ಕೊನೆಗೂ ಸಿಬಿಐ ಮುಂದೆ ಹಾಜರಾದ ದೀದಿ ಆಪ್ತ ಐಪಿಎಸ್ ಅಧಿಕಾರಿ
ಕೊಲ್ಕತ್ತ, ಜೂನ್ 07: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಆಪ್ತ, ಮಾಜಿ ಐಪಿಎಸ್ ಅಧಿಕಾರಿ ರಾಜೀವ್ ಕುಮಾರ್ ಕೊನೆಗೂ ಇಂದು ಸಿಬಿಐ ಮುಂದೆ ಹಾಜರಾಗಿದ್ದಾರೆ.
ಶಾರದಾ ಚಿಟ್ಫಂಡ್ ಬಹುಕೋಟಿ ಹಗರಣದಲ್ಲಿ ಇವರ ಹೆಸರು ಕೇಳಿಬಂದಿತ್ತು. ಹಾಗಾಗಿ ಸಿಬಿಐ ಇವರನ್ನು ವಶಕ್ಕೆ ಪಡೆದುಕೊಳ್ಳಲು ಬಹುವಾಗಿ ಯತ್ನಿಸಿತ್ತು. ಆದರೆ ಈ ಯತ್ನವು ಮಮತಾ ಬ್ಯಾನರ್ಜಿ ಮತ್ತು ಕೇಂದ್ರ ಸರ್ಕಾರದ ನಡುವೆ ಪ್ರತಿಷ್ಠೆಯಾಗಿ ಮಾರ್ಪಾಟಾಗಿ ಭಾರಿ ವಿವಾದವನ್ನು ಸೃಷ್ಟಿಸಿತ್ತು.
ಕೊಲ್ಕತ್ತದ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ರಾಜೀವ್ ಕುಮಾರ್ ಅವರು ಇಂದು ಕೊಲ್ಕತ್ತದ ಸಿಬಿಐ ಕಚೇರಿಗೆ ತೆರಳಿ ಅಧಿಕಾರಿಗಳ ಮುಂದೆ ಹಾಜರಾಗಿದ್ದು, ಪ್ರಶ್ನೋತ್ತರವನ್ನು ಎದುರಿಸಿದ್ದಾರೆ. ರಾಜೀವ್ ಅವರು ಈಗ ಜಾರ್ಖಂಡ್ ರಾಜ್ಯದ ಡಿಐಜಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕೆಲವು ತಿಂಗಳ ಹಿಂದೆ ರಾಜೀವ್ ಕುಮಾರ್ ಅವರು ಕೊಲ್ಕತ್ತ ಪೊಲೀಸ್ ವರೀಷ್ಠಾಧಿಕಾರಿ ಆಗಿದ್ದ ಸಂದರ್ಭದಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಲು ಬಂದಿದ್ದ ಸಿಬಿಐ ಅಧಿಕಾರಿಗಳನ್ನು ವಶಕ್ಕೆ ಪಡೆದಿದ್ದಿದು ಭಾರಿ ಸುದ್ದಿ ಆಗಿತ್ತು. ಸಿಬಿಐ ನ ಕ್ರಮವನ್ನು ಖಂಡಿಸಿ ಆಗ ಮಮತಾ ಬ್ಯಾನರ್ಜಿ ಅವರು ಕೇಂದ್ರದ ವಿರುದ್ಧ ಅಹೋರಾತ್ರಿ ಪ್ರತಿಭಟನೆ ಮಾಡಿದ್ದರು.
ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದ ಈ ಪ್ರಕರಣದಲ್ಲಿ ರಾಜೀವ್ ಕುಮಾರ್ ಅವರಿಗೆ ಮೇ 30 ರವರೆಗೆ ವಿಚಾರಣೆಯಿಂದ ವಿನಾಯಿತಿ ನೀಡಲಾಗಿತ್ತು. ನಂತರ ಕೆಲ ದಿನಗಳ ವರಗೆ ವಿನಾಯಿತಿ ಮುಂದುವರೆದು ಇಂದು ಅವರು ಸಿಬಿಐ ಮುಂದೆ ಹಾಜರಾಗಿದ್ದಾರೆ.
ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಪಟ್ಟ ಸಾಕ್ಷ್ಯಗಳನ್ನು ನಾಶ ಮಾಡಿದ, ಹಗರಣಕ್ಕೆ ಸಂಬಂಧ ಉಳ್ಳ ಆರೋಪವನ್ನು ಸಿಬಿಐ ರಾಜೀವ್ ಕುಮಾರ್ ಅವರ ವಿರುದ್ಧ ಮಾಡಿದೆ.
ರಾಜೀವ್ ಕುಮಾರ್ ಅವರು ಮಮತಾ ಬ್ಯಾನರ್ಜಿ ಅವರ ಆಪ್ತ ಅಧಿಕಾರಿಯಾಗಿದ್ದು, ಶಾರದಾ ಚಿಟ್ ಫಂಡ್ ಹಗರಣದಲ್ಲಿ ದೀದಿ ಹೆಸರೂ ಸಹ ಇದೆ.












Click it and Unblock the Notifications