ಕೋಲಾರ ವಿಶೇಷ; ಉದ್ಘಾಟನೆ ಭಾಗ್ಯ ಕಂಡಿಲ್ಲ ಈ ರೈಲು ನಿಲ್ದಾಣ!
ಕೋಲಾರ, ಮಾರ್ಚ್ 22: ತೂರಾಂಡಹಳ್ಳಿ ಗ್ರಾಮದ ಬಳಿ ಇರುವ ರೈಲ್ವೆ ನಿಲ್ದಾಣ ಇನ್ನೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಗ್ರಾಮಕ್ಕೆ ಹೊಂದಿಕೊಂಡಿರುವ ಕೋಲಾರ ಹಾಗೂ ಶ್ರೀನಿವಾಸಪುರ ರೈಲ್ವೆ ಮಾರ್ಗದ ನಡುವೆ ಬರುವ ರೈಲು ನಿಲ್ದಾಣಕ್ಕೆ ಮೊದಲಿಗೆ ದೂರದಲ್ಲಿರುವ ಗೊಟ್ಟಹಳ್ಳಿ ರೈಲ್ವೆ ನಿಲ್ದಾಣ ಎಂದು ನಾಮಕರಣ ಮಾಡಲು ಪ್ರಯತ್ನಿಸಲಾಗಿತ್ತು.
ತೂರಾಂಡಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ರೈಲು ನಿಲ್ದಾಣಕ್ಕೆ ತೂರಾಂಡಹಳ್ಳಿ ಎಂದು ನಾಮಕರಣ ಮಾಡಬೇಕು ಎಂಬ ವಿಚಾರದಲ್ಲಿ ಆರು ವರ್ಷದ ಹಿಂದೆ ಎರಡು ಗ್ರಾಮಗಳ ನಡುವೆ ಉಂಟಾಗಿದ್ದ ವಿವಾದದಿಂದಾಗಿ ರೈಲ್ವೆ ನಿಲ್ದಾಣ ಉದ್ಘಾಟನೆಯಾಗಿಲ್ಲ.
ಈ ರೈಲು ನಿಲ್ದಾಣದಲ್ಲಿ ಶೌಚಾಲಯ, ಕುಡಿವ ನೀರಿನ ವ್ಯವಸ್ಥೆ, ಪ್ರಯಾಣಿಕರಿಗಾಗಿ ಆಸನದ ವ್ಯವಸ್ಥೆ, ಗ್ರಾಮದಿಂದ ರೈಲ್ವೆ ನಿಲ್ದಾಣಕ್ಕೆ ಬರಲು ಸ್ಕೈವಾಕ್, ಟಿಕೆಟ್ ಕೌಂಟರ್ ಸೇರಿ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ.

ಡಿಜಿಟಲ್ ಆಕ್ಸೆಲ್ ಕೌಂಟರ್, ರಿಸೆಟ್ ಬಾಕ್ಸ್, ಸಿಗ್ನಲ್ ಪೋಸ್ಟ್ ಟೆಲಿಫೋನ್, ಟೋಕನ್ಲೆಸ್ ಬ್ಲಾಕ್ ಇನ್ಸ್ಟ್ರುಮೆಂಟ್, ಟ್ರ್ಯಾಕ್ ಹ್ಯಾಂಡಲ್ ಸೇರಿ ಕೋಟ್ಯಾಂತರ ರೂಪಾಯಿಯ ಉಪಕರಣಗಳಿವೆ. ರಿಲೇ ಕೊಠಡಿ, ಯುಪಿಎಸ್ ಕೊಠಡಿ, ಜನರೇಟರ್ ಕೊಠಡಿಗಳು ಇಲ್ಲಿದ್ದು, ಅದರೊಳಗೆ ಬೇಕಾದ ಎಲ್ಲಾ ಉಪಕರಣಗಳಿವೆ. ಎಲ್ಲವೂ ಧೂಳು ತಿನ್ನುತ್ತಿವೆ.
ಮಲ್ಲಿಕಾರ್ಜುನ ಖರ್ಗೆ ರೈಲ್ವೆ ಸಚಿವರಾಗಿದ್ದ ವೇಳೆ ರೈಲು ಸಂಚಾರಕ್ಕೆ ಚಾಲನೆ ನೀಡಲಾಗಿದೆ. ಕೋಲಾರದಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ಬೆಂಗಳೂರಿಗೆ ಹಾಗೂ ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ಕೋಲಾರಕ್ಕೆ ಬರುವ ರೈಲು ದಿನಕ್ಕೆ ಎರಡು ಬಾರಿ ಈ ನಿಲ್ದಾಣಕ್ಕೆ ಬರುತ್ತದೆ.
ಆದರೆ, ಸ್ಥಳೀಯ ಜನಪ್ರತಿನಿಧಿಗಳು, ಕೆಲವು ರೈಲ್ವೆ ಇಲಾಖೆ ಅಧಿಕಾರಿಗಳು ನಿಲ್ದಾಣಕ್ಕೆ ಹೆಸರಿಡುವ ವಿಚಾರದಲ್ಲಿ ಮಾಡಿದ ಎಡವಟ್ಟು ನಿಲ್ದಾಣವನ್ನು ಇಲಾಖೆ ನಿರ್ಲ್ಯಕ್ಷತನದಿಂದ ನೋಡುವಂತೆ ಮಾಡಿದೆ. ಒಂದು ವರ್ಷದ ಹಿಂದೆ ಆ ಹೆಸರಿನ ವಿವಾದಕ್ಕೂ ತೆರೆ ಎಳೆದು ತೊರಾಂಡಹಳ್ಳಿ ರೈಲು ನಿಲ್ದಾಣ ಎಂದು ಹೆಸರಿಟ್ಟಾಗಿದೆ.
ಆದರೂ ಸಹ ರೈಲ್ವೆ ಇಲಾಖೆ ಅಧಿಕಾರಿಗಳು ಮಾತ್ರ ಈ ರೈಲು ನಿಲ್ದಾಣವನ್ನು ಲೋಕಾರ್ಪಣೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಸುಸಜ್ಜಿತವಾಗಿ ನಿರ್ಮಾಣಗೊಂಡ ರೈಲು ನಿಲ್ದಾಣ ಅನೈತಿಕ ಚಟುವಟಿಕೆಗಳ ಹಾಗೂ ಕುಡುಕರ ಅಡ್ಡೆಯಾಗಿದೆ.
ಟಿಕೆಟ್ ನೀಡುವವರು ಇಲ್ಲ, ಸ್ಟೇಷನ್ ಮಾಸ್ಟರ್, ಸಿಬ್ಬಂದಿಯೂ ಇಲ್ಲಿಲ್ಲ. ಹಾಗಾಗಿ, ಜನರು ರೈಲಿನಲ್ಲಿ ಪ್ರಯಾಣ ಮಾಡುವುದಕ್ಕೆ ಬರುವುದಿಲ್ಲ. ಆದರೆ, ರೈಲು ನಿಲ್ದಾಣದಲ್ಲಿ ಅಗತ್ಯ ವ್ಯವಸ್ಥೆ ಮಾಡಿದಲ್ಲಿ ಈ ಭಾಗದ ಸುಮಾರು 20 ರಿಂದ 30 ಹಳ್ಳಿಗಳ ಜನರ ಪ್ರಯಾಣಕ್ಕೆ ಅನುಕೂಲವಾಗಲಿದೆ.












Click it and Unblock the Notifications