿ, ಮತ್ತೆ ಮೋದಿ ಬರದಂತೆ ತಡೆಯಲು ಸಾಧ್ಯವಾಗುವಷ್ಟು ಪ್ರಯತ್ನ ಮಾಡುತ್ತಿದ್ದರು. ಮೊದಲು, ಕಾಂಗ್ರೆಸ್ ಜೊತೆ 'ನೋ' ಎಂದಿದ್ದವರು, ನಂತರ ಬಿಜೆಪಿಗೆ ಅಧಿಕಾರ ಮತ್ತೆ ಸಿಗದಂತೆ ಆಗುವ ಎಲ್ಲಾ ಸಾಧ್ಯತೆಗಳಿಗೆ ಮುಕ್ತ ಎಂದು ವರಸೆ ಬದಲಾಯಿಸಿದರು.
ಮೋದಿ ಮತ್ತು ಶಾ, ಟಿಎಂಸಿ ಬುಡವನ್ನು ಅಲ್ಲಾಡಿಸುತ್ತಿರುವುದಂತೂ ಹೌದು
ಮಮತಾ ಬ್ಯಾನರ್ಜಿ ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಬಿಜೆಪಿ ಈ ಬಾರಿ ಪ್ರಚಾರವನ್ನು ಮಾಡಿತ್ತು. ಪ್ರತೀ ಪ್ರಚಾರದಲ್ಲೂ ಮಮತಾ ವಿರುದ್ದ ಕಟುಟೀಕೆಯನ್ನು ಬಿಜೆಪಿ ಮುಖಂಡರು ಮಾಡಿಕೊಂಡು ಬಂದರು. ಮಮತಾ ಅದಕ್ಕೆ ತಿರುಗೇಟು ನೀಡುವುದನ್ನೇ ಮಾಡಿದರೇ ಹೊರತು, ತನ್ನ ರಾಜ್ಯ ಬಿಟ್ಟು ಬೇರೆ ಕಡೆ ಹೋಗುವ ಸಾಹಸಕ್ಕೆ ಕೈಹಾಕಲಿಲ್ಲ. ಇದೊಂದು ಬಿಜೆಪಿಯ ಪೂರ್ವ ನಿರ್ಧಾರಿತ ರಣತಂತ್ರ ಎಂದೇ ಹೇಳಲಾಗುತ್ತಿದೆ. ಅಮಿತ್ ಶಾ ಭರ್ಜರಿ ರೋಡ್ ಶೋ ಮಾಡಿದರು, ಅಲ್ಲಿ ಹಿಂಸಾಚಾರ ನಡೆಯಿತು. ಬಿಜೆಪಿ ಎಷ್ಟು ಸೀಟು ಗೆಲ್ಲಬಹುದು ಎನ್ನುವುದು ನಾಲ್ಕೈದು ದಿನಗಳಲ್ಲಿ ಗೊತ್ತಾಗಲಿದೆ. ಆದರೆ, ಮೋದಿ ಮತ್ತು ಶಾ, ಟಿಎಂಸಿ ಬುಡವನ್ನು ಅಲ್ಲಾಡಿಸುತ್ತಿರುವುದಂತೂ ಹೌದು.