ಪಶ್ಚಿಮ ಬಂಗಾಳ: ಮತ್ತೊಬ್ಬ ಬಿಜೆಪಿ ಕಾರ್ಯಕರ್ತನ ಹತ್ಯೆ
ಕೊಲ್ಕತ್ತ, ಮೇ 31: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರ ಸರಣಿ ಹತ್ಯೆಗಳು ನಿಂತಿಲ್ಲ. ನಿನ್ನೆಯಷ್ಟೆ ಮತ್ತೊಬ್ಬ ಬಿಜೆಪಿ ಕಾರ್ಯಕರ್ತನ ಹತ್ಯೆಯಾಗಿದೆ. ಹತ್ಯೆಯನ್ನು ಟಿಎಂಸಿ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ.
ಪಶ್ಚಿಮ ಬಂಗಾಳ ರಾಜ್ಯದ ಕೇತುಗ್ರಾಮ್ ಜಿಲ್ಲೆಯ ಬುದ್ವಾನ್ ಎಂಬಲ್ಲಿ ಘಟನೆ ನಡೆದಿದ್ದು, ನಿನ್ನೆ ಮೋದಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ಮಾಡುತ್ತಾ, ಬಿಜೆಪಿ ಧ್ವಜಗಳನ್ನು ಕಟ್ಟುತ್ತಿರುವ ಸಂದರ್ಭದಲ್ಲಿ ಗಲಾಟೆ ನಡೆದು ಸುಶೀಲ್ ಮೊಂಡಲ್ ಎಂಬುವರನ್ನು ಹತ್ಯೆ ಮಾಡಲಾಗಿದೆ.
52 ವರ್ಷದ ಸುಶೀಲ್ ಮೊಂಡಲ್ ಅವರು ಬುದ್ವಾನ್ನ ಬಿಜೆಪಿ ಕಾರ್ಯಕರ್ತರಾಗಿದ್ದರು. 2019 ರ ಲೋಕಸಭೆ ಚುನಾವಣೆಯಲ್ಲಿ ಬೂತ್ ಕಾರ್ಯಕರ್ತರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರ ಸರಣಿ ಹತ್ಯೆಗಳಾಗಿವೆ. ಅಮಿತ್ ಶಾ, ಮೋದಿ ಅವರು ಈ ಹತ್ಯೆಗಳನ್ನು ಖಂಡಿಸಿದ್ದಾರೆ. ಮತದಾನಕ್ಕೆ ಮುನ್ನಾ ನಡೆದ ಅಮಿತ್ ಶಾ ರ್ಯಾಲಿಯಲ್ಲಿ ಸಹ ಹಿಂಸಾಚಾರ ನಡೆದಿತ್ತು.
ಇತ್ತೀಚೆಗಷ್ಟೆ ಸ್ಮೃತಿ ಇರಾನಿ ಆಪ್ತ ಬಿಜೆಪಿ ಮುಖಂಡರರೊಬ್ಬರನ್ನು ಕೊಲೆ ಮಾಡಲಾಗಿತ್ತು. ಅವರ ಶವಯಾತ್ರೆಯಲ್ಲಿ ಸ್ಮೃತಿ ಇರಾನಿ ಅವರು ಪಾಲ್ಗೊಂಡಿದ್ದರು.
ಅಮಿತ್ ಶಾ ಅವರ ಪ್ರಕಾರ ಈವರೆಗೆ 25 ಬಿಜೆಪಿ ಕಾರ್ಯಕರ್ತರು ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಕಾರಣಕ್ಕೆ ಹತ್ಯೆಯಾಗಿದ್ದಾರೆ. ಆದರೆ ಇದನ್ನು ಮಮತಾ ಬ್ಯಾನರ್ಜಿ ತಳ್ಳಿ ಹಾಕಿದ್ದು, ಬಿಜೆಪಿಯು ಉದ್ದೇಶಪೂರ್ವಕವಾಗಿ ಇದನ್ನು ರಾಜಕೀಯಗೊಳಿಸುತ್ತಿದೆ ಎಂದು ಹೇಳಿದೆ.












Click it and Unblock the Notifications