ಶಿಕ್ಷಕರ ನೇಮಕಾತಿ ಹಗರಣ: ಅರ್ಪಿತಾ ಮುಖರ್ಜಿ ಮನೆಯಿಂದ 4 ಐಷಾರಾಮಿ ಕಾರು ನಾಪತ್ತೆ!
ಕೋಲ್ಕತ್ತಾ, ಜುಲೈ 29: ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣ ಬಗೆದಷ್ಟು ಆಳವಾಗುತ್ತಿದೆ. 50 ಕೋಟಿ ರುಪಾಯಿ ನಗದು, 4 ಕೆ.ಜಿ. ಚಿನ್ನವನ್ನು ಪಶ್ಚಿಮ ಬಂಗಾಳದ ವಜಾಗೊಂಡಿರುವ ಸಚಿವ ಪಾರ್ಥ ಚಟರ್ಜಿ ಆಪ್ತೆ ಅರ್ಪಿತಾ ಮುಖರ್ಜಿಗೆ ಸೇರಿದ ಫ್ಲಾಟ್ಗಳಿಂದ ವಶಪಡಿಸಿಕೊಳ್ಳಲಾಗಿದೆ.
ಆದರೆ ಹಗರಣ ಬಯಲಿಗೆ ಬರುತ್ತಿದ್ದಂತೆ ಅವರ ಮನೆಯಿಂದ ನಾಲ್ಕು ಐಷಾರಾಮಿ ಕಾರುಗಳು ನಾಪತ್ತೆಯಾಗಿವೆ ಎಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳು ತಿಳಿಸಿದ್ದಾರೆ. ಅರ್ಪಿತಾ ಮುಖರ್ಜಿ ಬಂಧನದ ವೇಳೆ ಇ.ಡಿ ಅಧಿಕಾರಿಗಳು ಒಂದು ಕಾರನ್ನು ಮಾತ್ರ ವಶಕ್ಕೆ ಪಡೆದಿದ್ದರು.
ಜುಲೈ 23 ರಂದು ಜಾರಿ ನಿರ್ದೇಶನಾಲಯ (ಇಡಿ) ಅರ್ಪಿತಾ ಮುಖರ್ಜಿ ಅವರ ಫ್ಲಾಟ್ನಿಂದ 21 ಕೋಟಿ ರೂಪಾಯಿಗೂ ಹೆಚ್ಚು ನಗದು, ಕೋಟ್ಯಂತರ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡ ನಂತರ ಅರ್ಪಿತಾ ಮುಖರ್ಜಿಯನ್ನು ಬಂಧಿಸಲಾಗಿತ್ತು.
ತನಿಖಾ ಸಂಸ್ಥೆಯು ಬುಧವಾರ ಸಂಜೆ ಮುಖರ್ಜಿಯ ಮತ್ತೊಂದು ಫ್ಲಾಟ್ನಿಂದ 27.9 ಕೋಟಿ ರೂಪಾಯಿ ಮೌಲ್ಯದ ಹಣ ಮತ್ತು ಚಿನ್ನಾಭರಣಗಳು ಮತ್ತು ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊಂಡಿತ್ತು. ವಶಪಡಿಸಿಕೊಂಡ ನಗದು ಪಾರ್ಥ ಚಟರ್ಜಿ ಅವರಿಗೆ ಸೇರಿದ್ದು ಎಂದು ಅರ್ಪಿತಾ ಹೇಳಿಕೆ ನೀಡಿದ್ದರು.

ಬಂಧಿಸಿದ ದಿನವೇ ಕಾರುಗಳು ನಾಪತ್ತೆ
ಇ.ಡಿ ಮೂಲಗಳ ಪ್ರಕಾರ, ಡೈಮಂಡ್ ಸಿಟಿ ಸೌತ್ ಕಾಂಪ್ಲೆಕ್ಸ್ನಲ್ಲಿರುವ ಆಕೆಯ ಫ್ಲಾಟ್ನಲ್ಲಿ ನಿಲ್ಲಿಸಲಾಗಿದ್ದ ಆಡಿ ಎ4, ಹೋಂಡಾ ಸಿಟಿ, ಹೋಂಡಾ ಸಿಆರ್ವಿ ಮತ್ತು ಮರ್ಸಿಡಿಸ್ ಬೆಂಜ್ ಕಾರುಗಳಲ್ಲಿ ಅಪಾರ ಪ್ರಮಾಣದ ಹಣವನ್ನು ಅಡಗಿಸಿಡಲಾಗಿತ್ತು. ಆಕೆಯನ್ನು ಬಂಧಿಸಿದ ರಾತ್ರಿಯೇ ಕಾರುಗಳು ನಾಪತ್ತೆಯಾಗಿವೆ ಅವರು ಆರೋಪಿಸಿದ್ದಾರೆ.
ಅರ್ಪಿತಾ ಮುಖರ್ಜಿಯವರ ಬಂಧನದ ಸಂದರ್ಭದಲ್ಲಿ ಇ.ಡಿ ಕೇವಲ ಒಂದು ಬಿಳಿ ಬಣ್ಣದ ಮರ್ಸಿಡಿಸ್ ಕಾರನ್ನು ಮಾತ್ರ ವಶಪಡಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಕಾರುಗಳಲ್ಲಿತ್ತಾ ಅಪಾರ ಹಣ?
ಈವರೆಗೂ ಅರ್ಪಿತಾ ಮುಖರ್ಜಿಗೆ ಸೇರಿದ ಎರಡು ಫ್ಲಾಟ್ಗಳಲ್ಲೇ ಅಪಾರ ಪ್ರಮಾಣದ ಹಣ ಪತ್ತೆಯಾಗಿರುವುದು. ಆಕೆಯ ಬಂಧನದ ದಿನವೇ ನಾಲ್ಕು ಕಾರುಗಳು ನಾಪತ್ತೆಯಾಗಿರುವ ಬಗ್ಗೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.
ನಾಪತ್ತೆಯಾಗಿರುವ ಕಾರುಗಳಲ್ಲಿ ಅಪಾರ ಪ್ರಮಾಣದ ನಗದು, ಚಿನ್ನಾಭರಣ ಇತ್ತಾ ಎನ್ನುವ ಅನುಮಾನ ಈಗ ಇ.ಡಿ ಅಧಿಕಾರಿಗಳನ್ನು ಕಾಡುತ್ತಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ನಾಪತ್ತೆಯಾಗಿರುವ ಕಾರುಗಳನ್ನು ಪತ್ತೆಹಚ್ಚಲು ಅನೇಕ ದಾಳಿಗಳನ್ನು ನಡೆಸುತ್ತಿದೆ.

ಸಚಿವ ಸ್ಥಾನ ಕಳೆದುಕೊಂಡ ಪಾರ್ಥ ಚಟರ್ಜಿ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗುರುವಾರ ಪಾರ್ಥ ಚಟರ್ಜಿ ಅವರನ್ನು ಸಚಿವ ಸ್ಥಾನದಿಂದ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷದ ಎಲ್ಲಾ ಹುದ್ದೆಗಳಿಂದ ವಜಾಗೊಳಿಸಿದ್ದಾರೆ. ಶಿಕ್ಷಕರ ನೇಮಕಾತಿ ಹಗರಣದಲ್ಲಿ ಬಂಧಿಸಿದ ಐದು ದಿನಗಳ ನಂತರ ತಮ್ಮ ಸಚಿವ ಸ್ಥಾನ ಕಳೆದುಕೊಂಡಿದ್ದಾರೆ.
ಮಮತಾ ಬ್ಯಾನರ್ಜಿ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಕೈಗಾರಿಕಾ ಸಚಿವ ಖಾತೆಯನ್ನು ಹೊಂದಿದ್ದ ಚಟರ್ಜಿ ಅವರನ್ನು ಜುಲೈ 23 ರಂದು ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಪಟ್ಟಂತೆ ತನಿಖೆಗಾಗಿ ಜಾರಿನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದ್ದರು. ಅಕ್ರಮ ನೇಮಕಾತಿ ನಡೆದಾಗ ಪಾರ್ಥ ಚಟರ್ಜಿ ಪಶ್ಚಿಮ ಬಂಗಾಳದ ಶಿಕ್ಷಣ ಸಚಿವರಾಗಿದ್ದರು.

ಆಗಸ್ಟ್ 3 ರವರೆಗೆ ಇಬ್ಬರಿಗೂ ಇ.ಡಿ ಕಸ್ಟಡಿ
ಪಾರ್ಥ ಚಟರ್ಜಿ ಮತ್ತು ಅರ್ಪಿತಾ ಮುಖರ್ಜಿ ಇಬ್ಬರನ್ನೂ ಆಗಸ್ಟ್ 3 ರವರೆಗೆ ಇ. ಡಿ ಕಸ್ಟಡಿಗೆ ಕಳುಹಿಸಲಾಗಿದೆ.
ಕಲ್ಕತ್ತಾ ಹೈಕೋರ್ಟಿನ ನಿರ್ದೇಶನದಂತೆ ಸಿಬಿಐ, ಪಶ್ಚಿಮ ಬಂಗಾಳದ ಎಸ್ಎಸ್ಸಿಯ ಶಿಫಾರಸುಗಳ ಮೇರೆಗೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ಪರಿಶೀಲಿಸುತ್ತಿದೆ. ಆಪಾದಿತ ಹಗರಣದಲ್ಲಿ ಮನಿಲಾಂಡರಿಂಗ್ ಕುರಿತು ಇ.ಡಿ ತನಿಖೆ ಮಾಡುತ್ತಿದೆ.












Click it and Unblock the Notifications