"ಐದು ವರ್ಷ ನೀಡಿ ಸಾಕು, ಬದಲಾವಣೆ ಎಂದರೇನು ತೋರುತ್ತೇವೆ"
ಕೋಲ್ಕತ್ತಾ, ಮಾರ್ಚ್ 20: "ಇಷ್ಟು ದೊಡ್ಡ ಸಂಖ್ಯೆಯಲ್ಲಿ ನೀವು ಬಿಜೆಪಿಯನ್ನು ಆಶೀರ್ವದಿಸಲು ಬಂದಿರುವುದು ನನಗೆ ಗೌರವದ ವಿಷಯ. ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂಬುದನ್ನು ಇದು ಸ್ಪಷ್ಟವಾಗಿ ತಿಳಿಸುತ್ತಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಪಶ್ಚಿಮ ಬಂಗಾಳದ ಖರಗಪುರದಲ್ಲಿ ಶುಕ್ರವಾರ ಚುನಾವಣಾ ಸಮಾವೇಶದಲ್ಲಿ ತೃಣಮೂಲ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ಕಾಂಗ್ರೆಸ್ ಹಾಗೂ ಎಡಪಕ್ಷದಿಂದ ನೀವು ವಿನಾಶ ನೋಡಿದ್ದೀರಿ. ತೃಣಮೂಲ ಕಾಂಗ್ರೆಸ್ ನಿಮ್ಮ ಕನಸುಗಳನ್ನೇ ನಾಶ ಮಾಡಿದೆ. ಕಳೆದ 70 ವರ್ಷಗಳಲ್ಲಿ ನೀವು ಎಲ್ಲರಿಗೂ ಅವಕಾಶ ನೀಡಿದ್ದೀರಿ. ಆದರೆ ನಮಗೆ 5 ವರ್ಷಗಳನ್ನು ನೀಡಿ ಸಾಕು. 70 ವರ್ಷಗಳ ವಿನಾಶದಿಂದ ನಾವು ಬಂಗಾಳವನ್ನು ಮುಕ್ತಗೊಳಿಸುತ್ತೇವೆ. ಬದಲಾವಣೆ ಏನು ಎಂದು ತೋರಿಸುತ್ತೇವೆ. ನಿಮಗಾಗಿ ನಮ್ಮ ಪ್ರಾಣ ತ್ಯಾಗ ಮಾಡಲೂ ಸಿದ್ಧವಾಗಿದ್ದೇವೆ" ಎಂದು ಹೇಳಿದರು.
ಪಶ್ಚಿಮ ಬಂಗಾಳಕ್ಕೆ ದುರ್ಯೋಧನ, ದುಶ್ಶಾಸನ ಬೇಡ ಎಂದು ಮಮತಾ ಕಿಡಿ
ಶುಕ್ರವಾರ ವಾಟ್ಸಾಪ್, ಇನ್ಸ್ಟಾಗ್ರಾಂ ಮತ್ತು ಫೇಸ್ ಬುಕ್ನಲ್ಲಿ 50ರಿಂದ 55 ನಿಮಿಷ ಸಮಸ್ಯೆಯಾಗಿದ್ದನ್ನು ಉಲ್ಲೇಖಿಸಿ ಮಾತನಾಡಿದ ಅವರು, ಇಂಥ ಸಣ್ಣ ಸಮಸ್ಯೆಯಿಂದ ಜನರಿಗೆ ಆತಂಕ ಶುರುವಾಗಿತ್ತು. ಆದರೆ ಬಂಗಾಳದಲ್ಲಿ 50-55 ವರ್ಷಗಳಿಂದ ಅಭಿವೃದ್ಧಿ, ಕನಸುಗಳೇ ಕುಸಿಯುತ್ತಿವೆ. ಮೊದಲಿಗೆ ಕಾಂಗ್ರೆಸ್, ನಂತರ ಎಡ ಹಾಗೂ ಈಗ ತೃಣಮೂಲ ಕಾಂಗ್ರೆಸ್ ರಾಜ್ಯದ ಅಭಿವೃದ್ಧಿಯನ್ನು ನಿರ್ಬಂಧಿಸುತ್ತಿವೆ ಎಂದು ಆರೋಪಿಸಿದರು.
ಪಶ್ಚಿಮ ಬಂಗಾಳದಲ್ಲಿ 294 ಕ್ಷೇತ್ರಗಳಿಗೆ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 27ರಿಂದ ಚುನಾವಣೆ ಆರಂಭವಾಗಲಿದ್ದು, ಟಿಎಂಸಿ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಇದೆ.