ನನ್ನ ತಾಳ್ಮೆಗೂ ಮಿತಿಯಿದೆ: ಸ್ವಪಕ್ಷೀಯ ಶಾಸಕನಿಗೆ ಕೆ.ಎಚ್. ಮುನಿಯಪ್ಪ ಎಚ್ಚರಿಕೆ
ಕೋಲಾರ, ಮಾರ್ಚ್ 31: ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಎಷ್ಟು ಬಣಗಳಿವೆಯೋ, ಆದರೆ ಕೋಲಾರದಲ್ಲಿ ಮಾತ್ರ ಸ್ಪಷ್ಟವಾಗಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮತ್ತು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಎನ್ನುವ ಎರಡು ಬಣಗಳಿವೆ. ಬಹಿರಂಗವಾಗಿಯೇ ಒಬ್ಬರು ಇನ್ನೊಬ್ಬರ ವಿರುದ್ದ ಆಕ್ರೋಶ ಹೊರಹಾಕಿದ ಉದಾಹರಣೆಗಳು ಸಾಕಷ್ಟು.
ಸತತವಾಗಿ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುತ್ತಿದ್ದ ಕೆ.ಎಚ್.ಮುನಿಯಪ್ಪ ಕಳೆದ ಚುನಾವಣೆಯಲ್ಲಿ ಬಿಜೆಪಿಯ ಮುನಿಸ್ವಾಮಿ ವಿರುದ್ದ ಸೋಲುಂಡಿದ್ದರು. ನನ್ನ ಸೋಲಿಗೆ ರಮೇಶ್ ಕುಮಾರ್ ನೇತೃತ್ವದ ಸ್ವಪಕ್ಷೀಯರ ತಂಡವೇ ಕಾರಣ ಎಂದು ಮುನಿಯಪ್ಪ ಅದೆಷ್ಟೋ ಬಾರಿ ಅಸಮಾಧಾನ ವ್ಯಕ್ತ ಪಡಿಸಿದ್ದರು. ಈಗ, ಮಾಜಿ ಸ್ಪೀಕರ್ ವಿರುದ್ದ ಮತ್ತೆ ಮುನಿಯಪ್ಪ ಹರಿಹಾಯ್ದಿದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಮುನಿಯಪ್ಪ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. "ಏ ರಮೇಶ್ ಕುಮಾರ್.. ಅತಿ ಬುದ್ದಿವಂತಿಕೆ ತೋರಿಸಬೇಡ. ಕಳೆದ ಚುನಾವಣೆಯಲ್ಲಿ ನನ್ನ ಸೋಲಿಗೆ ನೀನೇ ಕಾರಣ ಎನ್ನುವುದು ನನಗೆ ಗೊತ್ತಿದೆ"ಎಂದು ಕಿಡಿಕಾರಿದ್ದಾರೆ.
"ನನ್ನ ತಾಳ್ಮೆಗೂ ಒಂದು ಮಿತಿಯಿದೆ ಎನ್ನುವುದನ್ನು ತಿಳಿದುಕೋ. ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ತಲೆಮೇಲೆ ಕೂರಿಸಿಕೊಂಡು ಗೆಲ್ಲಿಸಿದ್ದೀಯಾ. ಈಗ ಮತ್ತೆ ಕಾಂಗ್ರೆಸ್ಸಿನಲ್ಲಿ ನಾಟಕವಾಡುತ್ತಿದ್ದೀಯಾ. ನಿನ್ನ ಆಟ ಹೆಚ್ಚು ದಿನ ನಡೆಯುವುದಿಲ್ಲ"ಎಂದು ಮುನಿಯಪ್ಪ, ರಮೇಶ್ ಕುಮಾರ್ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.
"ನಿನ್ನ ಆಟ ಎಲ್ಲಾ ಗೊತ್ತಿದ್ದರೂ ಹೈಕಮಾಂಡ್ ಸೂಚನೆ ಕೊಟ್ಟ ಹಿನ್ನಲೆಯಲ್ಲಿ ಸುಮ್ಮನಿದ್ದೆ. ಶ್ರೀನಿವಾಸಪುರದಿಂದಲೇ ನಿನ್ನ ಒಂದೊಂದು ಕಥೆಯನ್ನು ಬಿಚ್ಚಿಡುತ್ತೇನೆ. ಕಾಂಗ್ರೆಸ್ ಸರಿಯಿಲ್ಲ ಎಂದು ಹಿಂದೆ ದೇವೇಗೌಡರ ಬಳಿ ಹೋದೆ. ನಂತರ ಅವರನ್ನೇ ದೂರಲು ಆರಂಭಿಸಿದೆ"ಎಂದು ಮುನಿಯಪ್ಪ ಕಿಡಿಕಾರಿದ್ದಾರೆ.
"ಈಗ ಕಾಂಗ್ರೆಸ್ಸಿಗೆ ಬಂದಿದ್ದೀಯಾ, ಇಲ್ಲಿ ಒಬ್ಬರ ಮೇಲೆ ಇನ್ನೊಬ್ಬರನ್ನು ಎತ್ತಿಕಟ್ಟಿ ತಮಾಷೆ ನೋಡುತ್ತಿದ್ದೀಯಾ. ರಾಜಕೀಯದಲ್ಲಿ ಈಗಾಗಲೇ ಮುಳುಗುತ್ತಿದ್ದೀಯಾ, ಇನ್ನು ಎಷ್ಟು ಜನರನ್ನು ಮುಳುಗಿಸುತ್ತೀಯಾ. ಶ್ರೀನಿವಾಸಪುರದ ಬಹಿರಂಗ ಸಭೆಯಲ್ಲೇ ನಿನ್ನ ಬಂಡವಾಳವನ್ನು ಬಯಲು ಮಾಡುತ್ತೇನೆ"ಎಂದು ಕೆ.ಎಚ್. ಮುನಿಯಪ್ಪನವರು ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.