ಬಿರ್ಭುಮ್ ಹಿಂಸಾಚಾರ: 8 ಜನರನ್ನು ಕೊಂದವರ ಬಂಧಿಸಲು ದೀದಿ ಸರ್ಕಾರಕ್ಕೆ ಮೋದಿ ನೆರವು
ಕೋಲ್ಕತ್ತಾ, ಮಾರ್ಚ್ 24: ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯ ರಾಮ್ಪುರಹತ್ನಲ್ಲಿ ನಡೆದಿರುವ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಅಪರಾಧಿಗಳಿಗೆ ತಕ್ಕ ಶಿಕ್ಷೆ ಆಗಬೇಕಿದೆ. ಈ ಕುರಿತು ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಎಲ್ಲ ರೀತಿಯ ಅಗತ್ಯ ನೆರವು ನೀಡುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ರಾಜ್ಯ ಸರ್ಕಾರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದು ಆಶಿಸುವುದಾಗಿ ಹೇಳಿದ ಪ್ರಧಾನಿ ಮೋದಿ, ಇಂತಹ ಅಪರಾಧಿಗಳಿಗೆ ಪ್ರೋತ್ಸಾಹ ನೀಡುವವರನ್ನು ಎಂದಿಗೂ ಕ್ಷಮಿಸಬಾರದು ಎಂದು ಹೇಳಿದರು.
"ಪಶ್ಚಿಮ ಬಂಗಾಳದ ಬಿರ್ಭೂಮ್ ಹಿಂಸಾಚಾರದ ಬಗ್ಗೆ ನಾನು ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಅಪರಾಧಿಗಳನ್ನು ಬಂಧಿಸಲು ಏನೇ ಸಹಾಯ ಬೇಕಾದರೂ ಕೇಂದ್ರದಿಂದ ರಾಜ್ಯಕ್ಕೆ ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡುವ ಭರವಸೆ ನೀಡುತ್ತೇನೆ. ರಾಜ್ಯ ಸರ್ಕಾರವು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ. ಅಂತಹ ಅಪರಾಧಿಗಳನ್ನು ಪ್ರೋತ್ಸಾಹಿಸುವವರನ್ನು ಕ್ಷಮಿಸುವಂತಿಲ್ಲ," ಎಂದು ಪ್ರಧಾನಿ ಮೋದಿ ಹೇಳಿದರು.

ಘಟನಾ ಸ್ಥಳಕ್ಕೆ ಸಿಎಫ್ಎಸ್ಎಲ್ ತಂಡ:
ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯ ಬೊಗ್ಟುಯಿ ಗ್ರಾಮದಲ್ಲಿ ಫೋರೆನ್ಸಿಕ್ ಪರೀಕ್ಷೆಗೆ ಅಗತ್ಯವಾದ ವಸ್ತುಗಳನ್ನು ತಕ್ಷಣವೇ ಸಂಗ್ರಹಿಸಲು ಕೋಲ್ಕತ್ತಾ ಹೈಕೋರ್ಟ್ ಸಿಎಫ್ಎಸ್ಎಲ್ ದೆಹಲಿಗೆ ನಿರ್ದೇಶಿಸಿದ ಗಂಟೆಗಳ ನಂತರ ಪ್ರಧಾನಿಯವರ ಹೇಳಿಕೆ ನೀಡಿದ್ದಾರೆ. ನ್ಯಾಯಮೂರ್ತಿ ಆರ್ ಭಾರದ್ವಾಜ್ ಅವರನ್ನೊಳಗೊಂಡ ಪೀಠವು, ದೆಹಲಿಯ ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯದ (ಸಿಎಫ್ಎಸ್ಎಲ್) ತಂಡವು ಘಟನಾ ಸ್ಥಳಕ್ಕೆ ಭೇಟಿ ನೀಡಿ ಯಾವುದೇ ವಿಳಂಬವಿಲ್ಲದೆ ಪರೀಕ್ಷೆಗಾಗಿ ಮಾದರಿಗಳನ್ನು ಸಂಗ್ರಹಿಸಲು ನಿರ್ದೇಶನ ನೀಡಿದೆ.
ಹಿಂದಿನ ದಿನ, ಹೈಕೋರ್ಟ್ ಗುರುವಾರ ಮಧ್ಯಾಹ್ನ 2 ಗಂಟೆಯೊಳಗೆ ಪ್ರಕರಣದ ವರದಿಯನ್ನು ಸಲ್ಲಿಸುವಂತೆ ಪಶ್ಚಿಮ ಬಂಗಾಳ ಸರ್ಕಾರವನ್ನು ಕೇಳಿದೆ, ಈ ವಿಷಯವನ್ನು ಮತ್ತೆ ವಿಚಾರಣೆಗೆ ತೆಗೆದುಕೊಳ್ಳಲಾಗುವುದು ಎಂದು ಕೋರ್ಟ್ ಹೇಳಿದೆ.
