ಚುನಾವಣೆ ಹೊಸ್ತಿಲಲ್ಲೇ ದೀದಿಗೆ ಗುಡ್ ಬೈ ಹೇಳಿದ ಮತ್ತೊಬ್ಬ ಟಿಎಂಸಿ ಶಾಸಕ
ಕೊಲ್ಕತ್ತಾ, ಡಿಸೆಂಬರ್ 18: ಪಶ್ಚಿಮ ಬಂಗಾಳದಲ್ಲಿ ಈಗ ಮೂರನೇ ಟಿಎಂಸಿ ಶಾಸಕ ರಾಜೀನಾಮೆ ನೀಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗೆ ಕೇವಲ ಐದು ತಿಂಗಳು ಬಾಕಿ ಇರುವಾಗಲೇ ಒಬ್ಬರಾದ ಮೇಲೊಬ್ಬರಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಪಕ್ಷದ ಶಾಸಕರು ಪಕ್ಷ ತೊರೆಯುತ್ತಿದ್ದಾರೆ.
ಇಬ್ಬರು ಶಾಸಕರು ರಾಜೀನಾಮೆ ನೀಡಿದ ಬೆನ್ನಲ್ಲೇ ಮತ್ತೋರ್ವ ಶಾಸಕರು ಕೂಡಾ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ತೃಣಮೂಲ ಕಾಂಗ್ರೆಸ್ ಪಕ್ಷದ ಶಾಸಕ ಶಿಲ್ಭದ್ರ ದತ್ತ ಇಂದು ಬೆಳಗ್ಗೆ ಟಿಎಂಸಿ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕಾವು ಹೆಚ್ಚಾಗಲಾರಂಭಿಸಿದೆ. ಬಿಜೆಪಿ ಈ ಬಾರಿ ಗೆದ್ದೇ ಗೆಲ್ಲುವ ವಿಶ್ವಾಸ ತೋರಿಸಿದ್ದರೆ, ಇನ್ನೊಂದೆಡೆ ಅಧಿಕಾರದಲ್ಲಿರುವ ಟಿಎಂಸಿ ಅಧಿಕಾರದಿಂದ ಕೆಳಗಿಳಿಯುವ ಮಾತೇ ಇಲ್ಲ ಎಂದಿದ್ದರೆ, ಮತ್ತೊಂದೆಡೆ ಟಿಎಂಸಿ ನಾಯಕರು ಪಕ್ಷ ತ್ಯಜಿಸಿ ಬಿಜೆಪಿಯತ್ತ ಮುಖಮಾಡುತ್ತಿದ್ದಾರೆ.
ಇದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ದೊಡ್ಡ ಹಿನ್ನಡೆಯಾದಂತಿದೆ.ಸುವೇಂದು ಅಧಿಕಾರಿ, ಜಿತೇಂದ್ರ ತಿವಾರಿ, ಕರ್ನಲ್ ದೀಪತಂಗು ಚೌಧರಿ ಕೂಡ ಮಮತಾಗೆ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ.

ಶಿಲ್ಭದ್ರ ದತ್ತ ಟಿಎಂಸಿಗೆ ರಾಜೀನಾಮೆ
ತೃಣಮೂಲ ಕಾಂಗ್ರೆಸ್ ಪಕ್ಷದ ಶಾಸಕ ಶಿಲ್ಭದ್ರ ದತ್ತ ಇಂದು ಬೆಳಗ್ಗೆ ಟಿಎಂಸಿ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಿನ್ನೆಯಷ್ಟೇ ಸುವೇಂದು ಅಧಿಕಾರಿ ಮತ್ತು ಜಿತೇಂದ್ರ ತಿವಾರಿ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂಗಾಳ ಭೇಟಿ ಹಿಂದಿಂದೆ ಟಿಎಂಸಿ ಶಾಸಕರು ರಾಜೀನಾಮೆ ಸಲ್ಲಿಸುತ್ತಿದ್ದಾರೆ.

ಸುವೇಂದು ಬಿಜೆಪಿಗೆ ಸೇರ್ಪಡೆ ಸಾಧ್ಯತೆ
2016ರ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸುವೇಂದು ಅಧಿಕಾರಿಯನ್ನು ಬಿಜೆಪಿ ಭೇಟಿಯಾಡಿದ ಬೆನ್ನಲ್ಲೇ, ಇನ್ನೂ ಹಲವು ಅತೃಪ್ತ ಶಾಸಕರು ಅಮಿತ್ ಶಾ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆ ಹೆಚ್ಚಾಗಿದೆ.

ಸುವೇಂದು ಹಿಡಿತದಲ್ಲಿ 50 ಶಾಸಕರು
ಸುವೇಂದು ಅವರ ಹಿಡಿತದಲ್ಲಿ 50 ಶಾಸಕರಿದ್ದಾರೆ ಎನ್ನಲಾಗಿದೆ. ಒಂದು ವೇಳೆ ನಾಯಕನ ದಾರಿ ಹಿಡಿದು ಎಲ್ಲಾ ಶಾಸಕರು ಪಕ್ಷ ತ್ಯಜಿಸಿದರೆ ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಲಿದ್ದು, ಟಿಎಂಸಿ ಕನಸು ನುಚ್ಚುನೂರಾಗಲಿದೆ ಎನ್ನಲಾಗಿದೆ.

