ರೋಹಿಂಗ್ಯಾ ನಿರಾಶ್ರಿತರ ಬಯೋಮೆಟ್ರಿಕ್ ಮಾಹಿತಿ ಸಂಗ್ರಹಕ್ಕೆ ಸೂಚಿಸಿದ ಕೇಂದ್ರ
ಕೋಲ್ಕತಾ, ಅಕ್ಟೋಬರ್ 1: ದೇಶದೊಳಗೆ ಪ್ರವೇಶಿಸಿರುವ ರೋಹಿಂಗ್ಯಾ ನಿರಾಶ್ರಿತರ ಸ್ಥಿತಿಗತಿಗಳನ್ನು ಗುರುತಿಸಿ ಅವರ ಬಯೋಮೆಟ್ರಿಕ್ ಮಾಹಿತಿಗಳನ್ನು ಸಂಗ್ರಹಿಸಲು ರಾಜ್ಯಗಳಿಗೆ ಸೂಚಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಹೀಗೆ ರಾಜ್ಯಗಳಿಂದ ಪಡೆದ ಬಯೋಮೆಟ್ರಿಕ್ ವರದಿಗಳನ್ನು ಕೇಂದ್ರ ಸರ್ಕಾರವು ರಾಜತಾಂತ್ರಿಕ ಮಾರ್ಗದ ಮೂಲಕ ಮಯನ್ಮಾರ್ ಸರ್ಕಾರಕ್ಕೆ ಕಳಹಿಸಲಿದೆ ಎಂದು ಹೇಳಿದ್ದಾರೆ.
ರೋಹಿಂಗ್ಯಾ ನಿರಾಶ್ರಿತರ ಮಾಹಿತಿಗಳನ್ನು ಒಮ್ಮೆ ಸಂಗ್ರಹಿಸಿದ ಬಳಿಕ ರಾಜ್ಯ ಆಡಳಿತ ವರದಿಯನ್ನು ಕೇಂದ್ರ ಸರ್ಕಾರಕ್ಕೆ ರವಾನಿಸಲಿವೆ. ನಂತರ ಕೇಂದ್ರ ಸರ್ಕಾರ ಮಯನ್ಮಾರ್ ಜತೆ ರಾಜತಾಂತ್ರಿಕ ಮಾರ್ಗಗಳ ಮೂಲಕ ಕ್ರಮ ತೆಗೆದುಕೊಂಡು ಸಮಸ್ಯೆಯನ್ನು ಬಗೆಹರಿಸಲಿದೆ ಎಂದಿದ್ದಾರೆ.

ಮಾವೊವಾದಿಗಳ ಬೆದರಿಕೆ ಸೇರಿದಂತೆ ಅಂತರ್ ರಾಜ್ಯ ಸಂಬಂಧಗಳು ಮತ್ತು ಭದ್ರತಾ ವಿಚಾರಗಳ ಕುರಿತು ನಡೆದ ಪೂರ್ವ ವಲಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ರಾಜನಾಥ್ ಸಿಂಗ್, ಈ ವಿಷಯ ಪ್ರಸ್ತಾಪಿಸಿದರು.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಜಾರ್ಖಂಡ್ ಮುಖ್ಯಮಂತ್ರಿ ರಘುವರ ದಾಸ್ ಮತ್ತು ಬಿಹಾರದ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಸಭೆಯಲ್ಲಿ ಭಾಗವಹಿಸಿದ್ದರು.
ತಮ್ಮ ಕುಟುಂಬದವರ ಜತೆ ಗುಂಪುಗಳಲ್ಲಿ ಸಾಗುತ್ತಿರುವ ರೋಹಿಂಗ್ಯಾ ನಿರಾಶ್ರಿತರ ಚಲನವಲನಗಳ ಮೇಲೆ ಹದ್ದಿನಕಣ್ಣುನ ಇರಿಸುವಂತೆ ರೈಲ್ವೆ ರಕ್ಷಣಾ ದಳ (ಆರ್ಪಿಎಫ್) ಕೇರಳದ ಸರ್ಕಾರಕ್ಕೆ ಕಳೆದ ವಾರ ಎಚ್ಚರಿಕೆ ನೀಡಿತ್ತು.
ಭಾರತದ ಈಶಾನ್ಯ ರಾಜ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ನಿರಾಶ್ರಿತರು ಹೆಚ್ಚಾಗಿ ವಿವಿಧ ರಾಜ್ಯಗಳಿಗೆ ಸಂಚರಿಸುವ 14 ರೈಲುಗಳ ಪಟ್ಟಿಯನ್ನು ಆರ್ಪಿಎಫ್ ನೀಡಿದೆ.
ದಕ್ಷಿಣ ರೈಲ್ವೆಯ ಮುಖ್ಯ ಭದ್ರತಾ ಆಯುಕ್ತರು ಚೆನ್ನೈ, ಮದುರೆ, ಸೇಲಂ, ತಿರುವನಂತಪುರಂ, ಪಲಕ್ಕಾಡ್ ಮತ್ತು ತಿರುಚನಾಪಳ್ಳಿಗಳ ವಿಭಾಗೀಯ ಭದ್ರತಾ ಆಯುಕ್ತರಿಗೆ ಪತ್ರ ಕಳುಹಿಸಿದ್ದು, ರೈಲುಗಳಲ್ಲಿ ರೋಹಿಂಗ್ಯಾ ನಿರಾಶ್ರಿತರು ಪ್ರಯಾಣಿಸುತ್ತಿರುವುದು ಕಂಡುಬಂದರೆ ಅವರನ್ನು ಪೊಲೀಸರಿಗೆ ಒಪ್ಪಿಸುವಂತೆ ಸೂಚಿಸಿದ್ದಾರೆ.












Click it and Unblock the Notifications