Recommended Video
ಘಟನಾ ಸ್ಥಳದಲ್ಲಿ ಸಿಸಿ ಟಿವಿ ಅಳವಡಿಕೆ:
ಮುಖ್ಯ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ನೇತೃತ್ವದ ವಿಭಾಗೀಯ ಪೀಠ, ಸ್ವಯಂ ಪ್ರೇರಿತ ಅರ್ಜಿ ಮತ್ತು ಪಿಐಎಲ್ಗಳನ್ನು ಕೈಗೆತ್ತಿಕೊಂಡಿದ್ದು, ಜಿಲ್ಲಾ ನ್ಯಾಯಾಧೀಶ ಪುರಬಾ ಬರ್ಧಮಾನ್ ಅವರ ಸಮ್ಮುಖದಲ್ಲಿ ಅಪರಾಧ ನಡೆದ ಸ್ಥಳದಲ್ಲಿ ಸಿಸಿಟಿವಿಗಳನ್ನು ಅಳವಡಿಸಿ, ಮುಂದಿನ ಆದೇಶದವರೆಗೆ ರೆಕಾರ್ಡಿಂಗ್ ಮಾಡುವಂತೆ ಆದೇಶಿಸಿದೆ.
ಅಪರಾಧಿಗಳ ವಿರುದ್ಧ ಶಿಸ್ತುಕ್ರಮ:
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿರ್ಭೂಮ್ ಜಿಲ್ಲೆಯಲ್ಲಿ ಹಿಂಸಾಚಾರದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಗ್ರಾಮ ಪಂಚಾಯತ್ ಉಪಮುಖ್ಯಸ್ಥರ ಹತ್ಯೆಗೈದ ಕೆಲವೇ ದಿನಗಳಲ್ಲಿ ಮನೆಗಳಿಗೆ ಬೆಂಕಿ ಹಚ್ಚಿದ ಬೊಗ್ಟುಯಿ ಗ್ರಾಮಕ್ಕೆ ಗುರುವಾರ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುವುದಾಗಿ ಅವರು ತಿಳಿಸಿದ್ದಾರೆ.
ಘಟನೆಯನ್ನು "ದುರದೃಷ್ಟಕರ" ಎಂದು ಬಣ್ಣಿಸಿದ ಅವರು, "ಇದು ಬಿಜೆಪಿ, ಎಡ ಮತ್ತು ಕಾಂಗ್ರೆಸ್ ತನ್ನ ಸರ್ಕಾರವನ್ನು ಕೆಣಕುವ ಪ್ರಯತ್ನವಾಗಿದೆ. ಬಿರ್ಭುಮ್ ಘಟನೆಗೆ ಕಾರಣರಾದ ಎಲ್ಲರ ವಿರುದ್ಧ ಅವರ ರಾಜಕೀಯ ಹಿನ್ನಲೆಯನ್ನು ಲೆಕ್ಕಿಸದೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಏನಿದು ಬಿರ್ಭುಮ್ ಹಿಂಸಾಚಾರದ ಘಟನೆ?:
ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯ ರಾಮ್ಪುರಹತ್ನಲ್ಲಿ ಮಂಗಳವಾರ ಮುಂಜಾನೆ ಎಂಟು ಜನರು ತಮ್ಮ ಮನೆಗೆ ಬೆಂಕಿ ಹಚ್ಚಲಾಗಿದ್ದು, ಮನೆಯಲ್ಲಿದ್ದ ಹತ್ತು ಜನರ ಪೈಕಿ ಏಳು ಮಂದಿ ಮನೆಯಲ್ಲಿಯೇ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅದರಲ್ಲಿ ಒಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಆಗದೇ ಪ್ರಾಣ ಬಿಟ್ಟಿದ್ದರು.
ಕೋಲ್ಕತ್ತಾದಲ್ಲಿ ಘಟನೆಯ ಕುರಿತು ತಿಳಿಸಿದ ಡಿಜಿಪಿ ಮನೋಜ್ ಮಾಳವೀಯ, ಸೋಮವಾರ ತೃಣಮೂಲ ಕಾಂಗ್ರೆಸ್ ಪಂಚಾಯತ್ ನಾಯಕನ ಹತ್ಯೆ ನಡೆದ ಕೆಲವೇ ಗಂಟೆಯೊಳಗೆ ಈ ಘಟನೆ ನಡೆದಿದೆ ಎಂದು ಮಾಹಿತಿ ನೀಡಿದ್ದರು.












Click it and Unblock the Notifications