ಟಿಎಂಸಿ ಪ್ರಾಥಮಿಕ ಸದಸ್ಯತ್ವ
ಸಚಿವ ಸ್ಥಾನಕ್ಕೆ ಮತ್ತು ಶಾಸಕ ಸ್ಥಾನಕ್ಕೆರಾಜೀನಾಮೆ ನೀಡಿದ್ದ ಟಿಎಂಸಿ ಪಕ್ಷದ ಹಿರಿಯ ನಾಯಕ ಸುಭೇಂದು ಅಧಿಕಾರಿ ಅವರು ತೃಣಮೂಲ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ. ಟಿಎಂಸಿ ಮುಖ್ಯಸ್ಥೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಪತ್ರ ಬರೆದು ತಮ್ಮ ರಾಜೀನಾಮೆ ನಿರ್ಧಾರವನ್ನು ತಿಳಿಸಿದ್ದಾರೆ. ಪೂರ್ಬ ಮೇದಿನಿಪುರ್ ಜಿಲ್ಲೆಯ ನಂದೀಗ್ರಾಮ್ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ಸುವೇಂದು ಅವರು ರಾಜೀನಾಮೆ ನೀಡಿದ್ದರು.

ಮೂವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಕೇಂದ್ರ ಸರ್ಕಾರ, ಪಶ್ಚಿಮ ಬಂಗಾಳ ಸರ್ಕಾರದ ಆಕ್ಷೇಪಣೆಯನ್ನು ಕಡೆಗಣಿಸಿ ಬಂಗಾಳದ ಮೂವರು ಐಪಿಎಸ್ ಅಧಿಕಾರಿಗಳನ್ನು ಕೇಂದ್ರ ಸೇವೆಗಳಿಗೆ ವರ್ಗಾಯಿಸಿ ಗುರುವಾರ ಆದೇಶ ಹೊರಡಿಸಿದೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಬೆಂಗಾವಲು ದಾಳಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ಪಶ್ಚಿಮ ಬಂಗಾಳ ಸರ್ಕಾರದ ನಡುವಿನ ಜಗಳ ಮುಂದುವರೆದಿದ್ದು, ಕೇಂದ್ರ ಗೃಹ ಸಚಿವಾಲಯ(ಎಂಎಚ್ಎ) ಇಂದು ಬಂಗಾಳದ ಮೂವರು ಐಪಿಎಸ್ ಅಧಿಕಾರಿಗಳಾದ ರಾಜೀವ್ ಮಿಶ್ರಾ(ಐಜಿ ದಕ್ಷಿಣ ಬಂಗಾಳ), ಪ್ರವೀಣ್ ತ್ರಿಪಾಠಿ(ಡಿಐಜಿ ಪ್ರೆಸಿಡೆನ್ಸಿ ರೇಂಜ್) ಮತ್ತು ಭೋಲನಾಥ್ ಪಾಂಡೆ(ಎಸ್ಪಿ, ಡೈಮಂಡ್ ಹಾರ್ಬರ್) ಅವರನ್ನು ಕೇಂದ್ರ ಸೇವೆಗೆ ನಿಯೋಜಿಸಿದೆ. ಈ ಮೂವರು ಅಧಿಕಾರಿಗಳು ಜೆಪಿ ನಡ್ಡಾ ಅವರ ಭದ್ರತಾ ಉಸ್ತುವಾರಿ ವಹಿಸಿಕೊಂಡಿದ್ದರು.

ಐಪಿಎಸ್ ಅಧಿಕಾರಿಗಳ ವರ್ಗಾವಣೆಗೆ ಆಕ್ಷೇಪಣೆ
ಕೇಂದ್ರದ ಈ ಕ್ರಮ "ರಾಜ್ಯದ ಅಧಿಕಾರ ವ್ಯಾಪ್ತಿಯನ್ನು ಅತಿಕ್ರಮಿಸುವ" ಪ್ರಯತ್ನ. "ರಾಜ್ಯದ ಆಕ್ಷೇಪಣೆಯ ಹೊರತಾಗಿಯೂ ಪಶ್ಚಿಮ ಬಂಗಾಳದ ಮೂವರು ಐಪಿಎಸ್ ಅಧಿಕಾರಿಗಳನ್ನು ಕೇಂದ್ರ ಸೇವೆಗೆ ನಿಯೋಜನೆ ಮಾಡಿರುವ ಆದೇಶ ಐಪಿಎಸ್ ಕೇಡರ್ ರೂಲ್ 1954 ರ ತುರ್ತು ನಿಬಂಧನೆಯ ದುರುಪಯೋಗವಾಗಿದೆ ಎಂದು ದೀದಿ ಟ್ವೀಟ್ ಮಾಡಿದ್ದಾರೆ. ಜೆಪಿ ನಡ್ಡಾ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಪ್ರತಿನಿಧಿಸುವ ಡೈಮಂಡ್ ಹಾರ್ಬರ್ ಲೋಕಸಭಾ ಕ್ಷೇತ್ರಕ್ಕೆ ಹೋಗುವ ಸಂದರ್ಭದಲ್ಲಿ ನಡ್ಡಾ ಬೆಂಗಾವಲು ಮೇಲೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ದಾಳಿ ನಡೆಸಿದ್ದರು.












Click it and Unblock the Notifications