ಜನವರಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ: ಬಿಜೆಪಿ
ನವದೆಹಲಿ, ಡಿ. 6: ಕೊರೊನಾ ವೈರಸ್ ಸೋಂಕಿನ ಪಿಡುಗು ಸಂಪೂರ್ಣ ನಿಯಂತ್ರಣಕ್ಕೆ ಬಂದ ಬಳಿಕ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯನ್ನು ದೇಶದಾದ್ಯಂತ ಜಾರಿಗೆ ತರಲಾಗುವುದು ಎಂದು ಬಿಜೆಪಿ ಹೇಳುತ್ತಾ ಬಂದಿದೆ. ಈ ನಡುವೆ ಹಿರಿಯ ಮುಖಂಡ ಕೈಲಾಶ್ ವಿಜಯ್ ವರ್ಗಿಯಾ ಅವರು ಜನವರಿ 2021 ತಿಂಗಳಲ್ಲಿ ಸಿಎಎ ಬಹುತೇಕ ಜಾರಿಗೊಳ್ಳಲಿದೆ ಎಂದು ಹೇಳಿದ್ದಾರೆ. ಮುಂಬರುವ ಪಶ್ಚಿಮ ಬಂಗಾಳ ಚುನಾವಣೆ ಮೇಲೆ ಕಣ್ಣಿರಿಸಿರುವ ಕೇಸರಿ ಪಡೆ ಇದಕ್ಕೂ ಮುನ್ನ ಸಿಎಎ ಜಾರಿಗೊಳಿಸಿ ಅಕ್ರಮ ವಲಸಿಗರನ್ನು ಪ್ರತ್ಯೇಕಿಸಿ ಕ್ರಮ ಜರುಗಿಸಲು ಮುಂದಾಗಿದೆ.
ಪಶ್ಚಿಮ ಬಂಗಾಳದಲ್ಲಿ ಅಕ್ರಮ ನುಸುಳುವಿಕೆ, ವಲಸಿಗರ ಸಮಸ್ಯೆ ಬೃಹದಾಕಾರವಾಗಿ ಬೆಳೆದರೂ ಮಮತಾ ಬ್ಯಾನರ್ಜಿ ಸರ್ಕಾರ ಕಣ್ಮುಚ್ಚಿಕೊಂಡಿದೆ. ಇದಕ್ಕೆ ಕಡಿವಾಣ ಹಾಕುವ ಕಾಲ ಬಂದಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿಜಯ್ ಹೇಳಿದರು.
ವಲಸಿಗರಿಗೆ ಪೌರತ್ವ ನೀಡುವ ಪ್ರಕ್ರಿಯೆ ಜನವರಿಯಿಂದ ಆರಂಭವಾಗಲಿದೆ ಎಂದು ನಾರ್ಥ್ 24 ಪರಾಗಣ ಜಿಲ್ಲೆಯಲ್ಲಿ ಅಭಿಯಾನವೊಂದರಲ್ಲಿ ಪಾಲ್ಗೊಂಡು ಮಾತನಾಡಿದರು.

ಜನರನ್ನು ಮೂರ್ಖರನ್ನಾಗಿಸಿದ್ದು ಯಾರು?
ಟಿಎಂಸಿ ಮುಖಂಡ, ಸಚಿವ ಫಿರ್ಹಾದ್ ಹಕೀಂ ಪ್ರತಿಕ್ರಿಯಿಸಿ, ''ಪಶ್ಚಿಮ ಬಂಗಾಳದ ಜನರನ್ನು ಮೂರ್ಖರನ್ನಾಗಿಸಲು ಬಿಜೆಪಿ ಯತ್ನಿಸುತ್ತಿದೆ. ಪೌರತ್ವ ಎಂದರೇನು? ಮಾತುವಾಸ್(Matuas) ಕಳೆದ ಚುನಾವಣೆಯಲ್ಲಿ ಮತದಾನ ಮಾಡಿಲ್ಲವೇ, ನಿಮ್ಮ ಮಾತು ಕೇಳಲು ಇಲ್ಲಿನ ಜನರು ಮೂರ್ಖರಲ್ಲ'' ಎಂದಿದ್ದಾರೆ
ಪೂರ್ವ ಪಾಕಿಸ್ತಾನ (ಇಂದಿನ ಬಾಂಗ್ಲಾದೇಶ) ಮೂಲದ ಮಾತುವಾಸ್ ಸಮುದಾಯ 1950ರಲ್ಲಿ ವಲಸೆ ಬರಲು ಆರಂಭಿಸಿದ್ದು, ಸದ್ಯ 30 ಲಕ್ಷಕ್ಕೂ ಅಧಿಕ ಮಂದಿ ರಾಜ್ಯದಲ್ಲಿದ್ದಾರೆ. ಸುಮಾರು ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಫಲಿತಾಂಶ ಬದಲಿಸಬಲ್ಲರು. ನಾದಿಯಾ, ನಾರ್ಥ್ ಹಾಗೂ ಸೌತ್ 24 ಪರಾಗಣ ಜಿಲ್ಲೆಗಳಲ್ಲಿ ಅಧಿಕವಾಗಿದ್ದಾರೆ. 2021ರ ಏಪ್ರಿಲ್ -ಮೇ ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಈ ಸಮುದಾಯ ಪರಿಣಾಮಕಾರಿಯಾಗಬಲ್ಲುದು ಎಂದು ಬಿಜೆಪಿಯ ಒಂದು ವರ್ಗ ನಂಬಿಕೆಯಿರಿಸಿಕೊಂಡಿದೆ.
2014ರ ಡಿಸೆಂಬರ್ 31ರಂದು ಹಾಗೂ ಅದಕ್ಕೂ ಮುನ್ನ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದಿಂದ ಭಾರತಕ್ಕೆ ವಲಸೆ ಬಂದಿರುವ ಹಿಂದು, ಸಿಖ್, ಬೌದ್ಧ, ಕ್ರೈಸ್ತ, ಜೈನ ಹಾಗೂ ಪಾರ್ಸಿ ನಿರಾಶ್ರಿತ ವಲಸಿಗರಿಗೆ ಸಿಎಎ ಮೂಲಕ ಪೌರತ್ವ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.












Click it and Unblock the Notifications